ಭಾರೀ ಮಳೆಗೆ ಭಾಗಮಂಡಲ ಜಲಾವೃತ: ದಕ್ಷಿಣ ಕೊಡಗಿನಲ್ಲಿ ಜನ ತತ್ತರ

Update: 2018-06-14 17:52 GMT

ಮಡಿಕೇರಿ, ಜೂ.14: ಕೊಡಗು ಜಿಲ್ಲೆಯಾದ್ಯಂತ ಮೃಗಶಿರ ಮಹಾಮಳೆಯ ಅಬ್ಬರ ಜೋರಾಗಿದ್ದು, ತಲಕಾವೇರಿ, ಭಾಗಮಂಡಲದಲ್ಲಿ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆ. ಗುರುವಾರ ಹಗಲು ವೇಳೆ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ, ಬುಧವಾರ ರಾತ್ರಿಯಿಂದ ಬೆಳಗಿನವರೆಗೂ ಸುರಿದ ಧಾರಾಕಾರ ಮಳೆಗೆ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಶ್ರೀಭಗಂಡೇಶ್ವರ ದೇವಾಲಯ ಜಲಾವೃತವಾಗಿದ್ದು, ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹದ ಹಿನ್ನೆಲೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ರಸ್ತೆ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆ ಭಾಗಮಂಡಲ-ಮಡಿಕೇರಿ ರಸ್ತೆಯಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದೆ. ನಾಪೋಕ್ಲು ರಸ್ತೆಯಲ್ಲಿ ರಾಫ್ಟ್ ಗಳ ಮೂಲಕ ಜನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಪ್ರವಾಹ ಹೆಚ್ಚಾಗಿರುವುದರಿಂದ ತುರ್ತು ಸೇವೆಗಾಗಿ ಅಗ್ನಿಶಾಮಕದಳ, ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಯ್ಯಂಗೇರಿ ರಸ್ತೆಯ ಮೇಲೆ 6ರಿಂದ 7 ಅಡಿಗಳಷ್ಟು ಮತ್ತು ಮಡಿಕೇರಿ ರಸ್ತೆಯ ಮೇಲೆ 5 ಅಡಿಗಳಷ್ಟು ಪ್ರವಾಹದ ನೀರು ಆವರಿಸಿ ಭಾಗಮಂಡಲದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಪ್ರವಾಹ ಕಾಣಿಸಿಕೊಂಡು ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಅಪಾಯಕಾರಿ ಮಟ್ಟ ತಲುಪುವ ಸಾಧ್ಯತೆಗಳಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ, ಕರಡಿಗೋಡು, ಗುಹ್ಯ ವ್ಯಾಪ್ತಿಯ ನದಿ ಪಾತ್ರದ ಮನೆಗಳು ಮುಳುಗಡೆಯ ಭೀತಿಗೆ ಒಳಗಾಗಿವೆ. ಲಕ್ಷ್ಮಣ ತೀರ್ಥ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಹರಿಹರದ ಸೇತುವೆ ಮುಳುಗಡೆಯಾಗಿದೆ. ಅಂಗನವಾಡಿ ಸೇರಿದಂತೆ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ಜೂ.14 ರಂದು ರಜೆ ಘೋಷಿಸಿತ್ತು. 

ಸಿದ್ದಾಪುರ-ಕರಡಿಗೋಡು ನಡುವೆ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ನದಿ ನೀರು ಕಾವೇರಿ ದಂಡೆಯಲ್ಲಿರುವ ಮನೆಗಳಿಗೆ ನುಗ್ಗುವ ಸಾಧ್ಯತೆಗಳಿರುವುದರಿಂದ ಎಚ್ಚರದಿಂದಿರುವಂತೆ ಅಲ್ಲಿನ ನಿವಾಸಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಕರಡಿಗೋಡು ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ.

ನಲ್ವತ್ತೆಕರೆಯ ನಾಲ್ಕು ಕುಟುಂಬಗಳು ಈಗಾಗಲೇ ಮನೆ ತೆರವುಗೊಳಿಸಿ ಸಂಬಂಧಿಕರ ಮನೆಗಳಿಗೆ ತೆರಳಿದ್ದು, ಈ ಕುಟುಂಬಗಳಿಗೆ ತಾಲೂಕು ಆಡಳಿತದಿಂದ ಆಹಾರ ಸಾಮಾಗ್ರಿ ಸರಬರಾಜು ಮಾಡಲಾಗಿದೆ.

ಬಿರುನಾಣಿ, ಪೋರಾಡ್ ಗ್ರಾಮಗಳಲ್ಲಿ 24 ಗಂಟೆ ಅವಧಿಯಲ್ಲಿ ಸುಮಾರು 15 ಇಂಚುಗಳಷ್ಟು ಮಳೆಯಾಗಿದ್ದು, ಪರಿಣಾಮವಾಗಿ ದಕ್ಷಿಣ ಕೊಡಗಿನ ಕಾನೂರು ವ್ಯಾಪ್ತಿಯಲ್ಲಿ ಲಕ್ಷ್ಮಣ ತೀರ್ಥ ನದಿ ಅಪಾಯದ ಮಟ್ಟದಲ್ಲಿ ಹರಿಯತ್ತಿದೆ. ಕುಟ್ಟ ಸಮೀಪದ ಪೂಜೆಕಲ್ಲು ಬಳಿ ರಾಮತೀರ್ಥ ನದಿಗೆ ಅಡ್ಡಲಾಗಿ ಮರಗಳಿಂದ ನಿರ್ಮಿಸಿದ್ದ ತೂಗು ಸೇತುವೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಇದರಿಂದ ಆ ಭಾಗದ ಸುಮಾರು 25 ಕುಟುಂಬಗಳಿಗೆ ಪರ್ಯಾಯ ರಸ್ತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಲಾಗಿದೆ. ಶಾಲಾ ಮಕ್ಕಳು ಮನೆಯಲ್ಲೇ ಉಳಿಯುವಂತಾಗಿದ್ದು, ಆಹಾರ ಸಾಮಾಗ್ರಿ ತರಲೂ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಜಿಲ್ಲಾಡಳಿತ ಕೂಡಲೇ ನೆರವಿಗೆ ಧಾವಿಸಬೇಕೆಂದು ಸಂತ್ರಸ್ತರು ಕೊರಿದ್ದಾರೆ.

ಮಡಿಕೇರಿ ನಗರದಲ್ಲೂ ರಾತ್ರಿ ಸುರಿದ ಭಾರೀ ಮಳೆಗೆ ಇಲ್ಲಿನ ಗೌಳಿಬೀದಿಯಲ್ಲಿ ಮನೆಯೊಂದರ ತಡೆಗೋಡೆ ಕುಸಿದಿದ್ದು, ಪರಿಣಾಮವಾಗಿ ಗೋಡೆಯ ಕೆಳಭಾಗದಲ್ಲಿ ನಿಲ್ಲಿಸಿದ್ದ ಚೇತನ್ ಎಂಬವರಿಗೆ ಸೇರಿದ ಕಾರು ಜಖಂಗೊಂಡಿದೆ. ಬಾಳೆಲೆ-ನಿಟ್ಟೂರು ಮಾರ್ಗದ ಲಕ್ಷ್ಮಣತೀರ್ಥ ನದಿಗೆ ನೂತನವಾಗಿ ನಿರ್ಮಿಸಿರುವ ನಿಟ್ಟೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸೇತುವೆಯ ಮೇಲೆ ಸಂಚರಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ.

ಸುಮಾರು 5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು,  ಮೊದಲ ಮುಂಗಾರು ಮಳೆಗೇ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆ ಭಾಗದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಸಂದರ್ಭದಲ್ಲಿಯೇ ಬಿರುಕು ಬಿಟ್ಟಿರುವುದು ಆ ಭಾಗದ ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಟಿ. ಶೆಟ್ಟಿಗೇರಿ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ  ರಸ್ತೆಯ ಮೇಲೆ ಹರಿಯುವ ಮೂಲಕ ಆತಂಕ ಸೃಷ್ಟಿಸಿತ್ತು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಗೋವಿಂದರಾಜು ಅವರು, ನದಿಪಾತ್ರದ ಮನೆಗಳಲ್ಲಿ ವಾಸಿಸುತ್ತಿದ್ದವರನ್ನು ತಾತ್ಕಾಲಿಕವಾಗಿ ಬೇರೆ ಕಡೆಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದರು. ನಂತರ ನೀರಿನ ಪ್ರಮಾಣ ಇಳಿಯುತ್ತಿದ್ದಂತೆ ಸ್ಥಳಾಂತರಗೊಂಡವರು ಮತ್ತೆ ತಮ್ಮ ಮನೆಗಳಿಗೆ ಸೇರಿಕೊಂಡರು. ನಾಲ್ಕೇರಿಯಲ್ಲೂ ಲಕ್ಷ್ಮಣತೀರ್ಥ ನದಿ ರಸ್ತೆಯಲ್ಲಿ ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಬಲ್ಯಮುಂಡೂರು ಬಳಿ ಲಕ್ಷ್ಮಣತೀರ್ಥ ಜಲಾವೃತಗೊಂಡು ಮೂರನೇ ದಿನವೂ ಸಂಚಾರ ಕಡಿತಗೊಂಡಿದ್ದು, ಕಾನೂರು ಮೂಲಕ ಶ್ರೀಮಂಗಲಕ್ಕೆ ತೆರಳುವ ನಾಲ್ಕೇರಿ ರಸ್ತೆ ಕೂಡ ಮುಚ್ಚಲ್ಪಟ್ಟಿದೆ. ಬಿರುನಾಣಿ ಸುತ್ತಮುತ್ತ ದಾಖಲೆಯ ಮಳೆ ಸುರಿದಿದ್ದು, ಬಿರುನಾಣಿಗೆ 15 ಇಂಚು, ಬಾಡಗರಕೇರಿಗೆ 18 ಇಂಚು ಮಳೆಯಾಗಿದೆ. ಕೆಕೆಆರ್ ಸಮೀಪ ಭೂಕುಸಿತದಿಂದ ಸಂಚಾರ ಕಡಿತಗೊಂಡಿದೆ.

ಗ್ರಾಮೀಣ ಪ್ರದೇಶದಲ್ಲಿ ಕತ್ತಲು
ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಹುದಿಕೇರಿ, ಶ್ರೀಮಂಗಲ, ತಾವಳಗೇರಿ, ಬಿರುನಾಣಿ, ಪೋರಾಡ್, ಟಿ.ಶೆಟ್ಟಿಗೇರಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮೊಬೈಲ್‍ಗಳನ್ನು ಕೂಡ ಚಾರ್ಜ್ ಮಾಡಲಾಗದೆ, ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೂ ತೊಂದರೆಯುಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News