ಮಂಡ್ಯ: ಬೈಕ್ ಢಿಕ್ಕಿಯಾಗಿ ಮಹಿಳೆ ಮೃತ್ಯು

Update: 2018-06-30 18:10 GMT

ಮಂಡ್ಯ, ಜೂ.30: ತಾಲೂಕಿನ ಹಳೇ ಬೂದನೂರು ಗ್ರಾಮದ ಮಂಗಯ್ಯ ನಿಂಗಮ್ಮ ಧರ್ಮದತ್ತಿಯ ಸಂಸ್ಥಾಪಕ ದಿ.ಸಾಹುಕಾರ್ ಬಿ.ಎಂ.ರುದ್ರಪ್ಪ ಅವರ ಪತ್ನಿ ಗೌರಮ್ಮ (70) ಶನಿವಾರ ರಸ್ತೆ ಅಪಘಾತದಲ್ಲಿ ಮೃತ್ಪಟ್ಟಿದ್ದಾರೆ.

ಬೆಳಗ್ಗೆ ಮನೆ ಮುಂದಿನ ತಮ್ಮ ತೋಟಕ್ಕೆ ತೆರಳಿ ಕೆಲಸ ಮುಗಿಸಿ ಹಿಂದಿರುಗುವಾಗ ಬೆಂಗಳೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಬೈಕ್ ಢಿಕ್ಕಿಯಾಗಿದ್ದು,  ಕೂಡಲೇ ಅವರನ್ನು ಹತ್ತಿರದ ಸಾಂಜೋ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಬಿಜಿಎಸ್ ಅಪೋಲೋ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ ಕೊನೆಯುಸಿರೆಳಿದಿದ್ದಾರೆ.

ಗೌರವ್ವ ಎಂದೇ ಮನೆ ಮಾತಾಗಿದ್ದ ಅವರು ಸರಳ ನಡೆನುಡಿಗಳಿಂದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಹಲವೆಡೆ ಅಸ್ಪತ್ರೆ, ಶಾಲೆ, ಪಶು ಅಸ್ಪತ್ರೆಗಳಿಗೆ ನಿವೇಶನ, ಕಟ್ಟಡ ಮತ್ತು ಗ್ರಾಮದಲ್ಲಿ ದೇವಾಲಯ ನಿರ್ಮಾಣ, ಬಡವರಿಗೆ ನಿವೇಶನ ಹಾಗೂ ಆರೋಗ್ಯ ಶಿಬಿರ ಮುಂತಾಗಿ ಹಲವು ಸಮಾಜಮುಖಿ ಸೇವಾ ಕಾರ್ಯಗಳನ್ನು ನೆರವೇರಿಸಿ ಕೊಡುಗೈ ದಾನಿ ಎನಿಸಿಕೊಂಡಿದ್ದರು. ಶ್ರೀಯುತರ ಸೇವೆಗೆ ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸನ್ಮಾನಿಸಿ ಗೌರವಿಸಿದ್ದರು.

ಮೃತರಿಗೆ ಕವಯತ್ರಿ ಬಿ.ಆರ್.ಉಮಾದೇವಿ ಸೇರಿ ಮೂವರು ಹೆಣ್ಣು ಮಕ್ಕಳು, ಪುತ್ರ ಬಿ.ಆರ್.ಶಿವಪ್ರಸಾದ್, ಅಳಿಯರಾದ ಕನಕಪುರ ರೂರಲ್ ಎಜುಕೇಷನ್ ಸೊಸೈಟಿಯ ಮಾಜಿ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ, ನಿವೃತ್ತ ಆರೋಗ್ಯಾಧಿಕಾರಿ ಡಾ.ಕೃಷ್ಣಪ್ರಸಾದ್ ಇದ್ದಾರೆ. ಜು.1 ರಂದು ಬೆಳಗ್ಗೆ ಹಳೇ ಬೂದನೂರಿನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

ಸಂತಾಪ: ಗೌರಮ್ಮ ಅವರ ನಿಧನಕ್ಕೆ ಶಾಸಕ ಎಂ.ಶ್ರೀನಿವಾಸ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಪಂ ಸದಸ್ಯ ಎಚ್.ಎನ್.ಯೋಗೇಶ್, ಕರ್ನಾಟಕ ಗೃಹ ಮಂಡಳಿ ನಿರ್ದೇಶಕ ಬಿ.ಸಿ.ಶಿವಾನಂದ್, ಮುಖಂಡರಾದ ಬಿ.ಟಿ.ಅಂಕಯ್ಯ, ಬಿ.ಟಿ.ಸಿದ್ದರಾಮಯ್ಯ, ಬಿ.ಟಿ.ಚಂದ್ರಶೇಖರ್, ಬೂದನೂರು ಸ್ವಾಮಿ, ಅಮರಾವತಿ ಚಂದ್ರಶೇಖರ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News