ಮಕ್ಕಳನ್ನು ಸೇನೆಗೆ ಸೇರಿಸಲು ಪ್ರೋತ್ಸಾಹ ನೀಡಿ: ಲೆ.ಜನರಲ್ ಡಿ.ಆರ್.ಸೋನಿ ಮನವಿ
ಮಡಿಕೇರಿ, ಮೇ.27: ಮಾಜಿ ಸೈನಿಕರು ಹಾಗೂ ಅವಲಂಭಿತ ಕುಟುಂಬದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ, ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಲು ಪ್ರೋತ್ಸಾಹ ನೀಡಬೇಕು ಎಂದು ಭಾರತೀಯ ಭೂಸೇನೆಯ ದಕ್ಷಿಣ ವಿಭಾಗದ ಸೇನಾ ಮುಖ್ಯಸ್ಥರಾದ ಲೆ.ಜ.ದಿವಾನ್ ರವೀಂದ್ರನಾಥ್ ಸೋನಿ ಅವರು ತಿಳಿಸಿದ್ದಾರೆ.
ಭಾರತೀಯ ಸೇನೆ, ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾ ವತಿಯಿಂದ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಭಾನುವಾರ ನಡೆದ ಮಾಜಿ ಸೈನಿಕರ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಮಾಜಿ ಸೈನಿಕರು ಉದ್ಯೋಗ ಪಡೆಯಲು ಮುಂದಾಗಬೇಕಿದೆ ಎಂದು ಲೆ.ಜನರಲ್ ಸೋನಿ ಅವರು ಕರೆ ನೀಡಿದರು.
ಸೇನಾ ಕ್ಷೇತ್ರದಲ್ಲಿ ದುಡಿದ ಮಾಜಿ ಸೈನಿಕರು ಮತ್ತು ಅವಲಂಭಿತರಿಗೆ ಸೈನಿಕ ಕಲ್ಯಾಣ ಕಾರ್ಯಕ್ರಮಗಳು ದೊರೆಯಬೇಕು. ಜೊತೆಗೆ ಮಾಜಿ ಸೈನಿಕರ ಮತ್ತು ಕುಟುಂಬದವರಿಗೆ ಉತ್ತಮ ಆರೋಗ್ಯ ಸೌಲಭ್ಯಗಳು ತಲುಪುವಂತಾಗಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಅತಿಮುಖ್ಯವಾಗಿದೆ ಎಂದು ಲೆ.ಜ.ಸೋನಿ ಅವರು ಹೇಳಿದರು.
ಮಾಜಿ ಸೈನಿಕರು ಮತ್ತು ಅವಲಂಭಿತರಿಗೆ ಸರ್ಕಾರದಿಂದ ಪಿಂಚಣಿ ಸೌಲಭ್ಯವಿದೆ. ಭೂಮಿ ಒದಗಿಸುವುದು, ಮಕ್ಕಳ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ, ಕಂದಾಯ ರಿಯಾಯಿತಿ ಹೀಗೆ ಹಲವು ಸೌಲಭ್ಯಗಳಿದ್ದು, ಇವುಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ದಕ್ಷಿಣ ವಿಭಾಗದ ಸೇನಾ ಮುಖ್ಯಸ್ಥರಾದ ಸೋನಿ ಅವರು ಸಲಹೆ ಮಾಡಿದರು.
ಮಾಜಿ ಸೈನಿಕರು ಮತ್ತು ಅವಲಂಬಿತರಿಗಾಗಿ ದೇಶದ ನಾನಾ ಕಡೆಗಳಲ್ಲಿ ಇಸಿಎಚ್ಎಸ್ ಆಸ್ಪತ್ರೆಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಜೊತೆಗೆ ಇಸಿಎಚ್ಎಸ್ ಆಸ್ಪತ್ರೆಗಳಲ್ಲಿ ನಗದು ರಹಿತ ವಹಿವಾಟು ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಸೇನಾ ಮುಖ್ಯಸ್ಥರು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಹುಟ್ಟಿದ ಕೊಡಗಿನ ಪುಣ್ಯ ಭೂಮಿಯಲ್ಲಿ ಹಲವರು ಸೇನಾ ಕ್ಷೇತ್ರದಲ್ಲಿ ದುಡಿದಿದ್ದಾರೆ. ಆ ನಿಟ್ಟಿನಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಭಿತ ಕುಟುಂಬದವರಿಗೆ ಹಲವು ಸೌಲಭ್ಯಗಳ ಮಾಹಿತಿ ನೀಡುವ ನಿಟ್ಟಿನಲ್ಲಿ ಮಾಜಿ ಸೈನಿಕರ ರ್ಯಾಲಿ ಆಯೋಜಿಸಲಾಗಿದೆ ಎಂದರು.
ಮೇಜರ್ ಜನರಲ್ ಸಂಜೀವ್ ನಾರಾಯಣ ಅವರು ಮಾತನಾಡಿ, ನಿವೃತ್ತ ಸೈನಿಕರಿಗೆ ಸರ್ಕಾರ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು. ಭಾರತೀಯ ಸೇನೆಯಲ್ಲಿ ಕೊಡಗಿನ ಸೈನಿಕರು ವೀರ ಸೇನಾನಿಗಳಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಮಾಜಿ ಸೈನಿಕರಿಗೆ ಪ್ರಕೃತಿ ವಿಕೋಪ ಹಾಗೂ ಇತರೆ ಸಂದರ್ಭದಲ್ಲಿ ಸರ್ಕಾರ ಉದ್ಯೋಗ ಕಲ್ಪಿಸಿದೆ. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದು, ಸೇನಾ ಮೌಲ್ಯಗಳನ್ನು ಉಳಿಸಿಕೊಂಡು ಹೋಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೈನಿಕ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಬ್ರಿಗೇಡಿಯರ್(ನಿವೃತ್ತ) ಎಸ್.ಬಿ.ಸಜನ್ ಅವರು ಮಾತನಾಡಿ ಮಾಜಿ ಸೈನಿಕರು ಸೇನೆಯಲ್ಲಿ ನಿವೃತ್ತರಾದ ನಂತರ ಜಿಲ್ಲಾ ಮಟ್ಟದಲ್ಲಿರುವ ಸೈನಿಕ ಕಲ್ಯಾಣ ಇಲಾಖೆಗೆ ತೆರಳಿ, ಅಗತ್ಯ ದಾಖಲೆಗಳ ಪ್ರತಿಯನ್ನು ನೀಡಿ ಹೆಸರು ನೋಂದಾಯಿಸಿ ಗುರುತಿನ ಚೀಟಿ ಪಡೆಯುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಸೈನಿಕ ಕಲ್ಯಾಣ ಇಲಾಖೆಯಿಂದ ಗುರುತಿನ ಚೀಟಿ ಪಡೆದ ನಂತರ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿರುವ ಸೈನಿಕ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾಜಿ ಸೈನಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತಾಗಬೇಕು ಎಂದರು.
ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲೆ.ಕರ್ನಲ್ ಗೀತಾ ಅವರು ಮಾತನಾಡಿ, ಮಾಜಿ ಸೈನಿಕರಿಗೆ ಸರ್ಕಾರದಿಂದ ಹತ್ತು ಹಲವು ಸೌಲಭ್ಯಗಳಿವೆ, ಅವುಗಳಲ್ಲಿ ಪ್ರಮುಖವಾಗಿ ಮಕ್ಕಳ ಶಾಲಾ-ಕಾಲೇಜು ಪ್ರವೇಶಕ್ಕೆ ಹಾಗೂ ಉದ್ಯೋಗದಲ್ಲಿ ಮೀಸಲಾತಿ, ಮದುವೆಗೆ 50 ಸಾವಿರ ರೂ ವರೆಗೆ ಸಹಾಯಧನ, ಮೈಸೂರು, ಕಾರಾವಾರ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ, ಜಿಲ್ಲಾ ಕೇಂದ್ರಗಳಲ್ಲಿ ವಿಶ್ರಾಂತಿ ಗೃಹ, ಇಸಿಎಚ್ಎಸ್ ಆಸ್ಪತ್ರೆಗಳು, ಜಮೀನು ಹಾಗೂ ವಸತಿ ಸೌಲಭ್ಯ ಹೀಗೆ ಹಲವು ಸೌಲಭ್ಯಗಳಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಭೂಮಿಗೆ ಸಂಬಂಧಿಸಿದಂತೆ ಸುಮಾರು 400 ಹೆಚ್ಚು ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಲೆ.ಜನರಲ್ ಸೋನಿ ಅವರು ಮಾಜಿ ಸೈನಿಕರು ಮತ್ತು ಕುಟುಂಬದ ಅವಲಂಬಿತರಿಗೆ ನೆನಪಿನ ಕಾಣಿಕೆ ನೀಡಿದರು. ಮಾಜಿ ಸೈನಿಕರ ಕುಂದುಕೊರತೆ ಸಂಬಂಧಿಸಿದಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು. ಕಾಲೇಜಿನ ಆವರಣದಲ್ಲಿ ತೆರೆಯಲಾಗಿದ್ದ ಸ್ಟಾಲ್ಗಳಿಗೆ ಭೇಟಿ ನೀಡಿ, ವೀಕ್ಷಣೆ ಮಾಡಿದರು.
ಮೇಜರ್ ಜನರಲ್ ಎಸ್.ಕೆ.ಕಾರ್ಯಪ್ಪ, ಪೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೊರಂ ಅಧ್ಯಕ್ಷರಾದ ಕರ್ನಲ್ ಕೆ.ಸಿ. ಸುಬ್ಬಯ್ಯ, ಸಂಚಾಲಕರಾದ ಮೇಜರ್ ಬಿ.ಎ.ನಂಜಪ್ಪ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಕಾರ್ಯದರ್ಶಿ ಕೆ.ಜಿ.ಉತ್ತಪ್ಪ, ಪ್ರಾಂಶುಪಾಲರಾದ ಪ್ರೊ.ಪಟ್ಟಡ ಪೂವಣ್ಣ, ತಹಶೀಲ್ದಾರ್ ಗೋವಿಂದರಾಜು, ಮಾಜಿ ಸೈನಿಕರು ಮತ್ತು ಅವಲಂಭಿತರು ಇತರರು ಇದ್ದರು.
ಕಾವೇರಿ ಕಾಲೇಜಿನ ಎನ್ಸಿಸಿ ವಿಭಾಗದ ವಿದ್ಯಾರ್ಥಿನಿ ಕ್ಷೀರಾ ಅವರು ನಿರೂಪಿಸಿದರು, ವಿಜಯ ಲಕ್ಷ್ಮಿ ಮತ್ತು ಎಂ.ಕೆ.ಪದ್ಮ ಅವರು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಅನುವಾದ ಮಾಡಿದರು.