×
Ad

ಮಡಿಕೇರಿ: ಗೌಡ ಫುಟ್ಬಾಲ್ ಕ್ರೀಡಾಕೂಟ; ಕಟ್ಟೆಮನೆ ತಂಡ ಚಾಂಪಿಯನ್

Update: 2018-05-28 23:14 IST

ಮಡಿಕೇರಿ,ಮೇ.28: ಮರಗೋಡುವಿನ ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಗೌಡ ಕುಟುಂಬಗಳ ನಡುವೆ ಮರಗೋಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 3ನೇ ವರ್ಷದ ಗೌಡ ಫುಟ್ಬಾಲ್ ಕ್ರೀಡಾಕೂಟದ ಚಾಂಪಿಯನ್ ತಂಡವಾಗಿ ಕಟ್ಟೆಮನೆ ತಂಡ ಹೊರಹೊಮ್ಮಿದೆ.

ಭಾನುವಾರ ನಡೆದ ಮೊದಲ ಸೆಮಿ ಫೈನಲ್‍ನಲ್ಲಿ ಕಾಂಗೀರ ತಂಡ ಕಟ್ಟೆಮನೆ ತಂಡವನ್ನು ಎದುರಿಸಿತು. ಉತ್ತಮ ಪ್ರದರ್ಶನ ತೋರಿದ ಕಟ್ಟೆಮನೆ ತಂಡ ಎದುರಾಳಿ ತಂಡಕ್ಕೆ ಗೋಲುಗಳಿಸಲು ಯಾವುದೇ ಅವಕಾಶ ನೀಡಲಿಲ್ಲ. ಕಟ್ಟೆಮನೆ ತಂಡದ ಪರ ಪ್ರೀತಮ್ 3 ಗೋಲುಗಳಿಸುವ ಮೂಲಕ ಕಟ್ಟೆಮನೆ ತಂಡ ವಿಜಯ ಪತಾಕೆ ಹಾರಿಸಿತು.

ಎರಡನೇ ಸೆಮಿ ಫೈನಲ್‍ನಲ್ಲಿ ಬಡುವಂಡ್ರ ತಂಡ ಪೊನ್ನಚ್ಚನ ತಂಡವನ್ನು ಎದುರಿಸಿತು. ಪೊನ್ನಚ್ಚನ ತಂಡ 1-0 ಅಂತರದಲ್ಲಿ ಜಯ ಸಾಧಿಸಿತು. ತಂಡದ ಪರ ಶ್ರೀನಿವಾಸ್ 1 ಗೋಲು ದಾಖಲಿಸಿದರು.

ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಕಾಂಗೀರ ತಂಡ ಬಡುವಂಡ್ರ ತಂಡವನ್ನು ಎದುರಿಸಿತು. ಬಡುವಂಡ್ರ ತಂಡ 2-0ಗೋಲುಗಳಿಂದ ಜಯ ಸಾಧಿಸಿ, ಮೂರನೇ ಸ್ಥಾನ ಪಡೆದರೆ, ಕಾಂಗೀರ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಬಡುವಂಡ್ರ ಸುಜಯ್ 2 ಗೋಲು ದಾಖಲಿಸಿದರು.

ಅಂತಿಮವಾಗಿ ನಡೆದ ಕಟ್ಟೆಮನೆ ಹಾಗೂ ಪೊನ್ನಚ್ಚನ ನಡುವಿನ ಫೈನಲ್ ಹಣಾಹಣಿಯಲ್ಲಿ ಕಟ್ಟೆಮನೆ ತಂಡ 4-2 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಕಟ್ಟೆಮನೆ ತಂಡದ ಪರ ಅಭಿ 1, ಪ್ರೀತಮ್ 3 ಗೋಲು ದಾಖಲಿಸಿದರು. ಬಡುವಂಡ್ರ ತಂಡದ ಪರ ಪ್ರಶಾಂತ್ ಹಾಗೂ ಮಹೇಶ್ ತಲಾ ಒಂದೊಂದು ಗೋಲು ದಾಖಲಿಸಿದರು.

ಪಂದ್ಯಾವಳಿಯಲ್ಲಿ ಅತ್ಯುತ್ತಮ ತಂಡವಾಗಿ ಕಡ್ಯದ ಕುಟುಂಬ ತಂಡ, ಅತ್ಯುತ್ತಮ ಆಟಗಾರನಾಗಿ ಕಟ್ಟೆಮನೆ ಅಭ್ಯುದ್, ಅತ್ಯುತ್ತಮ ಗೋಲ್ ಕೀಪರ್ ಆಗಿ ಬಡುವಂಡ್ರ ಯಶ್ವಿನ್, ಅತ್ಯುತ್ತಮ ಡಿಫೆಂಡರ್ ಆಗಿ ಪೊನ್ನಚ್ಚನ ನಿಶಾಂತ್, ಅತ್ಯಧಿಕ ಗೋಲ್ ಸ್ಕೋರರ್ ಆಗಿ ಕಟ್ಟೆಮನೆ ಪ್ರೀತಮ್, ಉತ್ತಮ ಮಹಿಳಾ ಆಟಗಾರ್ತಿಯಾಗಿ ಚೆರಿಯಮನೆ ಕುಮುದಾ ಹೊರಹೊಮ್ಮಿದರು.

ಸಮಾರೋಪ: ಗೌಡ ಫುಟ್ಬಾಲ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಗೌಡ ಫುಟ್ಬಾಲ್ ಅಕಾಡೆಮಿ ಸಂಸ್ಥಾಪಕ ಕಟ್ಟೆಮನೆ ರಾಕೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜಸೇವಕ ಅನಂತರಾಜ ಗೌಡ ಮಾತನಾಡಿ, ಅರೆಭಾಷೆ ಜನಾಂಗದ ನಡುವೆ ನಡೆದ ಫುಟ್ಭಾಲ್ ಟ್ರೋಫಿ ಹೆಮ್ಮೆಪಡುವಂತದ್ದು. ಇಂತಹ ಕ್ರೀಡಾಕೂಟದಿಂದ ಜನಾಂಗದಲ್ಲಿ ಪರಸ್ಪರ ಒಗ್ಗಟ್ಟು ಸಾಧ್ಯವೆಂದು ಅಭಿಪ್ರಾಯಪಟ್ಟರು.

ವಕೀಲ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಗೌಡ ಸಮುದಾಯ ಇನಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಜನಾಂಗ ಬಾಂಧವರು ಎಲ್ಲ ಕ್ಷೇತ್ರದಲ್ಲೂ ಮುಂದುವರೆಯಬೇಕು. ಉತ್ತಮ ಸಾಧನೆಯೊಂದಿಗೆ ದೇಶ ವಿದೇಶಗಳಲ್ಲಿ ಗೌಡ ಜನಾಂಗದವರು ಹೆಸರು ಗಳಿಸಬೇಕು ಎಂದು ಕಿವಿಮಾತು ಹೇಳಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಮರಗೋಡಿನಲ್ಲಿ ನಡೆದ ಪುಟ್ಬಾಲ್ ಪಂದ್ಯಾಟ ಉತ್ತಮವಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಅಕಾಡೆಮಿ ಉತ್ತಮ ಹೆಸರುಗಳಿಸುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿ ಸಂಘದ ಅಧ್ಯಕ್ಷ ಅಂಬೇಕಲ್ ನವೀನ್, ಪ್ರಮುಖರಾದ ಚೆರಿಮನೆ ರತ್ನಕುಮಾರ್, ಪಾಣತ್ತಲೆ ಜಗದೀಶ್ ಮಂದಪ್ಪ, ಕಡ್ಲೇರ ತುಳಸಿ ಮೋಹನ್, ಮಂದ್ರೀರ ಮೋಹನ್‍ದಾಸ್ ಸೇರಿದಂತೆ ಇತರ ಗಣ್ಯರು ಇದ್ದರು.

3ನೇ ವರ್ಷದ ಗೌಡ ಫುಟ್ಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಕಟ್ಟೆಮನೆ ತಂಡಕ್ಕೆ 30,000 ರೂ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಪೊನ್ನಚ್ಚನ ತಂಡಕ್ಕೆ 20,000 ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ಬಡುವಂಡ್ರ ತಂಡಕ್ಕೆ 10,000 ರೂ ನಗದು ಹಾಗೂ ಆಕರ್ಷಕ ಟ್ರೋಫಿ, ಚತುರ್ಥ ಸ್ಥಾನ ಪಡೆದ ಕಾಂಗೀರ ತಂಡಕ್ಕೆ 5,000 ರೂ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News