ನಿಜ ಅರ್ಥದಲ್ಲಿ ಸ್ಮಾರ್ಟ್ ಸಿಟಿಯಾಗಿ ತುಮಕೂರು ನಗರ ಅಭಿವೃದ್ದಿ: ಶಾಸಕ ಜಿ.ಬಿ ಜ್ಯೋತಿಗಣೇಶ್
ತುಮಕೂರು,ಮೇ.30: ತುಮಕೂರು ನಗರವನ್ನು ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿರುವ ನಗರವನ್ನು ನಿಜ ಅರ್ಥದಲ್ಲಿ ಸ್ಮಾರ್ಟ್ ಸಿಟಿಯಾಗಿ ರೂಪಿಸುವುದು ನನ್ನ ಪ್ರಮುಖ ಉದ್ದೇಶವಾಗಿದೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಇಂದು ನಡೆದ ನಗರಪಾಲಿಕೆ ಸಾಮಾನ್ಯಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಮಕೂರು ನಗರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಸಮನ್ವಯದ ಕೊರತೆಯಿಂದ ನಗರ ವ್ಯವಸ್ಥಿತವಾಗಿ ಅಭಿವೃದ್ದಿಯಾಗಿಲ್ಲ. ರಾಜಕೀಯವನ್ನು ಬದಿಗಿಟ್ಟು, ನಗರದ ಅಭಿವೃದ್ದಿಗೆ ಶ್ರಮಿಸುವುದು ನನ್ನ ಗುರಿ ಎಂದರು.
ಸುಮಾರು 2000 ಕೋಟಿ ರೂಗಳ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇದುವರೆಗೂ 200 ಕೋಟಿ ರೂ ಮಾತ್ರ ಬಿಡುಗಡೆಯಾಗಿದೆ. ಇದರಲ್ಲಿ ಅವಶ್ಯವಿಲ್ಲದ ಹಲವು ಯೋಜನೆಗಳನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ನಾಲ್ಕುಗೋಡೆಗಳ ಮದ್ಯೆ ಕುಳಿತ ತೀರ್ಮಾನ ಮಾಡಿದ್ದಾರೆ. ಇದು ಸರಿಯಲ್ಲ. ಹಲವು ಶತಮಾನಗಳಿಂದ ತುಮಕೂರು ನಗರದ ಜಲದ ಮೂಲವಾಗಿರುವ ಅಮಾನಿಕೆರೆಯಲ್ಲಿ ಕೊಳಕು ನೀರು ಶುದ್ದೀಕರಣ(ಎಸ್.ಟಿ.ಪಿ)ಘಟಕ ತೆರೆಯಲು ಮುಂದಾಗಿದೆ. ಇದಕ್ಕೆ ಈಗಾಗಲೇ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಾನು ಕೂಡ ಈ ಯೋಜನೆಯನ್ನು ವಿರೋಧಿಸುತ್ತೇನೆ. ಭವಿಷ್ಯದಲ್ಲಿ ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ಬುಗುಡನಹಳ್ಳಿ ಕೆರೆಗೆ ಪರ್ಯಾಯವಾಗಿ ಅಮಾನಿಕೆರೆಯನ್ನು ಬಳಸಬೇಕಾಗಿದೆ. ಆದ್ದರಿಂದ ಈಗಾಗಲೇ ಯೋಜನೆಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ನಗರದ ತುಮಕೂರು ವಿವಿ ಆವರಣದಲ್ಲಿ ಮತ್ತು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅನಗತ್ಯವಾಗಿ 3-4ಅಡಿ ಅಗಲದ ವಾಕಿಂಗ್ ಪಾಥ್ ನಿರ್ಮಿಸಲಾಗುತ್ತಿದೆ. ಇದರಿಂದ ಜನರಿಗೆ ಉಪಯೋಗವಿಲ್ಲ. ಒಂದೇ ಬಾರಿಗೆ ಎರಡರಿಂದ ಮೂರು ಜನ ಮಾತ್ರ ನಡೆದಾಡಲು ಸಾಧ್ಯ. ವಾಯುವಿಹಾರಕ್ಕೆ ಬರುವ ಜನರು ಸಹ ಇದರ ಅಗತ್ಯವಿಲ್ಲವೆಂದು ಈಗಾಗಲೇ ತಿಳಿಸಿದ್ದಾರೆ. ಸ್ಮಾರ್ಟ್ ಸಿಟಿಗೆ ಬರುವುದು ಜನರ ತೆರಿಗೆ ಹಣ. ಅದು ಪೋಲಾಗದಂತೆ ಎಚ್ಚರ ವಹಿಸುವ ಕೆಲಸವನ್ನು ಎಲ್ಲಾ ಜನಪ್ರತಿನಿಧಿಗಳು ಮಾಡಬೇಕಾಗಿದೆ ಎಂದರು.