ಕೋಲಾರ ಟಮಕದ ಮಹಾವಿದ್ಯಾಲಯದಲ್ಲಿ ಜೂ.1 ರಿಂದ ಹಲಸು ಮಹೋತ್ಸವ
ಬೆಂಗಳೂರು, ಮೇ 26: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಸಹಕಾರದೊಂದಿಗೆ ‘ಹಲಸು ಮಹೋತ್ಸವ’ ವನ್ನು ಜೂ.1 ಮತ್ತು 2 ರಂದು ಕೋಲಾರದ ಟಮಕ ಬಳಿಯಿರುವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಎಲ್.ಮಹೇಶ್ವರ್, ಹಲಸು ಬರ ಸಹಿಷ್ಣುವಾದುದಾಗಿದ್ದು, ಮಳೆಯಾಶ್ರಿತ ಬೇಸಾಯಕ್ಕೆ ಶ್ರೇಷ್ಠ ಬೆಳೆಯಾಗಿದೆ. ಈ ನಿಟ್ಟಿನಲ್ಲಿ ಹಲಸು ಹಣ್ಣಿನ ಉತ್ತೇಜನಕ್ಕಾಗಿ ಹಾಗೂ ರೈತರನ್ನು ಆರ್ಥಿಕ ಸಬಲರನ್ನಾಗಿಸಿ, ಉದ್ದಿಮೆಯ ಮಹತ್ವ ಪಡೆದು, ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಮಹೋತ್ಸವದಲ್ಲಿ ಹಲಸಿನ ಇತಿಹಾಸ, ವೈವಿಧ್ಯತೆ, ಶಿಕ್ಷಣ ಹಾಗೂ ಹಲಸಿನ ತೋಟಗಳನ್ನು ಬೆಳೆಸಲು ಅಗತ್ಯವಾದ ಮಾರ್ಗದರ್ಶನ ನೀಡಲಾಗುತ್ತದೆ. ಅಲ್ಲದೆ, ಇಲ್ಲಿ ವಿವಿಧ ಹಲಸಿನ ಭಕ್ಷಗಳು, ಮೌಲ್ಯವರ್ದನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಒಂದೇ ಸೂರಿನಡಿ ಹಲಸಿನ ವಿವಿಧ ತಳಿಗಳು, ಉತ್ಪನ್ನಗಳು, ವಿಶೇಷ ಅಥವಾ ಅಪರೂಪದ ಆಕರ್ಷಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಹಲಸಿನ ವೈಜ್ಞಾನಿಕ ಬೇಸಾಯ, ಮುಕುಟ ನಿರ್ವಹಣೆ, ಸಸ್ಯ ಸಂರಕ್ಷಣೆ, ಕೊಯ್ಲು ಮತ್ತು ಮಾಗುವಿಕೆ ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಲಾಗುತ್ತದೆ. ಒಟ್ಟಾರೆಯಾಗಿ ಮಹೋತ್ಸವವು ದೇಶದಲ್ಲಿ ತೋಟಗಾರಿಕೆ ಬೆಳೆ ಆಧಾರಿತ ಪ್ರವಾಸೋದ್ಯಮ ಪ್ರಚಾರಕ್ಕೆ ವೇದಿಕೆಯಾಗಲಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಚಾರಗೋಷ್ಠಿಗಳು, ಮೇಳಗಳು, ಮಾಹಿತಿ ತಂತ್ರಜ್ಞಾನಗಳ ಮೂಲಕ ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರೈತರು, ಗ್ರಾಹಕರು, ಉದ್ಯಮಿಗಳು ಹಾಗೂ ಆಸಕ್ತ ಸಂಘ-ಸಂಸ್ಥೆಗಳಿಗೆ ಬೇಕಾಗುವ ಸಮಗ್ರ ತೋಟಗಾರಿಕಾ ತಂತ್ರಜ್ಞಾನವನ್ನು ತಲುಪುವಂತೆ ತಾಂತ್ರಿಕ ಸಲಹಾ ವೇದಿಕೆಯನ್ನು ನಿರ್ಮಾಣ ಮಾಡಿದ್ದು, ವಿಶೇಷವಾಗಿ ಹಾರ್ಟಿ ಆಫ್ ತಂತ್ರಜ್ಞಾನ ಮುಖಾಂತರ ರೈತರಿಗೆ ಮತ್ತು ಉದ್ದಿಮೆದಾರರಿಗೆ ಅಂಗೈಯಲ್ಲಿಯೇ ತೋಟಗಾರಿಕೆ ಸಂಬಂಧ ಮಾಹಿತಿ ಹಾಗೂ ಪರಿಹಾರ ನೀಡುವ ಸಾಧನ ಪೂರೈಕೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ‘ಹಣ್ಣು ಸಂಸ್ಕರಣಾ ಬಳಕೆ ಘಟಕ’ವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ರೈತರು, ರೈತ ಉತ್ಪಾದಕ ಸಂಸ್ಥೆಗಳು, ಸಂಶೋಧಕರು, ವಿಜ್ಞಾನಿಗಳು, ವಿಸ್ತರಣಾ ಹಾಗೂ ಸ್ವ ಸಹಾಯ ಗುಂಪಿನ ಕಾರ್ಯಕರ್ತರು, ರೈತ ಮಹಿಳೆಯರು, ಕೃಷಿ ಪರಿಕರ ವಿತರಕರು, ಉದ್ದಿಮೆದಾರರು, ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು, ಆಡಳಿತಗಾರರು ಇಲ್ಲಿ ಚರ್ಚೆ ಮತ್ತು ಸಂವಹನ ಮೂಲಕ ಹಲಸಿನ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಮಹೋತ್ಸವದಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ಸ್ಥಳಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.