ಮೈತ್ರಿ ಸರಕಾರ ಐದು ವರ್ಷದ ಅಧಿಕಾರವಧಿ ಪೂರೈಸಲಿದೆ: ಸಚಿವ ಆರ್.ವಿ ದೇಶಪಾಂಡೆ
ಚಿಕ್ಕಮಗಳೂರು,ಜೂ.27: ಸರ್ಕಾರ ಟೇಕ್ಅಪ್ ಆಗಿಲ್ಲ ಅಂದಿದ್ರೆ ನಾನ್ಯಾಕೆ ಇಲ್ಲಿಗೆ ಬರುತ್ತಿದ್ದೆ. ಅಧಿಕಾರಿಗಳ ಸಭೆ ಮಾಡ್ತಿದ್ದೆ ಎಂದು ಕಂದಾಯ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಆರ್.ವಿ. ದೇಶಪಾಂಡೆ ಪ್ರಶ್ನಿಸಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಟೀಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರ ಸ್ಟ್ರಾಂಗ್ ಆಗಿದ್ದು, ಸಂವಿಧಾನ ಬದ್ಧವಾಗಿಯೇ ಇದೆ. ಜವಬ್ದಾರಿಯಿಂದ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ. ಮೈತ್ರಿ ಸರಕಾರ ಜನರ ಆಶೀರ್ವಾದದಿಂದ ಐದು ವರ್ಷ ಅಧಿಕಾರ ನಡೆಸಲಿದೆ ಎಂದರು.
ಬಜೆಟ್ ಮಂಡನೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗಾಗಲೇ ದಿನಾಂಕ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವರವರು ಪೂರಕ ಬಜೆಟ್ ಮಂಡನೆ ಮಾಡುವಂತೆ ಸಲಹೆ ನೀಡಿದ್ದಾರೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಡನೆ ಮಾಡಿದ ಬಜೆಟ್ನ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಬಜೆಟ್ನಲ್ಲಿ ಕಾಮನ್ ಮಿನಿಮಮ್ ಪ್ರೋಗ್ರಾಮ್ ಕಮಿಟಿ ರಚಿಸಲಾಗಿದೆ. ಕಮಿಟಿಯಲ್ಲಿ ಐದು ಜನ ಸಚಿವರಿದ್ದಾರೆ. ಜೂ.29ರಂದು ಸಭೆ ನಡೆಸಿ ಸರ್ಕಾರಕ್ಕೆ ಕಮಿಟಿ ವರದಿ ಮಂಡನೆ ಮಾಡಲಾಗುವುದು. ಬದಲಾವಣೆ ಮಾಡುವುದಿದ್ದರೆ ಬದಲಾವಣೆ ಮಾಡಿ ಕಾಮನ್ ಮಿನಿಮಮ್ ಪ್ರೋಗ್ರಾಮ್ನಂತೆ ಆಡಳಿತ ನಡೆಯಲಿದೆ ಎಂದರು. ಕಂದಾಯ ಇಲಾಖೆಯಲ್ಲಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಹುದ್ದೆಗಳು ಕೊರತೆ ಇದೆ. ಈ ಹುದ್ದೆಗಳ ನೇಮಕಾತಿ ಮಾಡುವ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಉಪಸ್ಥಿತರಿದ್ದರು.