ಮಡಿಕೇರಿ: 'ಯಾರಿಗಾಗಿ ನಮ್ಮವರ ಬಲಿದಾನ' ಯೋಧ ನಮನ ಕಾರ್ಯಕ್ರಮ

Update: 2018-07-08 12:29 GMT

ಮಡಿಕೇರಿ, ಜು.8: ದೇಶ ಕಾಯುವುದು ಒಂದು ಪುಣ್ಯದ ಕೆಲಸವಾಗಿದ್ದು, ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆನ್ನುವ ಕನಸು ಕಾಣುವ ಬದಲು ಯೋಧನಾಗಬೇಕೆನ್ನುವ ಅಭಿಲಾಷೆಯನ್ನು ಹೊಂದಬೇಕೆಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ತಿಳಿಸಿದ್ದಾರೆ.

ಕೊಡಗು ಯೋಧಾಭಿಮಾನಿ ಬಳಗದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ 'ಯಾರಿಗಾಗಿ ನಮ್ಮವರ ಬಲಿದಾನ' ಯೋಧ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಡಿಯಲ್ಲಿ ರಾತ್ರಿ ಹಗಲೆನ್ನದೆ ದೇಶ ಕಾಯುವ ಯೋಧರನ್ನು ನಿರ್ಲಕ್ಷಿಸುವುದು ಕೂಡ ದೇಶ ದ್ರೋಹವೆಂದು ಅಭಿಪ್ರಾಯಪಟ್ಟ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನೀಯರನ್ನು ಕೂಡ ನಾವು ಇಂದು ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. 

ಕುಟುಂಬವನ್ನು ವರ್ಗವನ್ನು ಮತ್ತು ಜೀವನದ ಎಲ್ಲಾ ಸುಖಗಳನ್ನು ಬಿಟ್ಟು ದೇಶ ರಕ್ಷಣೆಗಾಗಿ ಸದಾ ಕಟ್ಟೆಚ್ಚರದಿಂದ ಗಡಿ ಕಾಯುವ ಯೋಧರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು. ಪ್ರತಿಯೊಬ್ಬರಲ್ಲಿ ದೇಶದ ಬಗ್ಗೆ ಗೌರವ ಹೆಚ್ಚಾದಾಗ ಮಾತ್ರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ದೇಶ ಕಾಯುವ ವೀರ ಸೇನಾನಿಯನ್ನಾಗಿ ಮಾಡುವ ಬಗ್ಗೆ ಗುರಿ ಹೊಂದಬೇಕೆಂದು ಕಂಡ್ರತಂಡ ಸಿ. ಸುಬ್ಬಯ್ಯ ಕರೆ ನೀಡಿದರು.

ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ ಮಾತನಾಡಿ, ಯುವ ಸಮೂಹ ರಾಷ್ಟ್ರಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದರು. ದೇಶ ಕಾಯುವ ಪ್ರತಿಯೊಬ್ಬ ಯೋಧನನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸುವುದು ಅದ್ಭುತ ಕಾರ್ಯವಾಗಿದೆ ಎಂದರು. 

ಸಾಮಾಜಿಕ ಚಿಂತಕ ಅರ್ಜುನ್ ದೇವಾಲದಕೆರೆ ಮಾತನಾಡಿ, ಸೈನಿಕರ ಶ್ಲಾಘನೀಯ ಸೇವೆ ಮತ್ತು ಬಲಿದಾನವನ್ನು ಕಡೆಗಣಿಸಿ ಕೆಲವು ರಾಜಕೀಯ ವ್ಯಕ್ತಿಗಳು, ಸಿನಿಮಾ ನಟರು ಸೇನೆಯ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದಕರ. ದೇಶ ಕಾಯುವ ಸೈನಿಕರ ಬಗ್ಗೆ ಗೌರವ ಭಾವನೆ ಇನ್ನಷ್ಟು ಹೆಚ್ಚಾಗಬೇಕಿದೆ ಎಂದು ಹೇಳಿದರು. ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು ಎಂಬುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾಗಿದೆ. ಎ.ಬಿ.ಸಿ.ಡಿ ಎಂಬುವುದನ್ನು ಎ ಫಾರ್ ಆಪಲ್, ಬಿ ಫಾರ್ ಬಾಲ್, ಎಂಬುದನ್ನು ಬಿಟ್ಟು ಎ ಫಾರ್ ಅಬ್ದುಲ್ ಕಲಾಂ, ಬಿ ಫಾರ್ ಭಗತ್ ಸಿಂಗ್, ಸಿ ಫಾರ್ ಚಂದ್ರಶೇಖರ್ ಆಜಾದ್ ಎಂದು ಹೇಳಿಕೊಡುವಂತೆ ಸಲಹೆ ನೀಡಿದರು.

ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಸೈನಿಕರ ಪರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವವರು ತ್ಯಾಗ ಮನೋಭಾವ ಮತ್ತು ನಿಸ್ವಾರ್ಥವನ್ನು ಪ್ರದರ್ಶಿಸಬೇಕಾಗಿದೆ ಎಂದರು. ಶತ್ರುಗಳು ದೇಶದ ಒಳಗೆ ನುಸುಳದಂತೆ ಸದಾ ಕಟ್ಟೆಚ್ಚರದಿಂದ ಕಾಯುತ್ತಿರುವ ಸೈನಿಕರ ಬಗ್ಗೆ ಪ್ರತಿಯೊಬ್ಬರು ಪ್ರಾರ್ಥಿಸಬೇಕಾಗಿದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭ ಮಾತ್ರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಸರಿಯಲ್ಲವೆಂದ ಅವರು ದೇಶ ಕಾಯುವ ಸೇನಾನಿಯನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಗೌರವಿಸುವುದು ಮತ್ತು ಸ್ಮರಿಸುವುದರಿಂದ ದೇಶ ಸೇವೆ ಮಾಡುವ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರ ಕುಟುಂಬದ ಸದಸ್ಯರು ಹಾಗೂ ಗಾಯಾಳು ಸೈನಿಕರನ್ನು, ನಿವೃತ್ತರನ್ನು ಯೋಧಾಭಿಮಾನಿ ಬಳಗದ ಪ್ರಮುಖರು ಆತ್ಮೀಯವಾಗಿ ಸನ್ಮಾನಿಸಿದರು. 

ಬಳಗದ ಪದಾಧಿಕಾರಿಗಳಾದ ಸತ್ಯ, ಗುರುಪ್ರಸಾದ್, ಮಿನಾಜ್ ಪ್ರವೀಣ್, ವಿಜಯ್ ಹಾನಗಲ್, ದೀಪಕ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ರಾಷ್ಟ್ರಧ್ವಜದೊಂದಿಗೆ ನಗರದಲ್ಲಿ ದ್ವಿಚಕ್ರ ವಾಹನಗಳ ಮೆರವಣಿಗೆ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News