ಜಾತಿ ಮೂಲಕ ಸಮಾಜ ಸಂಕುಚಿತವಾಗುತ್ತಿದೆ: ಡಾ.ತುಕರಾಂ ವಿಷಾದ

Update: 2018-06-30 18:13 GMT

ಮಂಡ್ಯ, ಜೂ.30: ಇಂದು ಜಾತಿಯ ಮೂಲಕ ಇಡೀ ಸಮಾಜ ಸಂಕುಚಿತವಾಗುತ್ತಿದ್ದು, ಎಡ-ಬಲ ಎಂದು ದಲಿತ ಸಂಘಟನೆಯ ನಾಯಕರು ಜಗಳವಾಡುತ್ತಿದ್ದಾರೆ ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ತುಕರಾಂ ವಿಷಾದಿಸಿದ್ದಾರೆ.

ನಗರದ ಗಾಂಧಿಭವನದಲ್ಲಿ ದಲಿತ ಸಂಘರ್ಷ ಸಮಿತಿ ಶನಿವಾರ ಆಯೋಜಿಸಿದ್ದ ದಸಂಸ  ಚಿಕ್ಕಾಡೆ ಮಹದೇವಪ್ಪ  ಮತ್ತು ಹಲ್ಲೇಗೆರೆ ರಾಮಚಂದ್ರು ಹೋರಾಟದ ನೆನಪುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಲಿತ ಮುಖಂಡರು ಎಡ-ಬಲ ವಿಚಾರ ಬದಿಗಿಟ್ಟು ನಾಲ್ಕು ದಶಕಗಳ ಕರ್ನಾಟಕದ ದಸಂಸ ಚಳವಳಿಯ ಹುಟ್ಟು ಬೆಳವಣಿಗೆ ವಿಕಾಸವಾಗುವುದಕ್ಕೆ ಸ್ಫೂರ್ತಿ ನೀಡಿದ ಇತಿಹಾಸದ ಬಗ್ಗೆ ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಅವರು ಕರೆ ನೀಡಿದರು.

ನಿಮ್ಮ ಹೋರಾಟ, ಸ್ಫೂರ್ತಿ ಎಲ್ಲ ಜನಪರ ಚಳವಳಿಗಳಿಗೆ ನಾಂದಿಯಾಗಿದೆ. ದಲಿತ ಚಳವಳಿ ಜಾತಿ ಕಾರಣಕ್ಕಾಗಿ ಹೋರಾಟ ಮಾಡಿಲ್ಲ. ಸಮಾಜದಲ್ಲಿರುವ ಜಾತಿ ವಿಮೋಚನೆಗಾಗಿ ಕೆಲಸ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹದೇವಪ್ಪ ಹಾಗೂ ರಾಮಚಂದ್ರು ಹಲವು ವರ್ಷ ನಮ್ಮೊಡನೆ ಇರಬೇಕಿತ್ತು. ವೈಚಾರಿಕವಾಗಿ ಯೋಚಿಸುತ್ತಿದ್ದ ಗೆಳೆಯರು ಇಷ್ಟು ಬೇಗ ಅಗಲಿರುವುದು ನೋವಿನ ವಿಷಯವಾಗಿದೆ. ಚಳವಳಿಯ ನಾಯಕರು ಆರೋಗ್ಯವನ್ನು ಕಾಪಾಡಿಕೊಂಡು ತಮ್ಮ ಕುಟುಂಬ, ಬಂಧು ಬಳಗವನ್ನು ನೆನಪಿಸಿಕೊಂಡು ಹೋರಾಟ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ವಾಸು ಮಾತನಾಡಿ, ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸುತ್ತಿದ್ದು, ಅದನ್ನು ತಡೆಯಲು ಹೊಸ ರೀತಿಯ ಆಂದೋಲನ ಪ್ರಾರಂಭವಾಗಬೇಕಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ನಾವು ಎಲ್ಲರೂ ಒಂದುಗೂಡಿ ಚಲಿಸಬೇಕಿದೆ ಎಂದರು.
ಹಲವು ದಶಕಗಳಿಂದ ಚಳವಳಿ ಕಟ್ಟಿರುವ ದಸಂಸ ನಾಯಕರ ಬಗ್ಗೆ ಕೆಲವರು ಲಘುವಾಗಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ದಾಳಿಗಳನ್ನು ಎದುರಿಸಿ ಸಂಘಟನೆ ಕಟ್ಟಿದ್ದಾರೆ. ದಾಳಿ ನಡೆಯುವ ಆತಂಕದಲ್ಲಿ ಸಂಘಟನೆಗೆ ಬೆನ್ನೆಲುಬಾಗಿ ನಿಂತು ನಾಡಿನ ಉದ್ದಗಲಕ್ಕೂ ಓಡಾಡಿ ಕೆಲಸ ಮಾಡುವ ಜನಪರ ಚಳವಳಿಯ ಕಾರ್ಯಕರ್ತರ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಿದೆ ಎಂದು ಅವರು ಸಲಹೆ ನೀಡಿದರು.

ಇಂದು ಸಾಮಾಜಿಕ ಚಳವಳಿ ನಡೆಯುತ್ತಿರುವ ಸಂದರ್ಭದಲ್ಲಿ ಜನರು ಅವರನ್ನು ಸುಮ್ಮನೆ ನೋಡಿಕೊಂಡು ಹೋಗುವಂತಾಗಿದೆ. ಅವರು ಯಾವ ಕಾರಣಕ್ಕೆ ಚಳವಳಿ ರೂಪಿಸುತ್ತಿದ್ದಾರೆ. ಅದರಿಂದ ಸಮಾಜಕ್ಕೆ ಏನು ಸಂದೇಶವಿದೆ ಎಂಬುದನ್ನು ತಿಳಿಯುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ ಎಂದು ಅವರು ವಿಷಾದಿಸಿದರು.

ಮೈಸೂರು ವಿವಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಸಂಯೋಜನಾಧಿಕಾರಿ ಡಾ.ನರೇಂದ್ರಕುಮಾರ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಚ್.ಸಿ.ಸಿದ್ದಲಿಂಗಯ್ಯ, ಪತ್ರಕರ್ತ ಸೋಮಶೇಖರ್ ಕೆರಗೋಡು, ಸಿಐಟಿಯುನ ಸಿ.ಕುಮಾರಿ ಮಾತನಾಡಿದರು.  ದಸಂಸ ರಾಜ್ಯಸಂಚಾಲಕ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು.

ಹುರುಗಲವಾಡಿ ರಾಮಯ್ಯ, ಮಂಜುಳಾ, ಗಾಮನಹಳ್ಳಿ ಸ್ವಾಮಿ ಹೋರಾಟದ ಹಾಡುಗಳನ್ನು ಹಾಡಿದರು. ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ಶಂಕರ್, ಮುಖಂಡರಾದ ಹೆಬ್ಬಾಲೆ ಲಿಂಗರಾಜು, ಬ್ಯಾಡರಹಳ್ಳಿ ಪ್ರಕಾಶ್, ಆಲಗೂರು ಶಿವಕುಮಾರ್, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News