ಇ-ಕಚೇರಿ ತಂತ್ರಾಂಶ ಕಾರ್ಯಾಗಾರಕ್ಕೆ ಚಾಲನೆ: ತಂತ್ರಾಂಶ ಸದುಪಯೋಗಕ್ಕೆ ಕೊಡಗು ಜಿಲ್ಲಾಧಿಕಾರಿ ಕರೆ

Update: 2018-07-04 18:14 GMT

ಮಡಿಕೇರಿ, ಜು.4: ಸರ್ಕಾರದ ವಿವಿಧ ಇಲಾಖೆಗಳ ಕಚೇರಿಯಲ್ಲಿ ತ್ವರಿತ ಕೆಲಸಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸರ್ಕಾರವು ಸಿದ್ಧಪಡಿಸಿರುವ ಇ-ಕಚೇರಿ ತಂತ್ರಾಂಶದ ಕಾರ್ಯಗಾರಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಚಾಲನೆ ನೀಡಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇ-ಕಚೇರಿ ತಂತ್ರಾಂಶ ಕುರಿತು ನಡೆದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಇ-ಕಚೇರಿ ತಂತ್ರಾಂಶದಿಂದ ಕಚೇರಿ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲವಾಗಲಿದೆ. ಜೊತೆಗೆ ಸಿಬ್ಬಂದಿಗಳು ಈ ಕಾರ್ಯಗಾರದ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. 

ಇ-ಕಚೇರಿ ತಂತ್ರಾಂಶದಿಂದ ಅನಗತ್ಯ ಕಾಲವಿಳಂಬವಾಗುವುದು ತಪ್ಪಲಿದ್ದು, ಸಾರ್ವಜನಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಸಿಬ್ಬಂದಿಗಳಿಗೆ ತ್ವರಿತವಾಗಿ ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಲು ಅನುಕೂಲವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. 

ಸಿಬ್ಬಂದಿಗಳಿಗೆ ಇ-ಕಚೇರಿ ತಂತ್ರಾಂಶದ ಬಗ್ಗೆ ಮುಖ್ಯ ತರಬೇತಿದಾರರಾದ ಲಕ್ಮೀಶ ಅವರು ಮಾಹಿತಿ ನೀಡಿ ಇಂದಿನ ಶರವೇಗದ ಬದುಕಿನಲ್ಲಿ ಸಕಾಲದಲ್ಲಿ ಸಾರ್ವಜನಿಕ ಸೇವೆಯನ್ನು ಕಲ್ಪಿಸುವುದು, ಸರ್ಕಾರದ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಇ-ಕಚೇರಿ ತಂತ್ರಾಂಶವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಮಾಹಿತಿ, ಸೌಲಭ್ಯಗಳನ್ನು ಕಲ್ಪಿಸುವಂತಾಗಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಉಪ ವಿಭಾಗಾಧಿಕಾರಿ ಡಾ.ನಂಜುಂಡೆಗೌಡ, ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿ ಅಜಿತ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News