ಮಂಡ್ಯ: ಸರಕಾರಿ ಶಾಲೆ ಆವರಣದ ಮರಗಳ ಅಕ್ರಮ ಕಟಾವು; ಅರಣ್ಯ ಇಲಾಖೆಗೆ ದೂರು
ಮಂಡ್ಯ, ಮೇ 27: ಶತಮಾನದ ಇತಿಹಾಸವಿರುವ ಸರಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ ಮೌಲ್ಯದ ನೀಲಗಿರಿ ಮರಗಳನ್ನು ಕಡಿದು ಸಾಗಿಸಿರುವ ಘಟನೆ ಮೇಲುಕೋಟೆಯಲ್ಲಿ ನಡೆದಿದೆ.
ಮೇಲುಕೋಟೆ ಸರಕಾರಿ ಮಾಧ್ಯಮಿಕ ಶಾಲೆ ಎಂದೇ ಹೆಸರಾಗಿದ್ದ ಸರಕಾರಿ ಬಾಲಕರ ಶಾಲೆಗೆ ಆರ್ಟಿಸಿ ಪ್ರಕಾರ ಸರ್ವೆ ನಂಬರ್ 70/1 ಮತ್ತು 70/ಬಿನಲ್ಲಿ ಒಟ್ಟಾರೆ 2 ಎಕರೆ ಜಮೀನಿದ್ದು, ಉಪವಿಭಾಗಾಧಿಕಾರಿಯಾಗಿದ್ದ ಡಾ.ಎಚ್.ಎಲ್ ನಾಗರಾಜು ಅವರ ಸಮಯದಲ್ಲಿ ಜಮೀನಿನ ಸರ್ವೆ ಮಾಡಲಾಯಿತಾದರೂ ಅವರ ವರ್ಗಾವಣೆಯ ನಂತರ ಗಡಿ ಗುರುತಿಸುವ ಕಾರ್ಯ ಆಗಿರಲಿಲ್ಲ. ಇದೀಗ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ ಮೌಲ್ಯದ ಮರಗಳನ್ನು ಕಡಿದು ಸಾಗಿಸಲಾಗಿದೆ ಎನ್ನಲಾಗಿದೆ.
ಘಟನೆಯ ಸಂಬಂಧ ಪತ್ರಕರ್ತರಿಗೆ ಮಾಹಿತಿ ನೀಡಿದ ಮುಖ್ಯ ಶಿಕ್ಷಕ ಜವರೇಗೌಡ, ಯಧುಶೈಲಾ ಪ್ರೌಢಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಬಿ.ನರಸಿಂಹೇಗೌಡ ಮತ್ತವರ ಕಡೆಯವರು ಬೇಸಗೆ ರಜಾ ಅವಧಿಯನ್ನೇ ಬಳಸಿಕೊಂಡು ಶಾಲೆಯ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮರಗಳನ್ನು ಕಡಿದು ಕಾನೂನು ಬಾಹಿರವಾಗಿ ಸಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಮೇ 23ರಂದು ಬಂದು ಕಡಿದಿರುವ ಮರ ಸಾಗಿಸದಂತೆ ಲಾರಿ ಮತ್ತು ಟ್ರ್ಯಾಕ್ಟರ್ ಚಾಲಕರು ಮತ್ತು ಮರ ಕಡಿಯುತ್ತಿದ್ದವರಿಗೆ ಹೇಳಿದ್ದೇವೆ. ನಂತರ ಪೊಲೀಸ್ ಠಾಣೆಗೂ ಲಿಖಿತ ದೂರು ನೀಡಿ ಮರ ಸಾಗಿಸದಂತೆ ಕ್ರಮವಹಿಸಬೇಕೆಂದು ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ದೂರಿದರು.
ಘಟನೆಯ ಸಂಬಂಧ ಪಾಂಡವಪುರ ತಹಶೀಲ್ದಾರ್ ಅವರಿಗೂ ಮಾಹಿತಿ ನೀಡಿ ಮತ್ತೊಮ್ಮೆ ಮೇ 26 ರಂದು ಮೇಲುಕೋಟೆ ಠಾಣೆಯ ಎಸ್ಐರಿಗೆ ಪೋಟೋ ಸಮೇತ ಕೆ.ಬಿ.ನರಸಿಂಹೇಗೌಡ ಮತ್ತು ಮರ ಕಡಿದು ಸಾಗಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ದೂರು ನೀಡಿದೆವು. ಅವರು ತಹಶೀಲ್ದಾರ್ ಅವರು ಸ್ಥಳಕ್ಕಾಗಮಿಸಿ ಶಾಲೆ ಜಮೀನಿನ ಗಡಿ ಗುರುತಿಸಿಕೊಟ್ಟರೆ ಮಹಜರ್ ಮಾಡಿ ಪ್ರಕರಣ ದಾಖಲಿಸುವ ಭರವಸೆ ನೀಡಿ ನಮ್ಮ ಮನವಿಯನ್ನು ಮರಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೇಲುಕೋಟೆ ಠಾಣೆ ಎಸ್ಐ ಸೋಮೇಗೌಡ ಮಾತನಾಡಿ, ಮೇ 23ರಂದು ದೂರು ಬಂದ ನಂತರ ನಾನೇ ಜಮೀನಿಗೆ ಖುದ್ದು ಭೇಟಿ ಮಾಡಿ ಮರಗಳನ್ನು ಲಾರಿಗೆ ತುಂಬಬೇಡಿ ಎಂದು ಹೇಳಿ ಸಿಬ್ಬಂದಿ ನಿಯೋಜಿಸಿದ್ದೆ. ಆದರೆ, ಮುಖ್ಯ ಶಿಕ್ಷಕರು ಜೊತೆಗಿದ್ದವರು ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುತ್ತೇವೆ ಎಂದ ಕಾರಣ ಸುಮ್ಮನಾಗಬೇಕಾಯಿತು. ಮರಗಳನ್ನು ಕಡಿದು ಸಾಗಿಸಲಾಗಿದೆ. ಈಗ ತಹಶೀಲ್ದಾರ್ ಭೇಟಿ ಮಾಡಿ ವರದಿ ನೀಡಿದ ನಂತರ ಕಾನೂನುಕ್ರಮ ಜರುಗಿಸಲಾಗುವುದು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಚೆಲುವೇಗೌಡ ಮಾತನಾಡಿ, ಶಾಲೆಯ ಆಸ್ತಿ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಪಾಂಡವಪುರ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಹಲವು ಸಲ ತಕ್ಷಣವೇ ಸರ್ವೆಮಾಡಿ ಗಡಿ ಗುರುತಿಸಿಕೊಡಲು ಆದೇಶಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ಶಾಲಾ ಆಸ್ತಿ ರಕ್ಷಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಖಾಸಗಿ ಜಮೀನಿನಲ್ಲಿರುವ ನೀಲಗಿರಿ ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ಬೇಕಿಲ್ಲ. ಸರಕಾರಿ ಜಮೀನಲ್ಲಿರುವ ಮರ ಕಡಿಯಲು ಅನುಮತಿ ಬೇಕು. ಸರಕಾರಿ ಶಾಲಾ ಮುಖ್ಯಸ್ಥರು ಮರ ಕಡಿದು ಸಾಗಿಸುವ ಕೊನೆ ಹಂತದಲ್ಲಿ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಹೀಗಾಗಿ ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದೇವೆ. ನಂತರ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಉಪ ವಲಯ ಅರಣ್ಯಾಧಿಕಾರಿ ಜೀತ್ ತಿಳಿಸಿದ್ದಾರೆ.