ಚಿಕ್ಕಮಗಳೂರು: ಎಂಜಿ ರಸ್ತೆ, ಅಂಬೇಡ್ಕರ್ ರಸ್ತೆ ಕಳಪೆ ಕಾಮಗಾರಿ; ಆರೋಪ

Update: 2018-06-19 16:42 GMT

ಚಿಕ್ಕಮಗಳೂರು, ಜೂ.19: ನಗರದ ಎಂಜಿ ರಸ್ತೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಕಳಪೆ ಕಾಮಗಾರಿ ನಡೆದಿದೆ ಎಂದು ಮಾಜಿ ನಗರಸಭೆ ಅಧ್ಯಕ್ಷ ಜಮಿಲ್ ಅಹ್ಮದ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಸೋಮವಾರದಿಂದ ನಗರದಲ್ಲಿ ತನಿಖೆ ಆರಂಭಿಸಿದ್ದು, ಮಂಗಳವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಕಾಮಗಾರಿಯ ಗುಣಮಟ್ಟದ ಪರಿಶೀಲನೆ ನಡೆಸಿದರು. 

ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳು ಗುಣಮಟ್ಟ ನಿಯಂತ್ರಣ ವಿಭಾಗದ ಅಧಿಕಾರಿಗಳ ತಂಡ ಮಂಗಳವಾರ ಬೆಳಿಗ್ಗೆ 11:30ರಿಂದ ಸಂಜೆಯ ವರೆಗೂ ಪರಿಶೀಲನೆ ನಡೆಸಿದರು. ಕಾಂಕ್ರೀಟ್ ರಸ್ತೆಯ ವಿಸ್ತಿರ್ಣ, ರಸ್ತೆಯ ಗುಣಮಟ್ಟ, ದಪ್ಪ, ಪುಟ್‍ಬಾತ್, ಚರಂಡಿ, ಹಾಲೋಬ್ರಿಕ್ಸ್ ಅಳವಡಿಕೆಯ ಪರಿಶೀಲನೆ ನಡೆಸಿದರು. ಸೋಮವಾರ ನಗರಸಭೆ ಕಚೇರಿಯಲ್ಲಿ ರಸ್ತೆ ಟೆಂಡರ್ ಪ್ರಕ್ರೀಯೆ, ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಮಂಗಳವಾರ ರಸ್ತೆ ಕಾಮಗಾರಿ ಗುಣಮಟ್ಟದ ಪರಿಶೀಲನೆ ನಡೆಸಿದರು. 

ತನಿಖಾ ತಂಡದಲ್ಲಿ ಲೋಕಾಯುಕ್ತ ತಾಂತ್ರಿಕ ವಿಭಾಗದ ಅಧಿಕಾರಿ ರವಿಶಂಕರ್, ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಸಚಿನ್‍ಕುಮಾರ್, ಎಇಇ ಜಗದೀಶ್, ಎಇ ರಂಗನಾಥ್ ಹಾಸನ, ನಗರಸಭೆ ಇಂಜಿನಿಯರ್ ಆನಂದ್, ಶಿವಪ್ರಸಾದ್, ದೂರುದಾರ ಜಮೀಲ್ ಅಹಮದ್ ಸೇರಿದಂತೆ ಅನೇಕರು ಇದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೂರುದಾರ ಜಮಿಲ್ ಅಹ್ಮದ್, ಲೋಕಾಯುಕ್ತ ಅಧಿಕಾರಿಗಳು ಸೋಮವಾರ ನಗರಸಭೆ ಕಚೇರಿಗೆ ಬೇಟಿ ನೀಡಿ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಹಾಗೂ ದಾಖಲಾತಿಯ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬುಧವಾರ ಸಂತೆ ಇರುವುದರಿಂದ ಎಂ.ಜಿ.ರಸ್ತೆಯ ಪರಿಶೀಲನೆಯನ್ನು ಅಧಿಕಾರಿಗಳು ಗುರುವಾರ ನಡೆಸಲಿದ್ದಾರೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಪರಿಶೀಲನೆಯ ಸಂದರ್ಭದಲ್ಲಿ ಕೆಲವೊಂದು ಲೋಪದೋಷಗಳು ಕಂಡು ಬಂದಿವೆ. ರಸ್ತೆ ಒಂದು ಅಡಿಯಷ್ಟು ದಪ್ಪ ಹೊಂದಿರಬೇಕಿತ್ತು. ಆದರೆ 22.2 ಸೆಂ.ಮೀ.ರಷ್ಟು ಮಾತ್ರ ದಪ್ಪವಿದೆ. ಬಾಕ್ಸ್ ಚರಂಡಿ ಕೂಡ ಕಳಪೆ ಕಾಮಗಾರಿ ನಡೆದಿರುವುದು ಕಂಡು ಬಂದಿದೆ. ರಸ್ತೆಯ ಪಕ್ಕದಲ್ಲಿಯೇ ಅಳವಡಿಸಿರುವ ಹಾಲೋಬ್ರಿಕ್ಸ್‍ಗಳು ಎದ್ದು ಬಂದಿವೆ. ಯುಜಿಡಿ ಚೇಂಬರ್ ಮುಚ್ಚುಳ ರಸ್ತೆಯ ಮಧ್ಯದಲ್ಲಿವೆ ಇವೆ. ಇಂತಹ ಅನೇಕ ಲೋಪದೋಷಗಳು ಕಂಡು ಬಂದಿವೆ ಎಂದರು.

ಬೆಂಗಳೂರು, ಮಂಗಳೂರು, ದಾವಣಗೆರೆ ಜಿಲ್ಲೆಗಳಲ್ಲೂ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಎಷ್ಟೇ ಮಳೆ ಬಂದರೂ ಇಂದಿಗೂ ಸುಸ್ಥಿತಿಯಲ್ಲಿದೆ. ದಾವಣಗೆರೆಯಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿ 15ರಿಂದ 20 ವರ್ಷವಾಗಿದೆ. ಇಂದಿಗೂ ಕೂಡ ಯೋಗ್ಯವಾಗಿಯೇ ಇವೆ. ಚಿಕ್ಕಮಗಳೂರು ನಗರದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿ ನಿರ್ಮಾಣ ಮಾಡಿ ಇನ್ನೂ ಉದ್ಘಾಟನೆ ಮಾಡಿಲ್ಲ ಅಷ್ಟರೊಳಗೆ ರಸ್ತೆಯಲ್ಲಿ ಜಲ್ಲಿ ಕಿತ್ತು ಬರುತ್ತಿದೆ ಎಂದರು.

ಡಾ.ಬಿ.ಆರ್ ಅಂಬೇಡ್ಕರ್ ಸಿಮೆಂಟ್ ರಸ್ತೆ ಕಾಮಗಾರಿಯಲ್ಲಿ ಅನೇಕ ಲೋಪಗಳು ಕಂಡು ಬಂದಿದೆ. ರಸ್ತೆ ದಪ್ಪದ ಪ್ರಮಾಣ ಒಂದು ಅಡಿ ಇರಬೇಕಿತ್ತು ಮುಕ್ಕಾಲು ಅಡಿ ಇದೆ. ಬಾಕ್ಸ್ ಚಿರಂಡಿ ನಿರ್ಮಾಣ ದಲ್ಲಿಯೂ ಲೋಪಕಂಡು ಬಂದಿದೆ. ರಸ್ತೆ ಎಸ್ಟಿಮೇಟ್ ಹಾಗೂ ಅಧಿಕಾರಿಗಳ ವರದಿ ಪರಿಶೀಲನೆ ಮಾಡಿ ವರದಿ ಸರಿಯಾಗಿ ನೀಡದಿರುವುದು ಕಂಡು ಬಂದಲ್ಲಿ ಮತ್ತೇ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು.
-ಜಮೀಲ್ ಅಹ್ಮದ್, ದೂರುದಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News