ಬುದ್ಧಿವಂತ ವೈದ್ಯರಿಗಿಂತ ಹೃದಯವಂತ ವೈದ್ಯರು ಸಮಾಜಕ್ಕೆ ಬೇಕಾಗಿದೆ: ಡಾ.ಸಿ.ಎನ್.ಮಂಜುನಾಥ್
ಹಾಸನ,ಜೂ.02: 125 ಕೋಟಿ ಜನಸಂಖ್ಯೆಯಲ್ಲಿ ಬುದ್ದಿವಂತ ವೈದ್ಯರು ಹೆಚ್ಚು ಇದ್ದು, ಆದರೆ ಹೃದಯವಂತ ವೈದ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಖ್ಯಾತ ಹೃದಯತಜ್ಞ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ತಣ್ಣಿರುಹಳ್ಳದ ಬಳಿ ಇರುವ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ 21 ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜಗತ್ತು ನಾಗಾಲೋಟದಿಂದ ಮುನ್ನುಗ್ಗುತ್ತಿದೆ. ಎಲ್ಲೆಡೆ ವಿದ್ಯಾವಂತರು ಮತ್ತು ಬುದ್ಧಿವಂತರ ಸಂಖ್ಯೆ ಹೆಚ್ಚಿದೆ. ವೈದ್ಯಕೀಯ ಕ್ಷೇತ್ರಕ್ಕೂ ಇದು ಅನ್ವಯವಾಗುತ್ತದೆ. ಇಂದಿನ ದಿನಗಳಲ್ಲಿ ಹೃದಯವಂತ ವೈದ್ಯರ ಅವಶ್ಯಕತೆ ಇದೆ. ವೈದ್ಯರಾದವರು ಕೇವಲ ಶರೀರಕ್ಕೆ ಔಷಧಿ ನೀಡಿದರೆ ಸಾಲದು. ಅವರು ತಮ್ಮ ಮಾತು, ಸ್ಪರ್ಶ ಮತ್ತು ವೈದ್ಯಕೀಯ ಅನುಭವದಿಂದ ಚಿಕಿತ್ಸೆ ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿ ಹಣದ ಪಾವತಿ ಬಗ್ಗೆ ಆಲೋಚಿಸದೆ ತ್ವರಿತ ಚಿಕಿತ್ಸೆಗೆ ಮುಂದಾಗಬೇಕು. ನಾವೆಲ್ಲರೂ ಮಾನವ ನಿರ್ಮಿತ ಅವಘಡಗಳ ಕಾಲಘಟ್ಟದಲ್ಲಿದ್ದೇವೆ. ಆಯುರ್ವೇದ ವಿಜ್ಞಾನದಲ್ಲಿ ತಿಳಿಸಲಾದ ಆರೋಗ್ಯದ ಸೂತ್ರಗಳಿಂದ ದೂರ ಸರಿದು ಅನಾರೋಗ್ಯಕರ ಜೀವನಶೈಲಿಗೆ ದಾಸರಾಗುತ್ತಿದ್ದೇವೆ. ಇದರ ಪರಿಣಾಮವಾಗಿ ಭಾರತದಲ್ಲಿ ಸಂಭವಿಸುವ ಸಾವುಗಳಲ್ಲಿ ಶೇಖಡಾ 50 ಕ್ಕೂ ಹೆಚ್ಚು ಸಾವುಗಳು ವಿಷಮಜೀವನ ಶೈಲಿ ಜನಿತ ವ್ಯಾಧಿಗಳಾದ ಹೃದ್ರೋಗ, ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಬೊಜ್ಜು ಹಾಗು ಕೊಬ್ಬಿನ ಸಮಸ್ಯೆಗಳಿಂದ ಉಂಟಾಗುತ್ತಿವೆ. ಹೃದಯಾಘಾತಕ್ಕೆ ಒಳಗಾಗುವ ವ್ಯಕ್ತಿಗಳಲ್ಲಿ ಶೇಖಡಾ 20 ಕ್ಕಿಂತ ಹೆಚ್ಚು ಜನರ ವಯಸ್ಸು 40 ವರ್ಷಕ್ಕಿಂತ ಕಡಿಮೆ ಎಂಬುದು ನೋವಿನ ವಿಷಯ. ಆದ್ದರಿಂದ ಯುವವೈದ್ಯರು ರೋಗಿಗಳ ಆಹಾರ, ಜೀವನಶೈಲಿ, ಮಾನಸಿಕ ಸ್ಥಿತಿಗಳ ಕುರಿತು ಉತ್ತಮ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಆಯುರ್ವೇದವು ವಿಶ್ವಮಾನ್ಯ ಆಗುತ್ತಿದೆ. ಆಯುರ್ವೇದ ಪದವಿ ಪಡೆದ ಯುವವೈದ್ಯರು ವಿಶ್ವದೆಲ್ಲೆಡೆ ಆಯುರ್ವೇದ ಪ್ರಚಾರದಲ್ಲಿ ತೊಡಗುವ ಸಮಯ ಬಂದಾಗಿದೆ. ಆದ್ದರಿಂದ ಆಯುರ್ವೇದ ವಿದ್ಯಾರ್ಥಿಗಳು ಹಾಗು ಪದವೀಧರರು ಈ ವಿಜ್ಞಾನವನ್ನು ಆಳವಾಗಿ, ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು. ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ನಮ್ಮ ಮೂರು ಆಯುರ್ವೇದ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳು ಈ ಬಾರಿ ಒಟ್ಟು 380 ರ್ಯಾಂಕ್ಗಳನ್ನು ಗಳಿಸಿರುವುದು ಒಂದು ದಾಖಲೆಯೇ ಸರಿ ಎಂದು ಪ್ರಶಂಸಿಸಿದರು.
ನವದೆಹಲಿಯ ಕೇಂದ್ರ ಭಾರತೀಯ ವೈದ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿರುವ ಡಾ.ಬಿ.ಆರ್. ರಾಮಕೃಷ್ಣ ಅವರು ಪದವಿ ಪ್ರದಾನ ಮಾಡಿ ಮಾತನಾಡುತ್ತಾ, ಯುವವೈದ್ಯರು ನಿಮ್ಮ ವೈದ್ಯಕೀಯ ಶಿಕ್ಷಣವನ್ನು ಆಕಸ್ಮಿಕವಾಗಿ ಆಯ್ಕೆ ಮಾಡಿಕೊಂಡಿರಬಹುದು. ಆದರೆ ವೃತ್ತಿಯನ್ನು ಬಹಳ ಗಾಢವಾದ ತುಡಿತದಿಂದ ಮುಂದುವರೆಸುವ ಸಂಕಲ್ಪ ಹೊಂದಬೇಕು. ಪೂಜ್ಯ ಹೆಗ್ಗಡೆಯವರ ದಕ್ಷ ನಾಯಕತ್ವದಲ್ಲಿ ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿ ಮೂರು ಬೃಹತ್ತಾದ ಮಾದರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗಳು ಇದ್ದು, ಅವರದೇ ಪ್ರತ್ಯೇಕ ಆಯುರ್ವೇದ ವಿಶ್ವವಿದ್ಯಾಲಯ ಹೊಂದುವ ಎಲ್ಲ ಅಂಶಗಳನ್ನು ಹೊಂದಿರುವುದು ಪ್ರಶಂಸನೀಯ ಎಂದರು.
ಮತ್ತೋರ್ವ ಸನ್ಮಾನಿತ ಅತಿಥಿಯಾಗಿ ಪಾಲ್ಗೊಂಡಿದ್ದ ಗುಜರಾತಿನ ವಡೋಧರದ ಪಾರುಲ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ.ದೇವಾಂಶು ಪಟೇಲ್ ಮಾತನಾಡಿ, ದೇಶ ವಿದೇಶಗಳಲ್ಲಿ ಪೂಜ್ಯ ಹೆಗ್ಗಡೆಯವರ ಶಿಕ್ಷಣ ಸಂಸ್ಥೆಗಳು ಮನೆಮಾತಾಗಿವೆ. ಇದು ಅವರ ಶಿಸ್ತು, ಸೇವಾಮನೋಭಾವ, ದೂರದರ್ಶಿತ್ವ ಹಾಗು ನಿರಂತರ ಶ್ರಮಕ್ಕೆ ಹಿಡಿದ ಕನ್ನಡಿ ಎಂದರು.
ಈ 21 ನೇ ಪದವಿ ಪ್ರದಾನ ಸಮಾರಂಭದಲ್ಲಿ 64 ಬಿ.ಎ.ಎಂ.ಎಸ್ ಪದವೀಧರರು, 74 ಸ್ನಾತಕೋತ್ತರ ಪದವೀಧರರು ಹಾಗು 06 ಪಿಎಚ್ಡಿ ಪದವೀಧರರು ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು. ಗುರುವಂದನೆ ಸ್ವೀಕರಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ವಿಶ್ವವಾಣಿ ರಾಜ್ಯ ದಿನಪತ್ರಿಕೆಯ ವಿಶೇಷ ಸಂಚಿಕೆ ಯಾತ್ರಾವನ್ನು ಇದೆ ವೇಳೆ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಪ್ರಸನ್ನ ನರಸಿಂಹ ರಾವ್, ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸತೀಶ್ ಹೊನ್ನವಳ್ಳಿ , ಉಡುಪಿ ಮತ್ತು ಬೆಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜಿ. ಶ್ರೀನಿವಾಸ್ ಆಚಾರ್ಯ ಹಾಗು ಡಾ. ಜಗದೀಶ್ ಕುಂಜಾಲ್, ಹಾಸನ ಮತ್ತು ಉಡುಪಿಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮುರಲೀಧರ್ ಪೂಜಾರ್ ಹಾಗು ಡಾ.ಮಮತಾ ಇತರರು ಉಪಸ್ಥಿತರಿದ್ದರು.