ಪಾರ್ಕಿಂಗ್ ವ್ಯವಸ್ಥೆ ಇದ್ದರಷ್ಟೇ ‘ಹೊಸ ಕಾರು ಖರೀದಿಗೆ ಅನುಮತಿ’: ಸಾರಿಗೆ ಸಚಿವ ತಮ್ಮಣ್ಣ

Update: 2018-06-20 13:06 GMT

ಬೆಂಗಳೂರು, ಜೂ. 20: ಪಾರ್ಕಿಂಗ್ ವ್ಯವಸ್ಥೆ ಇದ್ದರೆ ಮಾತ್ರ ಹೊಸ ಕಾರು ಖರೀದಿಗೆ ಅನುಮತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಖಾಸಗಿ ಡೀಸೆಲ್ ವಾಹನಗಳಿಗೆ ಕಡಿವಾಣ ಹಾಕಲು ಸರಕಾರ ಚಿಂತನೆ ನಡೆಸಿದ್ದು, ಹೊಸ ಡೀಸೆಲ್ ವಾಹನ ನೋಂದಣಿ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಂಚಾರ ದಟ್ಟಣೆ ನಿಯಂತ್ರಣ ದೃಷ್ಟಿಯಿಂದ ಸಮೂಹ ಸಾರಿಗೆ ವ್ಯವಸ್ಥೆ ಬಳಸುವಂತೆ ಇಲಾಖೆಯಿಂದ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗುವುದು ಎಂದ ಅವರು, ರಸ್ತೆ ಸುಧಾರಣೆಗೆ ನಗರಾಭಿವೃದ್ಧಿ ಇಲಾಖೆಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಬಸ್ ದರ ಏರಿಕೆ ಇಲ್ಲ: ಬಜೆಟ್ ಕುರಿತು ಜೂ.27 ಮತ್ತು ಜೂ.28ಕ್ಕೆ ಸಿಎಂ ಅಧ್ಯಕ್ಷತೆಯಲ್ಲಿ ಇಲಾಖೆ ಸಭೆ ನಡೆಯಲಿದ್ದು, ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಸಾರಿಗೆ ಬಸ್ ಪ್ರಯಾಣದ ದರ ಏರಿಕೆ ಸಂಬಂಧ ಚರ್ಚೆ ಮಾಡಲಾಗುವುದು. ಆದರೆ, ಬಸ್ ದರ ಏರಿಕೆ ಇಲ್ಲ. ನಷ್ಟ ಸರಿದೂಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಣೆ ನೀಡಿದರು.

ಶೀಘ್ರ ಘೋಷಣೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮಾದರಿಯಲ್ಲೇ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಲಿದ್ದು, ಉಚಿತ ಬಸ್ ಪಾಸ್ ವಿತರಣೆಗೆ ಸರಕಾರ ನಿರ್ಧರಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೂ ಸೇರಿದಂತೆ ರಾಜ್ಯ ಒಟ್ಟು 19.6ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಲಾಗಿದೆ ಎಂದ ಅವರು, ಈ ಹಿಂದೆ ಸಿದ್ದರಾಮಯ್ಯ ಉಚಿತ ಬಸ್ ಪಾಸ್ ಘೋಷಿಸಿದ್ದರು. ಅದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ತಾವು ಈಗಿನ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದು ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದರು.

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು 114 ಕೋಟಿ ರೂ. ಖರ್ಚಾಗಲಿದ್ದು, ಅದನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಲಿದೆ. ಹಿಂದುಳಿದ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲು 629ಕೋಟಿ ರೂ. ವೆಚ್ಚವಾಗಲಿದೆ. ಈಗಿರುವ ನಿಯಮಗಳಲ್ಲಿ ಸರಕಾರ ಶೇ.50ರಷ್ಟನ್ನು, ನಿಗಮ ಶೇ.25ರಷ್ಟು, ಫಲಾನುಭವಿ ವಿದ್ಯಾರ್ಥಿಗಳು ಶೇ.25ರಷ್ಟು ಹಣ ಭರಿಸಬೇಕಿತ್ತು. ಉಚಿತ ಬಸ್ ಪಾಸ್ ನೀಡಿದರೆ ವಿದ್ಯಾರ್ಥಿಗಳು ಶೇ.25ರ ಪಾಲು ಭರಿಸುವಂತಿಲ್ಲ. ಆ ಪಾಲನ್ನು ಯಾರು ಭರಿಸಬೇಕು ಎಂಬ ಗೊಂದಲವಿದೆ. ಶಿಕ್ಷಣ ಇಲಾಖೆ ಅಥವಾ ಸರಕಾರ ಹಣ ನೀಡಿದರೆ ಉಚಿತ ಬಸ್ ಪಾಸ್ ನೀಡಲು ಸಿದ್ದ ಎಂದರು.

‘ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಿಗೆ ಕಡಿವಾಣ ಹಾಕಬೇಕಾದರೆ ಎಲ್ಲ ಮಾರ್ಗಗಳು ರಾಷ್ಟ್ರೀಕರಣವಾಗಬೇಕು. ಅದು ಸದ್ಯಕ್ಕೆ ಆಗುವುದಿಲ್ಲ. ಭ್ರಷ್ಟಾಚಾರ ಕೆಳಗಿನಿಂದ ಮೇಲಿನ ಹಂತದವರೆಗೂ ಸರಿ ಹೋಗಬೇಕು. ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’
-ಡಿ.ಸಿ.ತಮಣ್ಣ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News