ರೋಗ ತಡೆಗೆ ಯೋಗ ಸಹಕಾರಿ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್
ಮಡಿಕೇರಿ, ಜೂ.21: ರೋಗ ಬಾರದಂತೆ ತಡೆಯಲು ಮತ್ತು ಆರೋಗ್ಯದ ಸಂರಕ್ಷಣೆಗೆ ಯೋಗ ಸಹಕಾರಿಯಾಗಿದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ವತಿಯಿಂದ, ಎಸ್ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಉಜಿರೆ ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಭಾರತೀಯ ವಿದ್ಯಾಭವನ, ಯೋಗ ಭಾರತಿ, ನೆಹರು ಯುವ ಕೇಂದ್ರ ಇವರ ಸಹಕಾರದಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ನಾಲ್ಕನೇ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವದ 192 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸುವ ಮೂಲಕ ಯೋಗದ ಮಹತ್ವವನ್ನು ಸಾರುತ್ತಿವೆ. ಆದ್ದರಿಂದ ಹಲವು ಖಾಯಿಲೆಗಳಿಂದ ದೂರವಿರಲು ಪ್ರಾಚೀನ ಆರೋಗ್ಯ ಪದ್ಧತಿಯಾದ ಯೋಗವನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ಶಾಸಕರು ತಿಳಿಸಿದರು.
ದೇಹದ ಒಳಗೆ ಮತ್ತು ಹೊರಗೆ ಸುಸ್ಥಿತಿ ಕಾಪಾಡಿಕೊಳ್ಳಲು ಯೋಗವೊಂದೇ ಮಾರ್ಗ. ಯೋಗದಿಂದ ನೈಪುಣ್ಯತೆ ಬರುತ್ತದೆ. ಪ್ರಚೋದನಾತ್ಮಕ ಅಂಶಗಳು ಕಡಿಮೆಯಾಗಲಿವೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಇಂದಿನ ಜಂಜಾಟದ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಹನೆಗೆ ಯೋಗವನ್ನು ಪ್ರತಿನಿತ್ಯ ರೂಢಿಸಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬಾರದು ಎಂದು ಅವರು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಶಾರೀರಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯೋಗ ಸಹಕಾರಿಯಾಗಿದೆ. ಇದರಿಂದ ಆತ್ಮ ಸದೃಢ ಹೆಚ್ಚಲಿದೆ. ಜೊತೆಗೆ ತಾಳ್ಮೆ ಬೆಳೆಸಿಕೊಳ್ಳಲು ಯೋಗ ಅನುಕೂಲ. ಆದ್ದರಿಂದ ಪ್ರತಿಯೊಬ್ಬರೂ ಯೋಗದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ ಪ್ರತಿನಿತ್ಯ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಯೋಗ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಾತನಾಡಿ ಮಾನಸಿಕ, ದೈಹಿಕ, ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಯೋಗ ಮಾಡುವುದು ಅಗತ್ಯ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಯೋಗ ತರಬೇತಿ ನೀಡುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ಮೂಳೆ ಮತ್ತು ಮಾಂಸಕಂಡಗಳ ಬಲಪಡಿಸಲು ಯೋಗ ಅಗತ್ಯ. ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಮಿತವಾಗಿ ಆಹಾರ ಸೇವೆನೆ ಮಾಡಬೇಕು. ಇದರಿಂದ ಆರೋಗ್ಯ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಯೋಗ ತರಬೇತಿ ನೀಡಿದ ಉಜಿರೆಯ ಕಾವ್ಯ ಹೆಗ್ಡೆ ಅವರು ಮಾತನಾಡಿ ಪ್ರಾಣಯಾಮ, ಯೋಗ ಮಾಡುವುದರಿಂದ ಶರೀರವನ್ನು ಮಾನಸಿಕವಾಗಿ ಮತ್ತು ಭೌದ್ಧಿಕವಾಗಿ ಹಿಡಿತ ಸಾಧಿಸಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ವೃಕ್ಷಾಸನ, ಪಾದಹಸ್ತಾಸನ, ತಡಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಉಷ್ಟ್ರಾಸನ, ಅರ್ಧ ಉಷ್ಟ್ರಾಸನ, ಶಶಾಂಕಾಸನ, ಉತ್ತಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾವಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಯೋಗ ನಡೆಯಿತು. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ರಮೇಶ್ ಪಿ.ಕೋನರೆಡ್ಡಿ, ಡಿವೈಎಸ್ಪಿ ಸುಂದರರಾಜ್ ಇತರರು ಯೋಗಾಸನ ಮಾಡಿದರು.
ಆಯುಷ್ ಅಧಿಕಾರಿ ಡಾ.ಶ್ರೀನಿವಾಸ್ ಸ್ವಾಗತಿಸಿದರು, ಡಾ.ಅಮೂಲ್ಯ ನಿರೂಪಿಸಿದರು, ಮಹೇಶ್ ಕುಮಾರ್ ಮತ್ತು ತಂಡದವರು ಪ್ರಾರ್ಥಿಸಿದರು, ಡಾ.ವಿಶ್ವತಿಲಕ್ ವಂದಿಸಿದರು.