ಮುದಕನಿಗೇಕೆ ಮತ್ತೊಂದು ಮದುವೆ?: ಸಿದ್ದರಾಮಯ್ಯ

Update: 2018-06-13 15:14 GMT

ಮೈಸೂರು,ಜೂ.13: ಒನ್ಸ್ ಅಪಾನ್ ಎ ಟೈಂ ನಾನೋರ್ವ ಪಾಪ್ಯುಲರ್ ಮೇಸ್ಟ್ರಾಗಿದ್ದೆ. ಹೀಗೆಂದು ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿಕೊಂಡವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮೈಸೂರಿನ ಹೋಟೆಲ್‍ಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದರು. ಸಭೆಗೂ ಮುನ್ನ ಇಡ್ಲಿ ವಡೆ ಉಪಹಾರ ಸೇವಿಸಿದ ಅವರು ಹಳೆಯ ಸವಿ ನೆನಪುಗಳನ್ನು ಮೆಲಕು ಹಾಕಿದರು. ರಾಜಕೀಯ ವೃತ್ತಿಗಿಂತ ನನಗೆ ಹೆಚ್ಚು ಖುಷಿ ಕೊಟ್ಟಿದ್ದು ಮಾಸ್ಟರ್ ಕೆಲಸ. ಮೂರು ವರ್ಷಗಳ ಕಾಲ ಶಿಕ್ಷಕನ ವೃತ್ತಿ ನಿರ್ವಹಿಸಿದ್ದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೆಲಸ ನನಗೆ ಅತಿ ಹೆಚ್ಚು ಖುಷಿ ಕೊಡುತ್ತಿತ್ತು. ಈಗಲೂ ವಿದ್ಯಾರ್ಥಿಗಳ ಜತೆ ಪಾಠ ಮಾಡೋದು ಖುಷಿ ಕೊಡುತ್ತೆ. ಆದರೆ ನನಗೀಗ ವಯಸ್ಸಾಗಿದೆ. ಇದೇ ಆಗಸ್ಟ್ ತಿಂಗಳಲ್ಲಿ 71 ವರ್ಷವಾಗುತ್ತದೆ. ಹಾಗಾಗಿ ನಾನೀಗ ಪಾಠ ಮಾಡೋಕ್ಕೆ ಸಾಧ್ಯವಿಲ್ಲ ಎಂದರು.

ಚಿಮ್ಮನಕಟ್ಟಿಯವರು ನಿನ್ನೆ ನಡೆದ ಸಭೆಯಲ್ಲಿ 71 ಅಲ್ಲ, ನಿಮಗೆ 21. ಮತ್ತೊಂದು ಮದುವೆ ಮಾಡುವ ಉತ್ಸಾಹದಲ್ಲಿದ್ದೇವೆ ಎಂದಿದ್ದರಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಮುದುಕನಿಗೇಕೆ ಮತ್ತೊಂದು ಮದುವೆ ? ಎಂದು ಚಿಮ್ಮಕಟ್ಟಿ ಮಾತನ್ನು ನೆನೆದರು. ನನಗೆ 71 ವರ್ಷ ಆಗಿದೆ. ಯಾರಾದರೂ ಹುಡುಗಿಯರು ಕೇಳಿಸಿಕೊಂಡರೆ ತಪ್ಪು ತಿಳ್ಕೋತಾರೆ ಎಂದರು. ಸಿದ್ದರಾಮಯ್ಯ ಹೃದಯವಂತಿಕೆಯಲ್ಲಿ ಸದಾ ಯುವಕರು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿ, ಹೌದೌದು ಹೃದಯವಂತಿಕೆಯಲ್ಲಿ ನಾನು ಯಂಗ್ ಎಂದರು.

ಈ ವೇಳೆ ಮುಖಂಡರ ಜೊತೆ ಉಭಯ ಕುಶಲೋಪರಿ ವಿಚಾರಿಸಿದ ಅವರು ಸೋಲು-ಗೆಲುವಿನ ಲೆಕ್ಕಾಚಾರ ನಡೆಸಿದರು. ಈ ಸಂದರ್ಭದಲ್ಲಿ ಸಂಸದ ಧ್ರುವನಾರಾಯಣ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ವಾಸು, ಸೋಮಶೇಖರ್, ಕಳಲೆ ಕೇಶವಮೂರ್ತಿ, ಕೆ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News