ಮಂಡ್ಯ: ಕ್ರಷರ್ ಮಾಲಕನ ಮೇಲೆ ಹಲ್ಲೆ; ಮೂವರ ಬಂಧನ

Update: 2018-07-04 16:54 GMT

ಮಂಡ್ಯ, ಜು.4: ಜಲ್ಲಿ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿದ್ದೇಗೌಡ, ಸುದರ್ಶನ, ಪ್ರಕಾಶ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ಯೋಗೇಶ್ ಮತ್ತು ಯೋಗೇಶ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕಾಶ್, ಸಿದ್ದೇಗೌಡ, ಸುದರ್ಶನ್, ಯೋಗೇಶ್ ಹಾಗೂ ಯೋಗೇಶ ಎಂಬುವರು ಶ್ರೀರಂಗಪಟ್ಟಣದಲ್ಲಿ ಜಲ್ಲಿ ಮಾರಾಟ ಮಾಡುತ್ತಿದ್ದು, ಲೋಪದೋಷದ ಕಾರಣಕ್ಕೆ ಇವರ ಬಳಿ ಹೆಚ್ಚು ವ್ಯಾಪಾರ ನಡೆಯುತ್ತಿರಲಿಲ್ಲ ಎನ್ನಲಾಗಿದೆ. ತಮ್ಮಲ್ಲಿದ್ದ ಮಾಲನ್ನು ಮಾರಾಟ ಮಾಡಬೇಕು ಎನ್ನುವ ದೃಷ್ಟಿಯಿಂದ ಅರಕೆರೆ ಬಳಿ ಇರುವ ಕಾವೇರಿ ಸ್ಟೋನ್ ಕ್ರಷರ್ ಮಾಲಕ ಸೋಮಶೇಖರ್ ಹಾಗೂ ರಘು ಅವರ ಮೊರೆ ಹೋಗಿ ವ್ಯವಹಾರ ಕುದುರಿಸಲು ಪ್ರಯತ್ನಿಸಿದ್ದರು. ಈ ಬಗ್ಗೆ ತಾವು ಸಕಾರಾತ್ಮಕವಾಗಿ ಸ್ಪಂದಿಸಿರದ ಕಾರಣ ಮಂಗಳವಾರ ತಡರಾತ್ರಿ ಐವರು ಆರೋಪಿಗಳು ಏಕಾಏಕಿ ಬಂದು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಘು ಮತ್ತು ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News