ದಾವಣಗೆರೆ: ಕುವೆಂಪು ಕನ್ನಡ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ
ದಾವಣಗೆರೆ,ಜೂ.27: ಕೃಷಿ, ಕೆರೆ-ಕಟ್ಟೆಗಳು ಮತ್ತು ವಿವಿಧ ಮಾರುಕಟ್ಟೆಗಳಿಗೆ 480 ವರ್ಷಗಳ ಹಿಂದೆಯೇ ಕೆಂಪೇಗೌಡರು ಭೂಮಿ ಮೀಸಲಿಟ್ಟು ವ್ಯವಸ್ಥಿತವಾಗಿ ನಗರ ನಿರ್ಮಿಸಿರುವುದು ಆದರ್ಶನೀಯ ಎಂದು ಶಾಸಕ ಎಸ್.ಎ.ರವೀಂದ್ರನಾಥ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 509ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದ ಕಾಲು ಭಾಗ ಜನರು ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದಾರೆ. ಅಷ್ಟೊಂದು ಸುವ್ಯವಸ್ಥಿತವಾಗಿ ಕೆಂಪೇಗೌಡರು ನಗರವನ್ನು ಯೋಜಿಸಿ ನಿರ್ಮಿಸಿದ್ದಾರೆ. ಕೆರೆ-ಕಟ್ಟೆ, ದೇವಸ್ಥಾನ, ಮಾರುಕಟ್ಟೆಗೆ ಬೇಕಾದಷ್ಟು ಭೂಮಿ ಮೀಸಲಿಟ್ಟಿದ್ದರು. ಇಂದು ದಾವಣಗೆರೆ ಸೇರಿದಂತೆ ನಗರಗಳಲ್ಲಿ ಒತ್ತುವರಿ ಮಾಡುವ ಬುದ್ದಿಯೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅವರ ಚಿಂತನೆ, ಪರಿಕಲ್ಪನೆಯನ್ನು ಜಾರಿಗೊಳಿಸಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದ ಅವರು ಸರ್ಕಾರ ಕೆಂಪೇಗೌಡರನ್ನು ಅಷ್ಟಾಗಿ ಗುರುತಿಸಿಲ್ಲ. ಮುಂದಿನ ದಿನಗಳಲ್ಲಿ ಈ ಕೆಲಸ ಆಗಲಿ ಎಂದು ಆಶಿಸಿದರು.
ಹೂವಿನಹೊಳೆ ಪ್ರತಿಷ್ಟಾನದ ಅಧ್ಯಕ್ಷ ನಂದಿ ಜೆ. ಹೂವಿನಹೊಳೆ ನಾಡಪ್ರಭು ಕೆಂಪೇಗೌಡ ಉಪನ್ಯಾಸ ನೀಡಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಕೊಡುಗೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಬೆಂಗಳೂರು ನಗರವನ್ನು ಅತ್ಯಂತ ವ್ಯವಸ್ಥಿತವಾಗಿ ಎಲ್ಲ ವರ್ಗದವರ ಅನುಕೂಲಕ್ಕಾಗಿ ವಿವಿಧ ಪೇಟೆಗಳು, ಮಾರುಕಟ್ಟೆ, ಕೃಷಿಗಾಗಿ ಕೆರೆ-ಕಟ್ಟೆ ಸ್ಥಾಪಿಸುವ ಮೂಲಕ ಜಾತ್ಯಾತೀತ ನಾಯಕತ್ವ ಮೆರೆದಿದ್ದರು. ಸರ್ಕಾರವೂ ಇವರ ಕೆಲಸ-ಸಾಧನೆ ಬಗ್ಗೆ ಸಂಶೋಧಿಸಲು ಪ್ರಾಧಿಕಾರ ರಚಿಸಿದೆ ಹಾಗೂ ಕಳೆದ ಸಾಲಿನಿಂದ ಜಯಂತಿ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಕೆಂಪೇಗೌಡರು ಜನ ಜೀವನ ವ್ಯವಸ್ಥೆಗೆ ಅಗತ್ಯವಾಗಿ ಬೇಕಾದಂತಹ ನೀರಿಗಾಗಿ ಕೆರೆಗಳನ್ನು ನಿರ್ಮಿಸಿದರು. ಸರ್ವ ವರ್ಗದ ಜನರ ಜೀವನ ವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥಿತವಾಗಿ ನಗರವನ್ನು ನಿರ್ಮಿಸಿದ್ದು ಇವರ ದೂರದೃಷ್ಟಿ, ಪರಿಕಲ್ಪನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕರತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಉಪ ಮಹಾಪೌರರಾದ ಕೆ.ಚಮನ್ಸಾಬ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಜೆ ನಾಗರಾಜ್, ಎಎಸ್ಪಿ ಉದೇಶ್, ದಾವಣಗೆರೆ ಉಪವಿಭಾಗಾಧಿಕಾರಿ ಸಿದ್ದೇಶ್ ಹಾಜರಿದ್ದರು. ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ವಂದಿಸಿದರು.