ಕುಶಾಲನಗರ: ಮದ್ಯದ ಅಮಲಿನಲ್ಲಿ ನದಿಗೆ ಹಾರಿ ಯುವಕ ಮೃತ್ಯು

Update: 2018-06-09 16:58 GMT

ಕುಶಾಲನಗರ, ಜೂ.9: ಕುಟುಂಬದವರು ಬಂದರೆಂದು ಭಾವಿಸಿ ಮದ್ಯದ ಅಮಲಿನಲ್ಲಿ ನದಿಗೆ ಹಾರಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಸಮೀಪದ ಗುಮ್ಮನಕೊಲ್ಲಿಯಲ್ಲಿ ನಡೆದಿದೆ.

ಮೈಸೂರಿನ ನಿವಾಸಿಯಾದ ರಮೇಶ್(28) ಮೃತಪಟ್ಟ ವ್ಯಕ್ತಿ. ಈತ ಮೈಸೂರಿನಲ್ಲಿ ಪೌರಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಕುಟುಂಬದಲ್ಲಿ ಕಲಹವುಂಟಾದ ಕಾರಣ ಈತ ಹಾಗೂ ಸಂಬಂಧಿಕನಾದ ಕಿರಣ್(21) ಎರಡು ದಿನಗಳ ಹಿಂದೆ ಕೊಡಗಿಗೆ ಆಗಮಿಸಿದ್ದರು ಎನ್ನಲಾಗಿದೆ. ಬೇಸರದಿಂದ ನದಿ ದಂಡೆಯ ಬಳಿ ಮದ್ಯ ಸೇವಿಸುತ್ತಿದ್ದ ಇವರು, ತಮ್ಮ ಕುಟುಂಬದವರು ಆಗಮಿಸಿದರು ಎಂದು ನೆನೆದು ಕುಡಿದ ಅಮಲಿನಲ್ಲಿ ರಮೇಶ್ ನದಿಗೆ ಹಾರಿದ್ದು, ತಕ್ಷಣ ಜೊತೆಗಾರನಾದ ಕಿರಣ್ ಸ್ನೇಹಿತನನ್ನು ರಕ್ಷಿಸಲು ನದಿಗೆ ಹಾರಿದ್ದಾನೆ. ನೀರಿನ ರಭಸಕ್ಕೆ ಸ್ನೇಹಿತನನ್ನು ಕಾಪಾಡಲು ಸಾಧ್ಯವಾಗದೇ ಕಿರಣ್ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ರಮೇಶ್ ಶವ ಪತ್ತೆಗಾಗಿ ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ರಾಫ್ಟಿಂಗ್ ತಂಡದ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ್ದು, ನೀರಿನ ರಭಸಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಯಿತು. ಈ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News