ಗೀತಾ ಪ್ರೆಸ್ ಮತ್ತು ಹಿಂದೂ, ಹಿಂದೂಯಿಸಂ, ಹಿಂದುತ್ವ

Update: 2018-06-11 18:25 GMT

ಭಾಗ-1

ಇತ್ತೀಚೆಗೆ ಕೋಬ್ರಾ ಪೋಸ್ಟ್ ಕುಟುಕು ಕಾರ್ಯಾಚರಣೆ ನಡೆಸಿ ಹೇಗೆ ದೃಶ್ಯ ಮತ್ತು ಮುದ್ರಣ ಮಾದ್ಯಮಗಳು ಬಿಜೆಪಿ ಕೋರ್ ಅಜೆಂಡ ಹಿಂದುತ್ವ, ಮತೀಯವಾದದ ಪರವಾಗಿ ವರದಿ ಮಾಡಲು ಭ್ರಷ್ಟಾಚಾರ ನಡೆಸಿದ್ದವು ಎಂದು ವರದಿಯಾಗಿದೆ. ಇದಕ್ಕೂ ಮೊದಲು ಗೀತಾ ಪ್ರೆಸ್ ನೇರವಾಗಿ 80 ವರ್ಷಗಳ ಕಾಲ ಹಿಂದುತ್ವದ ಪ್ರಚಾರ ಮಾಡುತ್ತಿದೆ. ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಆರೆಸ್ಸೆಸ್ ಅನ್ನು ಬೆಳೆಸಿದೆ. ಅದರ ಕುರಿತು ಒಂದು ಲೇಖನ.

ಪತ್ರಕರ್ತ ಅಕ್ಷಯ್ ಮುಕುಲ್ ಬರೆದ ‘ಗೀತಾ ಪ್ರೆಸ್ ಮತ್ತು ಹಿಂದೂ ಇಂಡಿಯಾದ ನಿರ್ಮಾಣ’ ಎನ್ನುವ 540 ಪುಟಗಳ ಇಂಗ್ಲಿಷ್ ಪುಸ್ತಕವು (ಹಾರ್ಪರ್ ಕಾಲಿನ್ಸ್ ಪ್ರಕಾಶನ, 2015) ಕಳೆದ 90 ವರ್ಷಗಳಲ್ಲಿ ಹಿಂದೂ-ಹಿಂದೂಯಿಸಂ-ಹಿಂದುತ್ವ ರಾಜಕಾರಣದಲ್ಲಿ ಮತ್ತು ಹಿಂದೂ ಸಂಸ್ಕೃತಿಯು ಭಾರತದ ರಾಷ್ಟ್ರೀಯ ಸಂಸ್ಕೃತಿ ಎಂದು ಬಿಂಬಿಸುವಲ್ಲಿ ಗೀತಾ ಪ್ರೆಸ್ ವಹಿಸಿದ ಮಹತ್ತರ ಪಾತ್ರದ ಕುರಿತು ವಿವರವಾಗಿ ಬೆಳಕು ಚೆಲ್ಲುತ್ತದೆ. ಇಲ್ಲಿ ಈ ಗೀತಾ ಪ್ರೆಸ್ ಎನ್ನುವುದು ಒಂದು ಕೇವಲ ಮುದ್ರಣಾಲಯವಲ್ಲ. ಕೇವಲ ಪುಸ್ತಕಗಳನ್ನು, ಮಾಸಿಕಗಳನ್ನು ಪ್ರಕಟಿಸುವ ಪ್ರಕಾಶನ ಮಾತ್ರವಲ್ಲ. ಇದೆಲ್ಲದರ ಜೊತೆಗೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ, ಹಿಂದೂ ಸಂಸ್ಕೃತಿ, ಅದರ ಹುಟ್ಟು, ಬೆಳವಣಿಗೆ, ಸನಾತನ ಪರಂಪರೆ ಈ ಎಲ್ಲಾ ಸಿದ್ಧಾಂತಗಳಿಗೆ ಅವಶ್ಯಕವಾದ ಪೂರಕ ಪಠ್ಯಗಳನ್ನು ಸಹ ರೂಪಿಸಿದೆ, ಕಟ್ಟಿದೆ. ಧಾರ್ಮಿಕ ಅಲ್ಪಸಂಖ್ಯಾತರ (ಮುಸ್ಲಿಮರು) ವಿರುದ್ಧ ಮಿಥ್ ಅನ್ನು ಬೆಳೆಸಿ ಅದನ್ನು ದಶಕಗಳ ಕಾಲ ಪೋಷಿಸುವ ಪ್ರಕ್ರಿಯೆಗೆ ಮೂಲವನ್ನು ಇತಿಹಾಸದಲ್ಲಿ ಹುಡುಕಿದಾಗ ಅದು ಗೀತಾ ಪ್ರೆಸ್ ಬಳಿ ಬಂದು ತಲುಪುತ್ತದೆ. ಈ ಪುಸ್ತಕದ ಲೇಖಕ ಅಕ್ಷಯ್ ಮುಕುಲ್ ಅವರು ‘‘ಈ ಮುದ್ರಣ ಮಾಧ್ಯಮದ ಶಕ್ತಿಯಿಂದ ಗೀತಾ ಪ್ರೆಸ್ ಸ್ವತಂತ್ರ ಭಾರತದ ನೀತಿಗಳು ಮತ್ತು ರಾಜಕಾರಣವನ್ನು ಪ್ರಭಾವಗೊಳಿಸಲು ಯತ್ನಿಸುತ್ತಿತ್ತು. ಹಿಂದೂ ಅಸ್ಮಿತೆ ಮತ್ತು ಸಂಸ್ಕೃತಿ ಸಂಬಂಧಿತ ಎಲ್ಲಾ ಬಗೆಯ ಸಂಘಟನೆಗಳನ್ನು ಬೆಂಬಲಿಸುತ್ತಿತ್ತು ಮತ್ತು ಸನಾತನ ಭಾರತಕ್ಕೆ ಬೆದರಿಕೆ ಉಂಟು ಮಾಡುವವರನ್ನು ವಿರೋಧಿಸುತ್ತಿತ್ತು’’ ಎಂದು ಬರೆಯುತ್ತಾರೆ. ಜಯದಯಾಳ್ ಗೊಯಂಡ್ಕ (1885-1965) ಮತ್ತು ಎಚ್.ಪಿ. ಪ್ರಸಾದ್ ಪೊದ್ದರ್ (1892-1971) ಎನ್ನುವ ಇಬ್ಬರು ಶ್ರೀಮಂತ ಮಾರ್ವಾಡಿಗಳು ಈ ‘ಗೀತಾ ಪ್ರೆಸ್’ ಅನ್ನು ಸ್ಥಾಪಿಸಿದರು. ಆ ಕಾಲದಲ್ಲಿ (1920-50) ಕಾಂಗ್ರೆಸ್‌ನ ನಾಯಕರಾಗಿದ್ದ ಜಮನ್‌ಲಾಲ್ ಬಜಾಜ್, ಜಿ.ಡಿ.ಬಿರ್ಲ (ಇಬ್ಬರು ಮಾರ್ವಾಡಿಗಳು ಗಾಂಧೀಜಿಯವರ ಖಜಾಂಚಿಗಳು), ಗೋವಿಂದ ದಾಸ್, ಕೆ. ಎಂ. ಮುನ್ಶಿ ಮತ್ತು ಮದನ ಮೋಹನ ಮಾಳವೀಯ (ಹಿಂದೂ ಮಹಾಸಭಾದ ಸ್ಥಾಪಕರಲ್ಲೊಬ್ಬರು) ರಂತಹವರು ಈ ಸನಾತನ ಧರ್ಮ, ಈ ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವ ಗೀತಾ ಪ್ರೆಸ್ ಜೊತೆಗೆ ನಿಕಟ ಸಂಬಂಧ ಹೊಂದಿದ್ದರು. ಈ ಜಯದಯಾಳ್ ಮತ್ತು ಪೊದ್ದರ್ ಮಾರ್ವಡಿಗಳಾಗಿ ವ್ಯಾಪಾರದಲ್ಲಿ ಅಂತಹ ಯಶಸ್ಸನ್ನು ಗಳಿಸಿರಲಿಲ್ಲ ಎನ್ನುವುದು ಮತ್ತು ಇವರಿಬ್ಬರೂ ಈ ಹಿಂದೂ ಆಧ್ಯಾತ್ಮದ ಕಡೆಗೆ ಒಲವು ಬಳಸಿಕೊಂಡಿದ್ದು ಇಲ್ಲಿ ವಿಶೇಷ ಎನಿಸುತ್ತದೆ. ಈ ಪೊದ್ದರ್ ಎನ್ನುವ 24 ವರ್ಷದ ಮಾರ್ವಾಡಿ ಯುವಕನನ್ನು 21, ಜುಲೈ 1916ರಲ್ಲಿ ಬ್ರಿಟಿಷರು ಕೊಲ್ಕತಾದಲ್ಲಿ ರೊದ್ದ ಶಸ್ತ್ರಾಸ್ತ್ರಗಳ ಕಳವಿನ ಆರೋಪದ ಮೇಲೆ ಬಂಧಿಸುತ್ತಾರೆ. ಸ್ಥಳೀಯ ಮಾರ್ವಾಡಿಗಳು ಈ ಆರೋಪಿಗಳಿಗೂ ತಮಗೂ ಸಂಬಂಧವಿಲ್ಲ ಎಂದು ಬ್ರಿಟಿಷರಿಗೆ ಭರವಸೆ ಕೊಟ್ಟು ‘‘ಮಾರ್ವಾಡಿ ಸಮುದಾಯವು ಸರಕಾರದೊಂದಿಗೆ ಸದಾ ಹೊಂದಿಕೊಂಡಿರುತ್ತದೆ’’ ಎಂದು ಮಚ್ಚಳಿಕೆ ಬರೆದುಕೊಡುತ್ತಾರೆ. ಸಂಪಾದಕ ಪೊದ್ದರ್ 1926ರಲ್ಲಿ ಗಾಂಧಿಯವರ ಬಳಿ ಬಂದು ‘ಕಲ್ಯಾಣ್’ ಪತ್ರಿಕೆಗೆ ಆಶೀರ್ವಾದ ಬೇಡುತ್ತಾರೆೆ. ಗಾಂಧೀಜಿಯವರು ತುಂಬಾ ಪ್ರೀತಿಯಿಂದ ಪೊದ್ದರ್‌ಗೆ ‘‘ಒಳ್ಳೆಯದಾಗಲಿ, ಜಾಹೀರಾತುಗಳನ್ನು, ಪುಸ್ತಕ ವಿಮರ್ಶೆಯನ್ನು ಪ್ರಕಟಿಸಬೇಡ’’ ಎಂದು ಆಶೀರ್ವದಿಸುತ್ತಾರೆ. ಪೊದ್ದರ್ 1930ರಲ್ಲಿ ಅಸ್ಪಶ್ಯರನ್ನು ಸವರ್ಣರ ದೇವಾಲಯದೊಳಗೆ ಪ್ರವೇಶಕ್ಕೆ ಅನುವು ಮಾಡಿಕೊಡುವುದನ್ನು ಖಂಡಿಸಿ ಗಾಂಧೀಜಿಯವರಿಗೆ ಪತ್ರ ಬರೆಯುತ್ತಾರೆ. 1949ರಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಆರೆಸ್ಸೆಸ್ ಅನ್ನು ನೆಹರೂ ನೇತೃತ್ವದ ಕಾಂಗ್ರೆಸ್ ಸರಕಾರ ನಿಷೇಧಿಸಿದಾಗ ಅದನ್ನು ವಿರೋಧಿಸಿ ಆಗಿನ ಸಂಘ ಪರಿವಾರ ನಡೆಸುವ ಸಭೆಗಳಲ್ಲಿ ಭಾಗವಹಿಸುತ್ತಾರೆೆ. ಇಂತಹ ನೂರಾರು ಘಟನೆಗಳ ವಿವರಗಳು ಈ ಪುಸ್ತಕದಲ್ಲಿವೆ.

 1923ರಲ್ಲಿ ಉದ್ಯಮಿ ಗೊಯಂಡ್ಕ ‘ಕಲ್ಯಾಣ್’ ಪತ್ರಿಕೆ ಪ್ರಾರಂಭಿಸುತ್ತಾರೆೆ. ಹಿಂದೂ ಧಾರ್ಮಿಕ ನಂಬಿಕೆಗಳು, ಸನಾತನ ಮೌಲ್ಯಗಳು, ಆಚರಣೆಗಳು, ಹಿಂದೂ ಧಾರ್ಮಿಕ ಸಾಹಿತ್ಯವನ್ನು ಕಡಿಮೆ ದರದಲ್ಲಿ ಭಾರತೀಯರಿಗೆ ತಲುಪಿಸುವುದು ಇದರ ಉದ್ದೇಶ ಎಂದು ಹೇಳುತ್ತಾರೆ. ಮೇಲೆ ಹೇಳಿದ ಪೊದ್ದರ್ ಇದರ ಸ್ಥಾಪಕ ಸಂಪಾದಕನಾಗಿ ನೇಮಕಗೊಳ್ಳುತ್ತಾನೆ. ಗೋರಕ್‌ಪುರದಲ್ಲಿನ ಈ ಗೀತಾ ಪ್ರೆಸ್ ಮುದ್ರಣಾಲಯವು ಈವರೆಗೆ (2018ರವರೆಗೆ, ಕಳೆದ ಎಂಬತ್ತು ವಷರ್ಗಳಲ್ಲಿ) ಭಗವದ್ಗೀತಾ, ರಾಮಾಯಣ, ಮಹಾಭಾರತ, ಹಿಂದೂ ಪುರಾಣ, ಉಪನಿಷದ್, ತುಲಸೀದಾಸ್ ಕೃತಿಗಳು ಒಳಗೊಂಡಂತೆ ಸುಮಾರು 200 ಮಿಲಿಯನ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿದೆ. 1928ರಲ್ಲಿ ‘ಭಕ್ತ’ ಎನ್ನುವ ವಿಷಯವನ್ನಾದರಿಸಿ ಕಲ್ಯಾಣ ಪತ್ರಿಕೆಯ ವಾರ್ಷಿಕ ವಿಶೇಷಾಂಕ ಪ್ರಟವಾಯಿತು. 1935ರಲ್ಲಿ ‘ಯೋಗ’, 1938ರಲ್ಲಿ ‘ರಾಮಚರಿತಮಾನಸ’, 1948ರಲ್ಲಿ ‘ನಾರಿ’, 1950ರಲ್ಲಿ ‘ಹಿಂದೂ ಸಂಸ್ಕೃತಿ’, 1953ರಲ್ಲಿ ‘ಬಾಲಕ’ ಎನ್ನುವ ವಾರ್ಷಿಕ ವಿಶೇಷಾಂಕಗಳನ್ನು ಪ್ರಕಟಿಸಿತು. ಇದರ ಜೊತೆ ಜೊತೆಗೆ ಭಗವದ್ಗೀತಾ, ತುಲಸೀದಾಸರ ರಾಮಚರಿತ ಕುರಿತಾಗಿ ಪ್ರಬಂಧಗಳ ಸ್ಪರ್ಧೆ, ಪರೀಕ್ಷೆಗಳನ್ನು ಏರ್ಪಡಿಸುತ್ತಿತ್ತು. ಕಲೋನಿಯಲ್ ವ್ಯವಸ್ಥೆ ಮತ್ತು ಮುಸ್ಲಿಮರಿಂದ ಸನಾತನ ಹಿಂದೂ ಧರ್ಮಕ್ಕೆ ಅಪಾಯ ಉಂಟಾಗಿದೆ ಎನ್ನುವ ಎಚ್ಚರಿಕೆ ರೂಪದ ಲೇಖನಗಳನ್ನು ಬರೆದು ಪ್ರಕಟಿಸುತ್ತಿತ್ತು. ಪ್ರಭುದತ್ತ ಬ್ರಹ್ಮಚಾರಿ, ಕಾರ್ಪತ್ರಿ ಮಹಾರಾಜ್‌ರಂತಹ ಸಾಧುಗಳು, ಆರ್ಯ ಸಮಾಜ, ಬ್ರಹ್ಮ ಸಮಾಜದ ವಿದ್ವಾಂಸರು, ಹಿಂದೂ ಮಹಾಸಭಾ, ಆರೆಸ್ಸೆಸ್, ಆಗಿನ ಜನಸಂಘ ಮತ್ತು ಕಾಂಗ್ರೆಸ್‌ನ ರಾಜಕಾರಣಿಗಳು, ಕಾರ್ಯಕರ್ತರು, ಲೇಖಕರು ‘ಕಲ್ಯಾಣ್’ ಪತ್ರಿಕೆಗೆ ನಿರಂತರವಾಗಿ ಲೇಖನಗಳನ್ನು ಬರೆದಿದ್ದಾರೆ. ಕಳೆದ 80 ವರ್ಷಗಳಲ್ಲಿ ಬರೆದ ಬಹುಪಾಲು ಲೇಖಕರು ಬ್ರಾಹ್ಮಣ, ಬನಿಯಾ ಜಾತಿ

ಸೇರಿದವರು. ಈ ಎಲ್ಲಾ ಚಟುಟಿಕೆಗಳು ಗೀತಾ ಪ್ರೆಸ್‌ನ ಉದ್ದೇಶವು ಕೇವಲ ಪ್ರಕಾಶನ ಮಾತ್ರವಲ್ಲ ಅದನ್ನೂ ಮೀರಿ ಸನಾತನ ಹಿಂದೂ ಧರ್ಮದ ಪ್ರಚಾರ ಮತ್ತು ಶಿಕ್ಷಣವೂ ಒಳಗೊಂಡಿತ್ತು ಎಂದು ಇದರಿಂದ ಸ್ಪಷ್ಟ್ಟವಾಗುತ್ತದೆ. ಪ್ರೊ. ವಸುಧಾ ದಾಲ್ಮಿಯ ಅವರು ‘‘ಗೊಯಂಡ್ಕ ಮತ್ತು ಪೊದ್ದರ್ ಅವರು ಸಹಜವಾಗಿಯೇ ಸಂಪ್ರದಾಯವಾದಿಗಳಾಗಿದ್ದರು, ಕರ್ಮಠರಾಗಿದ್ದರು. ಅವರು ಜಾತಿ ಪದ್ಧತಿಯನ್ನು ಉಳಿಸಿಕೊಳ್ಳಬೇಕು ಎಂದು ನಂಬಿದ್ದರು. ಜಾತಿ ವಿನಾಶವನ್ನು ಪ್ರತಿಪಾದಿಸಿದ ಅಂಬೇಡ್ಕರ್, ಹರಿಜನೋದ್ಧಾರ ಕುರಿತು ಚಿಂತಿಸಿದ ಗಾಂಧೀಜಿಯವರನ್ನು ವಿರೋಧಿಸಿದ್ದರು. ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ/ಮತದಾರರ ಸಮುದಾಯ ಬೇಕೆನ್ನುವ ಅಂಬೇಡ್ಕರ್ ಅವರ ಬೇಡಿಕೆಯನ್ನು ವಿರೋಧಿಸಿ 1932ರಲ್ಲಿ ಗಾಂಧಿಯವರು ಉಪವಾಸಕ್ಕೆ ಕುಳಿತಾಗ ಪೊದ್ದರ್ ಗಾಂಧಿಯವರಿಗೆ ನೇರವಾಗಿ ಪತ್ರವನ್ನು ಬರೆದು ದಲಿತರೊಂದಿಗೆ ಸಹಭೋಜನ ಮಾಡಬೇಕೆನ್ನುವ ನಿಮ್ಮ ಆಶಯವನ್ನು ಒಪ್ಪುವವರು ಸಹ (ಆದರೆ ಅವರೊಂದಿಗೆ ಸಹಭೋಜನವು ಸಮತೆಯ ಸಂಕೇತ ಎಂದು ನಾನು ಒಪ್ಪುವುದಿಲ್ಲ) ದಲಿತರು ಸ್ನಾನ ಮಾಡಿ, ಮಡಿ ಬಟ್ಟೆಯನ್ನುಟ್ಟು, ಹೆಂಡ ಮತ್ತು ಮಾಂಸ ಆಹಾರವನ್ನು ತ್ಯಜಿಸಿ ಊಟಕ್ಕೆ ಬಂದರೆ ಮಾತ್ರ ಸಹಭೋಜನಕ್ಕೆ ಒಪ್ಪಿಕೊಳ್ಳುತ್ತಾರೆ. ‘‘ನಮ್ಮ ದೇಹ ಮತ್ತು ಮನಸ್ಸಿಗೆ ಈ ಸಹಭೋಜನವು ಉಂಟು ಮಾಡುವ ಪ್ರತಿಕೂಲ ದುಷ್ಪರಿಣಾಮದ ಕುರಿತು ನೀವು ಚಿಂತಿಸಿದ್ದೀರ?’’ ಎಂದು ಪ್ರಶ್ನಿಸುತ್ತಾರೆ. ದಲಿತರ ದೇವಸ್ಥಾನ ಪ್ರವೇಶವೂ ಸಹ ಪೊದ್ದರ್ ಮತ್ತು ಗೊಯಂಡ್ಕ ಅವರಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ‘ಇದು ದೇವಸ್ಥಾನ ಪದ್ಧತಿಯನ್ನು ನಾಶ ಮಾಡುತ್ತದೆ, ದಲಿತರು ಬೇಕಿದ್ದರೆ ಪ್ರತ್ಯೇಕ ದೇವಸ್ಥಾನ ಕಟ್ಟಿಕೊಳ್ಳಲಿ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಪೊದ್ದರ್ ಅವರು ಗಾಂಧಿಯವರನ್ನು ‘ಭಾರತೀಯ ಉಡುಪಿನಲ್ಲಿರುವ ಪಾಶ್ಚಿಮಾತ್ಯ’ ಎಂದು ಟೀಕಿಸುತ್ತಾರೆ. ಕಲ್ಯಾಣ್ ಪತ್ರಿಕೆಯ 1948ರ ಫೆಬ್ರವರಿ ಮತ್ತು ಮಾರ್ಚ್ ಸಂಚಿಕೆಗಳಲ್ಲಿ ಗಾಂಧಿ ಹತ್ಯೆ ಕುರಿತು ಒಂದು ವರದಿ, ಲೇಖನವೂ ಪ್ರಕಟವಾಗುವುದಿಲ್ಲ’’ ಎಂದು ಬರೆಯುತ್ತಾರೆ.

ಈ ಗೀತಾ ಪ್ರೆಸ್ ಎನ್ನುವುದು ಒಂದು ಕೇವಲ ಮುದ್ರಣಾಲಯವಲ್ಲ. ಕೇವಲ ಪುಸ್ತಕಗಳನ್ನು, ಮಾಸಿಕಗಳನ್ನು ಪ್ರಕಟಿಸುವ ಪ್ರಕಾಶನ ಮಾತ್ರವಲ್ಲ. ಇದೆಲ್ಲದರ ಜೊತೆಗೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ, ಹಿಂದೂ ಸಂಸ್ಕೃತಿ, ಅದರ ಹುಟ್ಟು, ಬೆಳವಣಿಗೆ, ಸನಾತನ ಪರಂಪರೆ ಈ ಎಲ್ಲಾ ಸಿದ್ಧಾಂತಗಳಿಗೆ ಅವಶ್ಯಕವಾದ ಪೂರಕ ಪಠ್ಯಗಳನ್ನು ಸಹ ರೂಪಿಸಿದೆ, ಕಟ್ಟಿದೆ. ಧಾರ್ಮಿಕ ಅಲ್ಪಸಂಖ್ಯಾತರ (ಮುಸ್ಲಿಮರು) ವಿರುದ್ಧ ಮಿಥ್ ಅನ್ನು ಬೆಳೆಸಿ ಅದನ್ನು ದಶಕಗಳ ಕಾಲ ಪೋಷಿಸುವ ಪ್ರಕ್ರಿಯೆಗೆ ಮೂಲವನ್ನು ಇತಿಹಾಸದಲ್ಲಿ ಹುಡುಕಿದಾಗ ಅದು ಗೀತಾ ಪ್ರೆಸ್ ಬಳಿ ಬಂದು ತಲುಪುತ್ತದೆ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News