ಮಂಡ್ಯ: ವಿದ್ಯುತ್ ಸ್ಪರ್ಶಿಸಿ ತಂದೆ-ಮಗ ಮೃತ್ಯು
ಮಂಡ್ಯ,ಜೂ.14: ಜಮೀನಿನ ಬಳಿ ರೇಷ್ಮೆಹುಳು ಮನೆಯಲ್ಲಿ ಸೊಪ್ಪು ಹಾಕುವಾಗ ಅಕಸ್ಮಿಕ ವಿದ್ಯುತ್ ಸ್ಪರ್ಶದಿಂದ ತಂದೆ ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಗ್ರಾಮದ ಕರಗುಂಡೇಗೌಡ(65) ಹಾಗೂ ಆತನ ಪುತ್ರ ಸತೀಶ್(32) ಮೃತಪಟ್ಟವರು. ಕುರಗುಂಡೇಗೌಡ ಅವರು ತಮ್ಮ ಜಮೀನಿನಲ್ಲಿ ರೇಷ್ಮೆ ಬೆಳೆ ಬೆಳೆದಿದ್ದು, ಜಮೀನಿನ ಬಳಿಯೇ ರೇಷ್ಮೆ ಸಾಕಾಣಿಕೆ ಮನೆ ನಿರ್ಮಿಸಿಕೊಂಡು ಹುಳು ಸಾಕಾಣಿಕೆ ಮಾಡುತ್ತಿದ್ದರು.
ಎಂದಿನಂತೆ ಗುರುವಾರ ಬೆಳಿಗ್ಗೆ ರೇಷ್ಮೆ ಹುಳುಗಳಿಗೆ ಹಿಪ್ಪು ನೇರಳೆ ಸೊಪ್ಪು ಹಾಕಲು ಮನೆಯಿಂದ ಹೊರಟಿದ್ದಾರೆ. ಹಿಪ್ಪು ನೇರಳೆ ಸೊಪ್ಪನ್ನು ಹಾಕುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ನಿಂದ ಅಪ್ಪ ಮಗ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಮೃತರ ಜೊತೆಗಿದ್ದ ಕೃಷಿ ಕಾರ್ಮಿಕ ಸಿದ್ದೇಗೌಡ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ನಾಗೇಶ್ ಭೇಟಿ ನೀಡಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.