ಹಾಸನ: ರಸ್ತೆ ಅಪಘಾತದಲ್ಲಿ ಬಿಜೆಪಿ ಮುಖಂಡ ಮೃತ್ಯು

Update: 2018-05-26 12:23 GMT

ಹಾಸನ,ಮೇ.26: ಕಾರು ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಧರ್ಮ ಪ್ರಕಾಶ್(48) ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಮಗಳಿಗೆ ಗಂಭಿರ ಗಾಯಗಳಾದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಹಾಸನ ನಗರದ ಶ್ರೀ ಸಂಗಮೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಧರ್ಮ ಪ್ರಕಾಶ್ ಪುತ್ರಿ ಪ್ರಿಯಾಂಕ ಅವರು ನಗರದ ಹೊರ ವಲಯ ಬೆಂಗಳೂರು ರಸ್ತೆಯಲ್ಲಿರುವ ಹೆಚ್.ಕೆ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದರಿಂದ ಅಂಕಪಟ್ಟಿ ತರಲೆಂದು ಕಾಲೇಜಿಗೆ ತೆರಳಿ ವಾಪಸ್ ಹಾಸನಕ್ಕೆ ತೆರಳುವಾಗ ಬೆಂಗಳೂರಿನ ಕಡೆಯಿಂದ ಎನ್.ಹೆಚ್.75 ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಇವರ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಧರ್ಮ ಪ್ರಕಾಶ್ ಮೇಲೆ ಕಾರು ಹರಿದಿದ್ದು, ಮಗಳು ಕೆಳಗೆ ಬಿದ್ದಿದರಿಂದ ಆಕೆಗೂ ಗಂಭೀರವಾದ ಗಾಯಗಳಾಗಿದೆ.

ಅಪಘಾತದಲ್ಲಿ ಕಾರು ವೇಗದ ರಭಸಕ್ಕೆ ಎಡ ಭಾಗದಲ್ಲಿ ರಸ್ತೆಯಿಂದ ಸುಮಾರು ಮುನ್ನೂರು ಮೀಟರ್ ದೂರದಲ್ಲಿ ಕೆಳಗೆ ಬಿದ್ದಿದ್ದು, ಕಾರಿನಲ್ಲಿದ್ದ ಮೂವರಿಗೂ ಕೂಡ ಗಾಯಗಳಾಗಿದೆ. ಧರ್ಮ ಪ್ರಕಾಶ್ ಪುತ್ರಿ ಪ್ರಿಯಾಂಕ ಹಾಗೂ ಕಾರಿನಲ್ಲಿದ್ದ ಮೂವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿದ್ದು, ಅಪಘಾತದ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ. ನಂತರ ಮೃತ ಧರ್ಮ ಪ್ರಕಾಶ್ ದೇಹವನ್ನು ನಗರದ ಸರಕಾರಿ ಆಸ್ಪತ್ರೆ ಶವಗಾರಕ್ಕೆ ತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News