ದಾವಣಗೆರೆ: ಮನೆಯ ಮೇಲ್ಚಾವಣಿ ಕುಸಿದು ವೃದ್ಧೆ ಮೃತ್ಯು
ದಾವಣಗೆರೆ,ಜೂ.27: ಮನೆಯೊಂದರ ಮೇಲ್ಚಾವಣಿ ಕುಸಿದ ಪರಿಣಾಮ ವೃದ್ಧೆಯೊಬ್ಬರು ಸಾವನ್ನಪ್ಪಿದ್ದು, ಮಹಿಳೆಯೊಬ್ಬರು ತೀವ್ರ ಗಾಯಗೊಂಡ ಘಟನೆ ನಗರದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಇಲ್ಲಿನ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸಮೀಪ ಉಪ್ಪಾರ ಹಟ್ಟಿಯ ಸುಧಾ ಅಣ್ಣಪ್ಪ (35 ವರ್ಷ) ಎಂಬುವರಿಗೆ ಸೇರಿದ ಮನೆಯ ಮೇಲ್ಚಾವಣಿ ಕುಸಿದ ಪರಿಣಾಮ ಜಾನಕಮ್ಮ (70) ಸಾವನ್ನಪ್ಪಿದ್ದು, ಸುಧಾ ಎಂಬವರ ತಲೆಗೆ ತೀವ್ರ ಪೆಟ್ಟಾಗಿದ್ದು, ಕಾಲು ಮೂಳೆ ಮುರಿದಿದೆ ಎನ್ನಲಾಗಿದೆ.
ಉಪ್ಪಾರ ಹಟ್ಟಿಯ ತನ್ನ ಮಗಳ ಮನೆಗೆ ಬಂದಿದ್ದ ಅಂದನೂರಿನ ಜಾನಕಮ್ಮ ಎದುರಿನಲ್ಲೇ ಇದ್ದ ಸುಧಾ ಮನೆ ಮುಂಭಾಗದಲ್ಲಿ ಸಂಜೆ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ಮಳೆಯಿಂದ ತೇವಗೊಂಡಿದ್ದ ಮನೆಯ ಮೇಲ್ಚಾವಣಿ ಜಾನಕಮ್ಮನ ಮೇಲೆಯೇ ಬಿದ್ದಿದ್ದು, ಪಕ್ಕದಲ್ಲೇ ಕುಳಿತಿದ್ದ ಸುಧಾರನ್ನು ಅದೇ ಓಣಿಯಲ್ಲಿ ಹೋಗುತ್ತಿದ್ದ ವ್ಯಕ್ತಿ ಎಳೆದುಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೀವ್ರಗಾಯಗೊಂಡ ಜಾನಕಮ್ಮ, ಸುಧಾ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜಾನಕಮ್ಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.