ಮಂಡ್ಯ : ಹೃದಯಾಘಾತದಿಂದ ಸರ್ವೇಯರ್ ಸಾವು

Update: 2018-06-16 16:07 GMT

ಮಂಡ್ಯ, ಜೂ.16: ತೀವ್ರ ಹೃದಯಾಘಾತಕ್ಕೊಳಗಾಗಿ ಸರಕಾರಿ ಸರ್ವೇಯರ್ ಸಾವನ್ನಪ್ಪಿದ ಘಟನೆ ಪಾಂಡವಪುರ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ತಾಲೂಕು ಕಚೇರಿಯ ಭೂ ಮಾಪನ ಇಲಾಖೆಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ ಎಂ.ರವಿಕುಮಾರ್(45) ಎಂಬುವವರು ಮೃತ ವ್ಯಕ್ತಿ.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ವಾಸವಾಗಿದ್ದ ಸರ್ವೇಯರ್ ಎಂ.ರವಿಕುಮಾರ್ ಅವರಿಗೆ ಶನಿವಾರ ಮಧ್ಯಾಹ್ನ 1.30ರ ಸಮಯದಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು ಎನ್ನಲಾಗಿದೆ.

ಮೃತ ರವಿಕುಮಾರ್ ಅವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ 20 ವರ್ಷಗಳಿಂದಲೂ ಸರಕಾರಿ ಸರ್ವೇಯರ್ ಆಗಿದ್ದರಲ್ಲದೇ, ತಾಲೂಕು ಸರಕಾರಿ ನೌಕರರ ಸಂಘದ ಹಾಲಿ ಖಜಾಂಚಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ತಾಲೂಕಿನ ಎರೇಗೌಡನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 10ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎಂ.ರವಿಕುಮಾರ್ ನಿಧನಕ್ಕೆ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಪರಮೇಶ್, ಮಾಜಿ ಅಧ್ಯಕ್ಷ ವೇದಮೂರ್ತಿ, ಸರ್ವೇಯರ್ ಸುರೇಶ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News