ದೇಶದ ಫಿಟ್ನೆಸ್ ಸವಾಲನ್ನು ಸ್ವೀಕರಿಸಲು ವಿಫಲರಾದ ಪ್ರಧಾನಿ

Update: 2018-06-15 03:48 GMT

ಭಾರತದಂತಹ ಬಡ ದೇಶಗಳಲ್ಲಿ ಫಿಟ್ನೆಸ್ ಒಂದು ಶೋಕಿಯಾಗಿದೆ. ಉಳ್ಳವರ ಶೋಕಿಯ ಭಾಗವಾಗಿ ಇಂದು ಮಾರುಕಟ್ಟೆಯಲ್ಲಿ ಬಗೆ ಬಗೆಯ ವ್ಯಾಯಾಮ ಸಲಕರಣೆಗಳ ಜೊತೆಗೆ ಯೋಗ, ಅಧ್ಯಾತ್ಮ ಮೊದಲಾದವುಗಳೂ ಬಿಕರಿಯಾಗುತ್ತಿವೆ. ಬೀದಿ ಬೀದಿಗಳಲ್ಲಿ ನಕಲಿ ಸ್ವಾಮೀಜಿಗಳು ಈ ಫಿಟ್ನೆಸ್‌ನ ಭಾಗವಾಗಿ ಹುಟ್ಟಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಮಾನಸಿಕ, ದೈಹಿಕ ಆರೋಗ್ಯದ ಕುರಿತಂತೆ ಬಗೆ ಬಗೆಯ ಉಪನ್ಯಾಸಗಳನ್ನು ನೀಡುತ್ತಾ, ಈ ದಂಧೆಯನ್ನು ಲಾಭದಾಯಕಗೊಳಿಸುತ್ತಿದ್ದಾರೆ. ಶೇ. 50ಕ್ಕೂ ಅಧಿಕ ಮಂದಿ ಅಪೌಷ್ಟಿಕತೆಯಿಂದ ನರಳುತ್ತಿರುವ ಭಾರತದಲ್ಲಿ ಫಿಟ್ನೆಸ್ ಎನ್ನುವುದು ಶ್ರೀಮಂತ ವರ್ಗದ ಬದುಕಿನ ಶೈಲಿಯಾಗಿದೆ. ತಳಸ್ತರದ ಜನರ ಆರೋಗ್ಯ, ಶಿಕ್ಷಣ, ಹಸಿವು ಇವುಗಳು ದಿನದಿಂದದಿನಕ್ಕೆ ಕುಸಿಯುತ್ತಿರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ತಾಣಗಳಲಿ ಫಿಟ್ನೆಸ್ ಆಟದಲ್ಲಿ ತಲ್ಲೀನರಾಗಿದ್ದಾರೆ.

ಆರಂಭದಲ್ಲಿ ಕಸಬರಿಕೆ ಹಿಡಿದು ಸ್ವಚ್ಛತಾ ಆಂದೋಲನದ ಪ್ರಹಸನ ನಡೆಸಿ, ಕೋಟ್ಯಂತರ ರೂಪಾಯಿಗಳನ್ನು ಗಂಗಾನದಿಗೆ ಸುರಿದು ಇದೀಗ ಕೈ ಚೆಲ್ಲಿಕೂತಿದ್ದಾರೆ. ಸ್ವಚ್ಛತೆಯ ಹೆಸರಲ್ಲಿ ಸಂಗ್ರಹಿಸಿದ ತೆರಿಗೆಯ ಹಣವನ್ನು ಕಂಡವರು ನುಂಗಿ ಹಾಕಿದರು. ಬೀದಿ ಗುಡಿಸುವ, ಗಟಾರಗಳಿಗೆ ಇಳಿಯುವ ಪೌರ ಕಾರ್ಮಿಕರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಕೈಗಾರಿಕೆಯ ಹೆಸರಿನಲ್ಲಿ ಉದ್ಯಮಿಗಳು, ಭಕ್ತಿಯ ಹೆಸರಿನಲ್ಲಿ ಭಕ್ತರು ಗಂಗೆಯ ತಟದಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುತ್ತಲೇ ಇದ್ದಾರೆ. ಈ ಬಗ್ಗೆ ಸರಕಾರ ಅಸಹಾಯಕವಾಗಿದೆ. ಇದೀಗ ಮೋದಿ ‘ಫಿಟ್ನೆಸ್’ ಹೊಸ ಬಗೆಯ ಆಟದಲ್ಲಿ ತೊಡಗಿದ್ದಾರೆ. ಸಹೋದ್ಯೋಗಿಗಳಿಗೆ ಫಿಟ್ನೆಸ್ ಸವಾಲನ್ನು ನೀಡುವುದು, ಆ ಸವಾಲನ್ನು ಸ್ವೀಕರಿಸಿ ಅದನ್ನು ಇನ್ನೊಬ್ಬರಿಗೆ ಹಸ್ತಾಂತರಿಸುವುದು ಈ ಆಟದ ಪ್ರಧಾನ ನಿಯಮಗಳು. ದೇಶದ ಸಣ್ಣ ಸಂಖ್ಯೆಯ ಜನರಷ್ಟೇ ಬಳಸುವ ಸಾಮಾಜಿಕ ತಾಣದಲ್ಲಿ ಪ್ರಧಾನಿ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದೇ ಒಂದು ತಮಾಷೆಯ ವಿಷಯ. ‘ಕೆಲಸವಿಲ್ಲದ ಬಡಿಗ ಮಗುವಿನ ಅದೇನೋ ಕೆತ್ತಿದನಂತೆ’ ಎಂಬ ಗಾದೆಯನ್ನು ನೆನಪಿಸುತ್ತಿದೆ ಪ್ರಧಾನಿಯ ಹುಡುಗಾಟ. ಚುನಾವಣೆಯ ದಿನಗಳನ್ನು ಹೊರತು ಪಡಿಸಿ, ವಿದೇಶವನ್ನೇ ತನ್ನ ಶಾಶ್ವತ ನೆಲೆಯಾಗಿಸಿಕೊಂಡಿರುವ ನರೇಂದ್ರ ಮೋದಿಯವರು 2019ರ ಚುನಾವಣೆಗೆ ನಡೆಸುತ್ತಿರುವ ಕವಾಯತಿನ ಭಾಗ ಈ ಫಿಟ್ನೆಸ್ ಆಟ.

ನರೇಂದ್ರ ಮೋದಿಯ ‘ಫಿಟ್ನೆಸ್’ ಪ್ರಹಸನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸರಿಯಾದ ತಿರುಗೇಟನ್ನೇ ನೀಡಿದ್ದಾರೆ. ಮೋದಿಯವರು ಫಿಟ್ನೆಸ್ ಸವಾಲನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ರವಾನಿಸಿದಾಗ, ಅದಕ್ಕೆ ಪ್ರತ್ಯುತ್ತರಿಸಿದ ಅವರು ‘‘ನನಗೆ ನನ್ನ ಫಿಟ್ನೆಸ್‌ಗಿಂತ ರಾಜ್ಯದ ಫಿಟ್ನೆಸ್ ಮುಖ್ಯ. ದಯವಿಟ್ಟು ಅದಕ್ಕೆ ಸಹಕರಿಸಿ’’ ಎಂದಿದ್ದಾರೆ. ಈ ಮೂಲಕ ಫಿಟ್ನೆಸ್‌ನ ಕುರಿತಂತೆ ತನಗೆ ತಮ್ಮ ನೀತಿ ಪಾಠದ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ ಮಾತ್ರವಲ್ಲ, ಒಬ್ಬ ನಾಯಕನ ಕೆಲಸ ಸಾಮಾಜಿಕ ತಾಣಗಳಲ್ಲಿ ‘ಗೇಮ್’ ಆಡುತ್ತಾ ಕೂರುವುದಲ್ಲ, ದೇಶದ, ನಾಡಿನ ಅಭಿವೃದ್ಧಿಯ ಫಿಟ್ನೆಸ್‌ನ ಕಡೆಗೆ ಗಮನ ಹರಿಸುವುದು ಎನ್ನುವ ಹಿತೋಪದೇಶವನ್ನು ಹೇಳಿದ್ದಾರೆ. ನರೇಂದ್ರ ಮೋದಿಯ ಫಿಟ್ನೆಸ್‌ನ ಸವಾಲಿಗೂ ಈ ದೇಶದ ಫಿಟ್ನೆಸ್‌ಗೂ ಯಾವ ಸಂಬಂಧವೂ ಇಲ್ಲ. ಈ ದೇಶದ ಫಿಟ್ನೆಸ್‌ನ ಕುರಿತಂತೆ ಜಾಗತಿಕ ವರದಿಯೊಂದು ನರೇಂದ್ರ ಮೋದಿಗೆ ಸವಾಲು ಹಾಕಿತ್ತು. ದುರದೃಷ್ಟವಶಾತ್ ಆ ಸವಾಲನ್ನು ಸ್ವೀಕರಿಸುವ ಬದಲು ಮೋದಿ ಸಾಮಾಜಿಕ ತಾಣಗಳಲ್ಲಿ ತಲೆಮರೆಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ 2017ರ ಜಾಗತಿಕ ಹಸಿವಿನ ಸೂಚ್ಯಂಕ ಪ್ರಕಟವಾಗಿತ್ತು. ಅದರ ಪ್ರಕಾರ ಭಾರತದಲ್ಲಿ ಹಸಿವು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. 97ನೇ ಸ್ಥಾನದಲ್ಲಿದ್ದ ಭಾರತ 100ನೇ ಸ್ಥಾನಕ್ಕೆ ಕುಸಿದಿದೆ ಎಂದು ವರದಿ ಹೇಳಿದೆ. ಎಲ್ಲಕ್ಕಿಂತ ಆಘಾತಕಾರಿ ಅಂಶವೆಂದರೆ ನೆರೆಯ ಬಾಂಗ್ಲಾ, ನೇಪಾಳಕ್ಕಿಂತಲೂ ಹೀನಾಯ ಸ್ಥಿತಿಯಲ್ಲಿದೆ ಭಾರತ. 2013ರಲ್ಲಿ 119 ದೇಶಗಳಲ್ಲಿ ಭಾರತವು ಹಸಿವಿನ ಸೂಚ್ಯಂಕದಲ್ಲಿ 57ನೆ ಸ್ಥಾನದಲ್ಲಿತ್ತು. 2016ರ ವೇಳೆಗೆ ಅದು 97ಕ್ಕೆ ಇಳಿಯಿತು. 2017ರಲ್ಲಿ ಭಾರತದ ಹಸಿವು ಇನ್ನಷ್ಟು ಹೆಚ್ಚಿದೆ. ಅದು ಅಂತಿಮವಾಗಿ ನೂರನೇ ಸ್ಥಾನಕ್ಕೆ ಬಂದು ತಲುಪಿದೆ. ವೆಲ್ತ್ ಹಂಗರ್ ಲೈಫ್ ಸಂಸ್ಥೆಯ ನಿರ್ದೇಶಕಿಯ ಪ್ರಕಾರ ‘‘ಭಾರತದಲ್ಲಿ ಹಸಿವು ಹೆಚ್ಚಲು ಸರಕಾರ ತಳೆದಿರುವ ಆರ್ಥಿಕ ನೀತಿಯೇ ಕಾರಣ. ಸಾಮಾಜಿಕ ಬದ್ಧತೆಯಿಲ್ಲದ ಸರಕಾರದ ನೀತಿಯಿಂದಾಗಿ ಆಹಾರ ಮತು ್ತಪೌಷ್ಟಿಕತೆಯ ಭದ್ರತೆಯ ಪ್ರಮಾಣ ಕುಸಿತವಾಗುತ್ತಿದೆ’’. ಆಹಾರದ ಮೇಲಿನ ಸ್ವಾವಲಂಬನೆಯ ದರವೂ ತೀವ್ರ ಕುಸಿತ ಕಾಣುತ್ತಿದೆ. ಅಪೌಷ್ಟಿಕತೆಯ ನೇರ ಪರಿಣಾಮ ರಕ್ತ ಹೀನತೆ. ಇದು ಇಂದಿನ ಭಾರತದ ಅತಿ ದೊಡ್ಡ ಸಮಸ್ಯೆ. ಹೆರಿಗೆಯ ಸಂದರ್ಭದಲ್ಲಿ ಮಹಿಳೆಯ ಸಾವಿಗೆ ಮಾತ್ರವಲ್ಲ,

ರೋಗ ಪೀಡಿತ ಶಿಶು ಹುಟ್ಟುವುದಕ್ಕೂ ಇದು ಕಾರಣವಾಗುತ್ತಿದೆ. ಯುವಕರ ಆರೋಗ್ಯದ ಮೇಲೆ ಹಸಿವು ತನ್ನದೇ ಪರಿಣಾಮವನ್ನು ಬೀರುತ್ತದೆ. ಬಾಲ್ಯದಲ್ಲಿ ಅಪೌಷ್ಟಿಕತೆಯೊಂದಿಗೆ ಬೆಳೆಯುವ ಮಕ್ಕಳು ಯೌವನದಲ್ಲಿ ಫಿಟ್ನೆಸ್‌ನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ಹಸಿವು ಮತ್ತು ರೋಗ ಹಾಗೆಯೇ ಹಸಿವು ಮತ್ತು ಅನಕ್ಷರತೆ ಇವುಗಳಿಗೆ ನೇರ ಸಂಬಂಧವಿದೆ. ದೇಶದಲ್ಲಿ ಹಸಿವು ಹೆಚ್ಚಿದಂತೆಯೇ ರೋಗಗಳು ಹೆಚ್ಚುತ್ತವೆ. ಜೊತೆಗೆ ಅನಕ್ಷರತೆಯೂ ಅಧಿಕವಾಗುತ್ತದೆ. ಹಸಿವನ್ನು ಇಂಗಿಸದೇ ಅಕ್ಷರದ ಕುರಿತಂತೆ ಜನಸಾಮಾನ್ಯರು ಒಲವನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ದೇಶದಲ್ಲಿ ಕ್ಷಯ ರೋಗದ ಪ್ರಕರಣಗಳು ಹೊಸದಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೂ ಹಸಿವಿಗೂ ನೇರ ಸಂಬಂಧವಿದೆ. ನೋಟು ನಿಷೇಧ ಬಳಿಕದ ಸ್ಥಿತಿ ಗಂಭೀರವಾಗಿದೆ. ಸಣ್ಣ ಉದ್ದಿಮೆಗಳು ಮತ್ತು ಕೃಷಿ ಉದ್ದಿಮೆಗಳಲ್ಲಿ ತೀವ್ರ ಹಿಂಜರಿಕೆ, ನಿರುದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಹಳ್ಳಿಯಿಂದ ನಗರಗಳಿಗೆ ವಲಸೆ ಬಂದ ಕೂಲಿ ಕಾರ್ಮಿಕರು ಮರಳುತ್ತಿದ್ದಾರೆ. ಇವೆಲ್ಲವೂ ಪೌಷ್ಟಿಕತೆ, ಹಸಿವಿನ ಮೇಲೆ ಪ್ರಭಾವ ಬೀರುತ್ತದೆ. ನರೇಂದ್ರ ಮೋದಿಯ ಆರ್ಥಿಕತೆ ಸಾಮಾಜಿಕ ವಲಯವನ್ನು ತೀವ್ರವಾಗಿ ನಿರ್ಲಕ್ಷಿಸಿದೆ. ಈ ಹಿಂದೆ ಆರೋಗ್ಯ ಕ್ಷೇತ್ರಗಳಿಗೆ ಮೀಸಲಿಟ್ಟ ಅನುದಾನಕ್ಕೆ ಹೋಲಿಸಿದರೆ ಅದು ತೀವ್ರ ಇಳಿಕೆಯಾಗಿದೆ. ಹೀಗಿರುವಾಗ ಅಭಿವೃದ್ಧಿ ಹೊಂದುತ್ತಿರುವ ಭಾರತ ಫಿಟ್ನೆಸ್ ಹೊಂದುವುದಾದರೂ ಹೇಗೆ? ಆದುದರಿಂದ ಮೋದಿಯವರು ಸಾಮಾಜಿಕ ತಾಣಗಳದೊಂಬರಾಟ ನಿಲ್ಲಿಸಿ, ವಿಶ್ವ ಆರೋಗ್ಯ ಸಂಸ್ಥೆ ಹಾಕಿರುವ ಸವಾಲನ್ನು ಸ್ವೀಕರಿಸಬೇಕು. ಅದನ್ನು ನಿವಾರಿಸುವ ಬಗ್ಗೆ ಕಾರ್ಯತಂತ್ರ ರೂಪಿಸಬೇಕು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News