×
Ad

ಹಿರಿಯರು ಕಿರಿಯರಿಗೆ ಮಾದರಿಯಾಗಿರಬೇಕು: ಶ್ರೀನಟರಾಜ ಸ್ವಾಮೀಜಿ ಸಲಹೆ

Update: 2018-05-29 17:31 IST

ಮಡಿಕೇರಿ ಮೇ 29: ಹಿರಿಯರು ಮುಂದಿನ ಪೀಳಿಗೆಗೆ ಮಾದರಿಯಾದಲ್ಲಿ ಕಿರಿಯರಿಗೆ ಮಾರ್ಗದರ್ಶನದ ಅಭಾವವಿರುವುದಿಲ್ಲ ಎಂದು ತಿಳಿಸಿರುವ ಗಾವಡಗೆರೆಯ ಶ್ರೀಗುರುಲಿಂಗ ಜಂಗಮ ಮಠದ ಶ್ರೀನಟರಾಜ ಸ್ವಾಮೀಜಿಗಳು ರಾಜಕಾರಣಿಗಳು ನಿರ್ದಿಷ್ಟ ಸಮುದಾಯಗಳನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿರಾಜಪೇಟೆ ಸಮೀಪದ ಅರಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವಿರಾಜಪೇಟೆ ತಾಲೂಕು ಘಟಕದ ವಾರ್ಷಿಕ ಮಹಾಸಭೆಯ ಸಂದರ್ಭ ಏರ್ಪಡಿಸಲಾಗಿದ್ದ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸ್ವಾಮೀಜಿ ಮಾತನಾಡಿದರು.
ಸಮುದಾಯದ ಮಠಗಳು ಗರಿಷ್ಠ ಸಮಾಜಮುಖಿಯಾಗಬೇಕು, ಜನರ ಸರ್ವತೋಮುಖ ಕಲ್ಯಾಣಗಳು ಮಠದ ಮೂಲಕ ನಡೆಯಬೇಕು. ಮಠಗಳು ಸಂತೋಷ ಮತ್ತು ಸಮೃದ್ಧಿಯನ್ನು ಬೆಳೆಸುವಂತಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಸಂಬಂಧಗಳನ್ನು ಬೆಸೆಯುವಲ್ಲಿ ಮಠಗಳು ಮಹತ್ತರ ಪಾತ್ರವನ್ನು ವಹಿಸಿವೆ. ಸರ್ವರ ಆರೋಗ್ಯ, ಶಿಕ್ಷಣ, ಸಾಮಾಜಿಕ, ಕೌಟುಂಬಿಕ ಹಾಗೂ ರಾಜಕೀಯ ಸಮಸ್ಯೆಗಳಿಗೆ ಮಠಗಳ ಮೂಲಕ ನೆರವೇರಬೇಕು ಎಂದು ಶ್ರೀನಟರಾಜ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.

ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ಎನ್.ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಡಿ.ಬಿ.ಧರ್ಮಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಮಹೇಶ್, ಉಪಾಧ್ಯಕ್ಷ ಎಸ್.ಎಸ್.ಸುರೇಶ್, ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾತರಾಜ್ ಮಾತನಾಡಿದರು. ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ಜಗದೀಶ್ ಧನ್ಯವಾದವಿತ್ತರು. ಸುರಭಿ ಪ್ರಸಾದ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಬಾಂಧವರಿಗಾಗಿ ವಿವಿಧ ಆಟೋಟ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಲಾಯಿತು.

ರಾಜ್ಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಎಸ್.ಎಸ್.ಶಿವಣ್ಣ, ಶ್ರೀಮಂಗಲ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್ ಸಂದೀಪ್, ಅಮ್ಮತ್ತಿ ಗ್ರಾಮ ಪಂಚಾಯ್ತಿ ಸದಸ್ಯ ವಿ.ಎನ್.ಸುರೇಶ್, ನಿವೃತ್ತ ಸೈನಿಕರಾದ ಎಸ್.ಜಿ.ಮರಿಸ್ವಾಮಿ, ಎಸ್.ಪಿ.ಮೋಹನ್ ಚಂದ್ರ, ಜೆ.ಎನ್.ಬಸವಣ್ಣ, ಶಿಕ್ಷಣ ಕ್ಷೇತ್ರದ ಸಾಧಕರಾದ ಡಿ.ಎನ್.ಉದ್ದಾನಪ್ಪ, ಎಂ.ಆರ್.ಪ್ರೇಮಕುಮಾರಿ, ಮೈಸೂರು ವಿಶ್ವವಿದ್ಯಾನಿಲಯದ ಚಿನ್ನದ ಪದಕ ವಿಜೇತೆ ಎಸ್.ಎಸ್.ಪಂಚಮ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News