ಹುಳಿಯಾರು: ಜಾಮಿಯಾ ಮಸೀದಿಗೆ ಆಡಳಿತಾಧಿಕಾರಿಗಳ ನೇಮಕ
ಹುಳಿಯಾರು,ಮೇ.28: ಹುಳಿಯಾರಿನ ಜಾಮಿಯಾ ಮಸೀದಿಯ ಕಾರ್ಯಕಾರಿ ಸಮಿತಿ ವಜಾಮಾಡಿ ಆಡಳಿತಾಧಿಕಾರಿ ಗಳಾಗಿ ಇಫ್ತಿಯಾರ್ ಅಹಮದ್ ಅವರನ್ನು ನೇಮಕ ಮಾಡಲಾಗಿದೆ.
ಜಾಮಿಯಾ ಮಸೀದಿ ಮುತವಲ್ಲಿಯಾಗಿದ್ದ ಸಯ್ಯದ್ ಜಬಿವುಲ್ಲಾ ಅವರ ಮೇಲೆ ವಕ್ಫ್ ಕಾಯ್ದೆ 64 (5) ರ ಅನ್ವಯ ವಕ್ಫ್ ಆಸ್ತಿಯಾದ ಬೆಳ್ಳಾರ ಸರ್ವೇ ನಂ 230 ರಲ್ಲಿ 1.20 ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿರುವ, 1998 ರಿಂದ 2017 ರವರೆಗೆ ಜಾಮಿಯಾ ಮಸೀದಿಯ ಆದಾಯ ಮತ್ತು ಖರ್ಚಿನ ಬಾಬ್ತು ಲೆಕ್ಕ ಪತ್ರಗಳು ಸರಿಯಾಗಿ ನಿರ್ವಹಿಸದೆ ಹಾಗೂ ವಕ್ಫ್ ಬೋರ್ಡ್ ಕಾಲಕಾಲಕ್ಕೆ ಆಯವ್ಯಯ ಸಲ್ಲಿಸಿದ್ದರೂ ಅದು ಅಕ್ರಮ ಆಯವ್ಯಯ ಎಂದು ಕೆಲವರು ದೂರು ನೀಡಿದ್ದರು.
ಈ ಸಂಬಂಧ ಮುತವಲ್ಲಿ ಜಬೀಉಲ್ಲಾ ಅವರ ಮೇಲೆ ಪೊಲೀಸ್ ಇಲಾಖೆಯಲ್ಲಿ ಕೇಸು ಸಹ ದಾಖಲಾಗಿತ್ತು. ಹಾಗಾಗಿ ಆರೋಪದ ಸತ್ಯಾಸತ್ಯತೆ ಪರಿಶೀಲಿಸುವ ಸಲುವಾಗಿ ಸಮಗ್ರ ತನಿಖೆ ನಡೆಸಬೇಕಿದ್ದು, ತನಿಖೆ ನಡೆಯುವವರೆಗೂ ಜಬೀಉಲ್ಲಾ ಅವರನ್ನು ಮುತವಲ್ಲಿ ಸ್ಥಾನದಿಂದ ಈ ಹಿಂದೆ ಅಮಾನತ್ತು ಮಾಡಿ ತನಿಖೆ ಮಾಡಲಾಗಿತ್ತು.
ತನಿಖೆಯಲ್ಲಿ ಆರೋಪ ಸಾಬೀತಾಗಿದ್ದು ಮಸೀದಿಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಕಾರ್ಯಕಾರಿ ಮಂಡಳಿ ಸಹ ವಿಫಲವಾಗಿದೆ ಎಂದು ಜಾಮಿಯಾ ಮಸೀದಿಯ ಕಾರ್ಯಕಾರಿ ಮಂಡಳಿಯನ್ನೂ ಆದೇಶ ಸಂಖ್ಯೆ ಕೆಎಸ್ಬಿಎ/ಸಿಎಂಸಿ/01/ಟಿಕೆಆರ್/2014-15 ರಂತೆ ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಜಾಮಾಡಿ ಜಿಲ್ಲಾ ವಕ್ಫ್ ಸಮಿತಿಯಲ್ಲಿ ಭೂಮಾಪನ ಅಧಿಕಾರಿಯಾಗಿರುವ ಇಫ್ತಿಕಾರ್ ಅಹಮದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.