ಕಾರ್ಯ ಒತ್ತಡದಿಂದ ಶಿಕ್ಷಕರನ್ನು ಮುಕ್ತರನ್ನಾಗಿಸುವ ಅಗತ್ಯವಿದೆ: ವಿ.ಪರಿಷತ್ ಸದಸ್ಯ ಆಯನೂರು ಮಂಜುನಾಥ್

Update: 2018-06-23 17:09 GMT

ಶಿವಮೊಗ್ಗ, ಜೂ. 23: ತಮ್ಮ ದೈನಂದಿನ ಬೋಧನಾ ಚಟುವಟಿಕೆಯೊಂದಿಗೆ ಬಿಸಿಯೂಟ, ಚುನಾವಣೆ, ಸಮೀಕ್ಷೆಯಂತಹ ಅನೇಕ ರೀತಿಯ ಕೆಲಸ-ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿರುವ ಶಿಕ್ಷಕರನ್ನು ಬೋಧನಾ ಚಟುವಟಿಕೆಗಳಿಗೆ ಸೀಮಿತಗೊಳಿಸಿ ಅನ್ಯ ಚಟುವಟಿಕೆಗಳಿಂದ ಮುಕ್ತರನ್ನಾಗಿಸುವ ಅಗತ್ಯವಿದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನೆ, ಹಾಗೂ ಸರ್ಕಾರಿ ನೌಕರರಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೌಕರರಿಂದ ಹಲವು ರೀತಿಯ ಸೇವೆಗಳನ್ನು ನಿರೀಕ್ಷಿಸುತ್ತಿರುವ ಸರ್ಕಾರಗಳು ಅವರಿಗೆ ದೊರಕಿಸಿಕೊಡಬೇಕಾದ ಸೌಲಭ್ಯಗಳ ಬಗ್ಗೆಯೂ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಇದು ಚುನಾಯಿತ ಜನಪ್ರತಿನಿಧಿಗಳೆಲ್ಲರ ಹೊಣೆಗಾರಿಕೆ ಎಂದರು. 

ದಿನದಿನವೂ ಬರುವ ಸುತ್ತೋಲೆಗಳು, ಸರ್ಕಾರದ ಹೊಸಹೊಸ ಯೋಜನೆಗಳು, ಅವುಗಳ ಅನುಷ್ಠಾನ ಮುಂತಾದವುಗಳಿಂದ ನೌಕರರ ಮಾನಸಿಕ ಸ್ಥೈರ್ಯ ಕುಸಿಯುತ್ತಿದೆ. ಆದ್ದರಿಂದ ಅಗತ್ಯ ನೌಕರರನ್ನು ನೇಮಿಸಿಕೊಳ್ಳುವ ಹಾಗೂ ಅವರಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. 

ಶಿಕ್ಷಣ ಇಲಾಖೆಗೆ ಹೊಸದಾಗಿ 26,000 ನೌಕರರನ್ನು ನೇಮಕಾತಿ ಮಾಡಿಕೊಳ್ಳುವ ಉದ್ದೇಶ ಸರಿಯಾಗಿದೆ ಆದರೆ, ಈ ಹಿಂದೆ ಈಗಾಗಲೇ ತಾತ್ಕಾಲಿಕ ಅವಧಿಗೆ ನೇಮಕವಾಗಿ ಸೇವೆ ಸಲ್ಲಿಸುತ್ತಿರುವ ನೌಕರರ ಬಗ್ಗೆಯೂ ಆಲೋಚನೆ ನಡೆಸಬೇಕು. ಏಕಾಏಕಿ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿದಲ್ಲಿ ಆ ಇಡೀ ಕುಟುಂಬವೇ ಬೀದಿಪಾಲಾಗಲಿದೆ ಎಂಬುದನ್ನು ಅರಿತುಕೊಳ್ಳಬೇಕೆಂದ ಅವರು, ಅವೈಜ್ಞಾನಿಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ಸಮಗ್ರವಾಗಿ ನೋಡಬೇಕಾದ ಅಗತ್ಯವಿದೆ ಎಂದರು.

2006ರಿಂದೀಚೆಗೆ ನೇಮಕವಾಗಿರುವ ನೌಕರರಿಗೆ ನಿವೃತ್ತಿ ವೇತನ ಇಲ್ಲವಾಗಿದೆ. ಈ ಹೊಸ ಯೋಜನೆಯ ಅನುಷ್ಠಾನದಿಂದ ನೌಕರರ ವೃದ್ಧಾಪ್ಯದ ಜೀವನ ನಿರ್ವಹಣೆ ದುಸ್ತರವಾಗಲಿದೆ. ನೌಕರರಿಗೆ ಎನ್.ಪಿ.ಎಸ್. ಸೌಲಭ್ಯ ಅನ್ವಯವಾಗುವುದಾದರೆ ಶಾಸಕರಿಗೆ ಏಕಿಲ್ಲ ಎಂದು ಪ್ರಶ್ನಿಸಿದ ಅವರು ಈ ಯೋಜನೆ ಅವೈಜ್ಞಾನಿಕವಾಗಿದ್ದು, ಇದನ್ನು ಹಿಂಪಡೆದು, ಹಿಂದಿನ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದು ಸೂಕ್ತವಾಗಿದೆ. ಇದರ ಅನುಷ್ಠಾನಕ್ಕಾಗಿ ಸದನದ ಒಳ-ಹೊರಗೆ ಹೋರಾಟ ನಡೆಸುವುದಾಗಿ ಅವರು ನುಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಅವರು ಮಾತನಾಡಿ, ಸಂಘಟನೆಯಲ್ಲಿ ಶಕ್ತಿಯಿದೆ. ಸಂಘಟನೆಯಿಂದ ಏನನ್ನಾದರೂ ಸಾಧಿಸಬಹುದಾಗಿದೆ ಎಂದ ಅವರು ನೌಕರರ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಿನ ಸದನಸಭೆಯಲ್ಲಿ ನೌಕರರ ಪರವಾಗಿ ವಿಷಯ ಪ್ರಸ್ತಾಪಿಸುವುದಾಗಿ ಅವರು ಭರವಸೆ ನೀಡಿದರು. ಎನ್.ಪಿ.ಎಸ್.ನೌಕರರ ಸಮಸ್ಯೆಗಳ ಬಗ್ಗೆ ಅರಿವು ಇದ್ದು, ಅದರ ಪರಿಹಾರಕ್ಕಾಗಿ ಸರ್ಕಾರದ ಗಮನಸೆಳೆಯಲಾಗುವುದು. ನೌಕರರ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಬಿ.ಕೆ.ಸಂಗಮೇಶ್ವರ, ಕೆ.ಬಿ.ಅಶೋಕನಾಯ್ಕ್, ಕುಮಾರ ಬಂಗಾರಪ್ಪ, ಎಸ್.ರುದ್ರೇಗೌಡ, ಎಸ್.ಪಿ.ಶೇಷಾದ್ರಿ, ಬಸವರಾಜ ಗುರಿಕಾರ್, ಯೋಗಾನಂದ್, ಪುಟ್ಟಸ್ವಾಮಿ, ಆರ್.ಶ್ರೀನಿವಾಸ್, ಅಂಜನಪ್ಪ, ಹೆಚ್.ಆರ್.ಚಂದ್ರಪ್ಪ, ಐ.ಪಿ.ಶಾಂತರಾಜ್ ಸೇರಿದಂತೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರು, ನೌಕರರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ದಕ್ಷತೆ ಎಂಬ ವಿಷಯದ ಕುರಿತು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳ ಸಹಸ್ರಾರು ಸಂಖ್ಯೆಯ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News