ತುಮಕೂರು ಜಿಲ್ಲೆಯಲ್ಲಿ ನಿಪಾಹ್ ವೈರಸ್ ಬಗ್ಗೆ ವರದಿಯಾಗಿಲ್ಲ: ಡಾ.ಹೆಚ್.ವಿ.ರಂಗಸ್ವಾಮಿ

Update: 2018-05-26 17:08 GMT

ತುಮಕೂರು,ಮೇ.26: ನಿಪಾಹ್ ವೈರಾಣು ಜ್ವರದ ಪ್ರಕರಣಗಳು ಈವರೆಗೂ ಜಿಲ್ಲೆಯಲ್ಲಿ ವರದಿಯಾಗಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ವಿ.ರಂಗಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ನಿಪಾಹ್ ವೈರಾಣು ಜ್ವರವು ಹೊಸದಾಗಿ ಕಂಡು ಬಂದ ವೈರಾಣು ಸೋಂಕಾಗಿದ್ದು, ತುಮಕೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ನಿಪಾಹ್ ರೋಗ ಪತ್ತೆಯಾಗಿಲ್ಲ. ಕಳೆದ 1998ರಲ್ಲಿ ಮೊದಲ ಬಾರಿಗೆ ಮಲೇಶಿಯಾ ನಿಪಾಹ್ ನಲ್ಲಿ ಈ ರೋಗ ಪತ್ತೆಯಾಗಿದ್ದು, ಬಾವಲಿಯ ಜೊಲ್ಲು ಹಾಗೂ ಜೀವರಸದಲ್ಲಿರುವ ಈ ವೈರಸ್ ಹಂದಿ, ನಾಯಿ, ಬೆಕ್ಕು ಹಾಗೂ ಮನುಷ್ಯರಲ್ಲಿ ಬಾಧಿಸುತ್ತದೆ. ಆದರೆ ನಿಪಾಹ್ ರೋಗವು ಗಾಳಿ ಮತ್ತು ನೀರಿನಿಂದ ಹರಡುವುದಿಲ್ಲ ಎಂದು ಅವರು ಹೇಳಿದರು.

ರೋಗ ಲಕ್ಷಣ: ಮೊದಲಿಗೆ ಜ್ವರ, ತಲೆನೋವು, ತಲೆಸುತ್ತುವಿಕೆ, ದಿಗ್ಭ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ನಂತರ ಸಾವು ಸಂಭವಿಸಬಹುದು ಎಂದ ಅವರು ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸಂಗ್ರಹಿಸಿದ ಸೇಂದಿ, ನೀರಾಗಳನ್ನು ಕುಡಿಯಬಾರದು. ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು. ತಾಜಾ,ತಾಳೆ ಹಣ್ಣಿನ ರಸವನ್ನು ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರವನ್ನು ಶುದ್ಧೀಕರಿಸಬೇಕು. ಅನಾರೋಗ್ಯದ ಹಂದಿಗಳನ್ನು ಮತ್ತು ಪ್ರಾಣಿಗಳ ನೇರ ಸಂಪರ್ಕ ತಪ್ಪಿಸುವುದು. ಬಾವಲಿಗಳಿರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು. ಹೀಗೆ ಸಾರ್ವಜನಿಕರು ಸ್ವಯಂ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೇರಳ ರಾಜ್ಯದಲ್ಲಿ 96 ಸಂಶಯಾಸ್ಪದ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 6 ಮರಣಗಳು ಸಂಭವಿಸಿವೆ. ಹೀಗಾಗಿ ಜಿಲ್ಲೆಯ ಜನರು ಕೇರಳ ಸೇರಿದಂತೆ ಸೋಂಕು ಕಂಡು ಬಂದಿರುವ ಪ್ರದೇಶಗಳಿಗೆ ಪ್ರಯಾಣ ಬೆಳೆಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು. ವೈರಸ್ ದೇಹ ಪ್ರವೇಶಿಸಿದ 4 ದಿನಗಳಿಂದ 18 ದಿನಗಳವರೆಗೆ ಸೋಂಕನ್ನು ಉಂಟು ಮಾಡುತ್ತದೆ ಎಂದು ಅವರು ಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್: ಜಿಲ್ಲೆಯಲ್ಲಿ ಕಂಡು ಬರುವ ಸಂಶಯಾಸ್ಪದ ನಿಪಾಹ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಮಾಡಲು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡನ್ನು ತೆರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ ತಿಳಿಸಿದರು.

ವೈರಸ್‍ನಿಂದ ಹರಡುವ ಹೆಚ್1 ಎನ್1, ಎಬೋಲಾಗಿಂತ ಹೆಚ್ಚಿನ ಸಾವನ್ನು ನಿಪಾಹ್ ವೈರಸ್ ಉಂಟು ಮಾಡುತ್ತದೆ. ನಿಪಾಹ್ ವೈರಸ್ ಜ್ವರದ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವಾಗುತ್ತಿದ್ದು, ರೋಗದ ಬಗ್ಗೆ ಆತಂಕ ವ್ಯಕ್ತಪಡಿಸಿ ಸಾರ್ವಜನಿಕರಿಂದ ಹಲವಾರು ಕರೆಗಳು ಬರುತ್ತಿವೆ. ಸಾರ್ವಜನಿಕರು ರೋಗದ ಲಕ್ಷಣಗಳು ಕಂಡುಬರುತ್ತಿದ್ದಂತೆ ಹತ್ತಿರದ ವೈದ್ಯರನ್ನು ಅಥವಾ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಿ ಸೂಕ್ತ ವೈದ್ಯಕೀಯ ನೆರವು ಪಡೆದುಕೊಳ್ಳುವಂತೆ ಅವರು ಹೇಳಿದರು.

ನಿಪಾಹ್ ವೈರಸ್ ಜ್ವರದ ಪ್ರಕರಣಗಳು ಡಿಸೆಂಬರ್ ನಿಂದ ಮೇ ತಿಂಗಳ ಅಂತ್ಯದವರೆಗೆ ಹೆಚ್ಚಾಗಿ ಕಂಡುಬರುತ್ತದೆ. ನಂತರದ ತಿಂಗಳಲ್ಲಿ ಈ ರೋಗ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪುರುಷೋತ್ತಮ್,ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News