×
Ad

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ ಸೋಲಬೇಕಾಯಿತು: ಮಾಜಿ ಶಾಸಕ ಸೋಮಶೇಖರ್

Update: 2018-05-28 22:50 IST

ಮೈಸೂರು,ಮೇ.28: ಶಾಸಕನಾಗಿ ನಿರೀಕ್ಷೆಗೂ ಮೀರಿ ಸೇವೆ ಸಲ್ಲಿಸಿದ್ದು, ಕ್ಷೇತ್ರದಲ್ಲಿ ಶೇ.90ರಷ್ಟು ಕಾಮಗಾರಿಗಳನ್ನು ಮಾಡಿ ಮುಗಿಸಿದ್ದರೂ ಸೋಲಾಗಿದೆ. ಆ ಸೋಲಿಗೆ ಎದೆಗುಂದದೇ ಮುಂದೆಯೂ ಕ್ಷೇತ್ರದ ಜನತೆಯೊಂದಿಗೆ ಒಡನಾಟವಿಟ್ಟುಕೊಂಡು ಸೇವೆಯನ್ನು ಮುಂದುವರೆಸುವೇ ಎಂದು ಕೆ.ಆರ್. ಕ್ಷೇತ್ರದ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು.

ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಚರಂಡಿ, ಉದ್ಯಾನವನ, ರಸ್ತೆ ಕಾಮಗಾರಿಗಳು ಸೇರಿದಂತೆ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೇಕಡವಾರು ಕಾಮಗಾರಿಗಳು ಮುಕ್ತಾಯವಾಗಿವೆ, ಅಲ್ಲದೇ ಬಡಾವಣೆಗಳ ನಿವೇಶನ ವಿವಾದವನ್ನು ಬಗೆಹರಿಸಿದ್ದು ಶಾಸಕನಾಗಿ ಸೇವೆ ಮಾಡಿದ ಧನ್ಯತೆ ತನಗಿದೆ ಎಂದರು.

ವಿವಿ ಪ್ಯಾಟ್ ನಲ್ಲಿ ಆಗಿರುವ ನ್ಯೂನ್ಯತೆ ಬಗ್ಗೆ ತನಿಖೆ ನಡೆದಿರುವುದು, ವರದಿ ಬಂದ ನಂತರ ಆ ಬಗ್ಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸುವೆ. ಅಲ್ಲದೆ ಕ್ಷೇತ್ರದ ಜನತೆ ಕೊಟ್ಟ ತೀರ್ಪನ್ನು ಸ್ವಾಗತಿಸುವೆ ಎಂದು ತಿಳಿಸಿದರು.

ರಾಜ್ಯ ಕೆಪಿಸಿಸಿ ವಕ್ತಾರ ವೆಂಕಟೇಶ ಮಾತನಾಡಿ, ಬಿಜೆಪಿ ಕರೆ ನೀಡಿದ್ದ ಬಂದ್ ರಾಜ್ಯದ ಜನತೆ ತಿರಸ್ಕರಿದ್ದಾರೆ. ಇದರಿಂದ ಬಂದ್ ಸಂಪೂರ್ಣ ವಿಫಲವಾಗಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತಮ ಸೇವೆ ಸಲ್ಲಿಸದ್ದರೂ ಪ್ರಚಾರಕ್ಕಿಂತಲೂ ಅಪಪ್ರಚಾರದಿಂದ ಸೋಲು ಅನುಭವಿಸಬೇಕಾಯಿತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಪುರುಷೋತ್ತಮ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯು ಹಣಬಲ, ತೋಳ್ಬಲ, ಜಾತಿ ಬಲದಿಂದ ನಡೆದಿದೆ. ಶಾಸಕ ರಾಮದಾಸ್ ಅವರ ಗೆಲುವು ಎಷ್ಟರಮಟ್ಟಿಗೆ ನ್ಯಾಯಯುತ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಶೇ.100ರಷ್ಟು ಮತದಾನವಾದಾಗ ಮಾತ್ರವೇ ಪ್ರಜಾಪ್ರಭುತ್ವಕ್ಕೆ ನ್ಯಾಯ ಒದಗುವುದು. ಮತ ಬೇಡುವ ಬದಲು ನಮ್ಮ ಸಮಾಜ ಸೇವೆಯನ್ನು ಜನರ ಮುಂದಿಟ್ಟು ಮತ ಕೇಳುವ ವ್ಯವಸ್ಥೆ ಬರಬೇಕು. ಶಿಕ್ಷಿತರಿಂದಲೇ ಮತ ಅಪಮೌಲ್ಯವಾಗುತ್ತಿದೆ. ಈ ಬಗ್ಗೆ ವಿದ್ಯಾವಂತರು, ಅದರಲ್ಲೂ ಯುವಕರು ಜಾಗೃತರಾಗಬೇಕು ಎಂದು ಕೋರಿದರು.

ಪಾಲಿಕೆ ಸದಸ್ಯರಾದ ಜಗದೀಶ್, ಸುನೀಲ್, ಶಾಂತವೀರೇಂದ್ರಸ್ವಾಮಿ, ಕೆಪಿಸಿಸಿ ಸದಸ್ಯೆ ವೀಣಾ, ಶ್ರೀಧರ್ ಗೋಷ್ಠಿಯಲ್ಲಿ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News