×
Ad

ಮಾತಿಗೆ ತಪ್ಪಿ ರೈತರಿಗೆ ಮೋಸ ಮಾಡಿದ ಕುಮಾರಸ್ವಾಮಿ: ರಾಜ್ಯ ರೈತ ಸಂಘದ ಮುಖಂಡ ನಾಗೇಂದ್ರ

Update: 2018-07-08 22:03 IST

ಮೈಸೂರು,ಜು.8: ರಾಜ್ಯದ ರೈತರು ಪಡೆದಿರುವ ಬೆಳೆಸಾಲ 53 ಸಾವಿರ ಕೋಟಿಗಳನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸುಸ್ಥಿ ಉಳಿಸಿಕೊಂಡಿರುವ ರೈತರ ಬೆಳೆಸಾಲ ಕೇವಲ 2 ಲಕ್ಷ ರೂ.ಗಳನ್ನು ಮನ್ನಾ ಮಾಡುವುದಾಗಿ ತೀರ್ಮಾನಿಸಿ ಮಾತಿಗೆ ತಪ್ಪಿ ರೈತ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರ ಮಾತನ್ನು ನಂಬಿ ಭಾರೀ ನಿರೀಕ್ಷೆಯಲ್ಲಿದ್ದ ರೈತರು ಅಘಾತ ಮತ್ತು ಆತಂಕಕ್ಕೆ ಈಡಾಗಿದ್ದು, ಈ ಅಘಾತದಿಂದಾಗಿ ಚಾಮರಾಜನಗರ ಜಿಲ್ಲೆಯ ಚಿಕ್ಕಸ್ವಾಮಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೇ ನೇರ ಹೊಣೆಗಾರರು ಎಂದು ಆರೋಪಿಸಿದರು.

ರೈತರ ಸಾಲ ಮನ್ನಾ ಮಾಡಿ ಎಂದು ಯಾರು ಇವರ ಮನೆಬಾಗಿಲಿಗೆ ಹೋಗಿರಲಿಲ್ಲ. ಅವರೇ ಪಕ್ಷದ ಪ್ರಣಾಳಿಕೆಯಲ್ಲಿ ಘೊಷಿಸಿ ಈಗ ವಿಫಲರಾಗಿದ್ದಾರೆ. ಒಮ್ಮೆ ರೈತರ ಸಂಪೂರ್ಣ ಸಾಲ ಮನ್ನಾ ಎಂದು ಹೇಳಿದರ ಅವರು, ಈಗ ಅಳೆದು ತೂಗಿ ಕೇವಲ ಸುಸ್ಥಿಯಾದವರ 2 ಲಕ್ಷ ರೂ.ವರೆಗಿನ ಸಾಲ ಮಾತ್ರ ಮನ್ನಾ ಎಂದು ಹೇಳಿದ್ದಾರೆ. ಆದರೆ ಇದರಲ್ಲೂ ಕಡಿತಗೊಳಿಸಿ 34 ಸಾವಿರ ಕೋಟಿ.ರೂ. ಬದಲು 15 ಸಾವಿರ ಕೋಟಿ ರೂ.ಗಳನ್ನಷ್ಟೇ ಮನ್ನಾ ಮಾಡಿರಬಹುದು ಎಂಬ ಅನುಮಾನ ಮೂಡುತ್ತಿದೆ ಎಂದರು.

ಸಾಲದ ಬಾಧೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಚಿಕ್ಕಸ್ವಾಮಿ ಮತ್ತು ವಿಜಯಪುರ ಜಿಲ್ಲೆಯ ಸಂಗಣ್ಣ ಸಂಗಬಸಪ್ಪ ಕಪನೂರ ಮತ್ತು ಬಾಗಲಕೋಟೆ ಜಿಲ್ಲೆಯ ರಾಮಪ್ಪ ಅಂಬಿ ಎಂಬುವವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುಟುಂಬದವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಯಾಗಿ ಅವರ ಸಂಸಾರದ ಬಾರವನ್ನು ಇಳಿಸಬೇಕು ಎಂದು ಒತ್ತಾಯಿಸಿದರು.

ಹೋರಾಟದ ಕುರಿತು ನಾಳೆ ಸಭೆ: ಚುನಾವಣಾ ಪೂರ್ವ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೂ ಮುಖ್ಯಮಂತ್ರಿ ಆದ ನಂತರ ರೈತರ ಸಾಲ ಮನ್ನಾ ಘೋಷಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದ ಕುಮಾರಸ್ವಾಮಿಯವರು ಸುಸ್ಥಿ ಇರುವ ರೈತರ ಬೆಳೆಸಾಲ 2 ಲಕ್ಷ ರೂ. ಮಾತ್ರ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ರಾಜ್ಯದ ರೈತರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.
ಮಾತಿಗೆ ತಪ್ಪಿದ ಕುಮಾರಸ್ವಾಮಿಯವರ ನಡವಳಿಕೆಯ ಬಗ್ಗೆ ಸಂಘವು ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಕುರಿತು ಚರ್ಚಿಸಲು ಸಭೆ ಕರೆದಿರುವುದಾಗಿ ತಿಳಿಸಿದರು.

ಇಸ್ರೇಲ್ ಮಾದರಿ ಕೈಬಿಡಬೇಕು: ಇಸ್ರೇಲ್ ಪದ್ದತಿ ಬೇಸಾಯವು ಅಗ್ರಿ ಬಿಸಿನೆಸ್ ಲಾಬಿಯಾಗಿದ್ದು, ಇದರಿಂದ ರೈತ ಸಮುದಾಯ ಮತ್ತೊಂದು ಸಂಕಷ್ಟಕ್ಕೆ ಈಡಾಗುತ್ತದೆ. ಆದ್ದರಿಂದ ಈ ಪದ್ದತಿ ಪ್ರಯೋಗದ ಬಗ್ಗೆ ಬಜೆಟ್‍ನಲ್ಲಿ ಘೋಷಿಸಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸರಕಾರಿ ಶಾಲೆ ಮುಚ್ಚುವುದನ್ನು ಕೈಬಿಡಬೇಕು: ಕಡಿಮೆ ಸಂಖ್ಯೆ ವಿದ್ಯಾರ್ಥಿಗಳು ಇದ್ದಾರೆ ಎಂಬ ಕಾರಣಕ್ಕಾಗಿ ಅಂತಹ 26 ಸಾವಿರಕ್ಕಿಂತಲೂ ಹೆಚ್ಚಿನ ಶಾಲೆಗಳನ್ನು ಮುಚ್ಚುವ ಸರ್ಕಾರದ ತೀರ್ಮಾನವನ್ನು ಸಂಘವು ಖಂಡಿಸುತ್ತದೆ. ಪ್ರಾಥಮಿಕ ಶಾಲೆಯಿಂದ ಆಂಗ್ಲ ಬಾಷೆಯನ್ನು ಒಂದು ಪ್ರತ್ಯೇಕ ಪಠ್ಯವಾಗಿ ಕಲಿಸುವುದಕ್ಕೆ ಸಂಘದ ವಿರೋಧವಿಲ್ಲ. ಆದರೆ ಪ್ರಾಥಮಿಕ ಶಾಲೆಯಿಂದಲೇ ಆಂಗ್ಲ ಮಾಧ್ಯಮವನ್ನು ಜಾರಿಗೆ ತರುವುದಕ್ಕೆ ವಿರೋಧವಿದೆ ಎಂದು ಹೇಳಿದರು.

ಸಾಲ ಮನ್ನಾ ಒಪ್ಪಿರುವವರು ರೈತರ ಬಗ್ಗೆ ಕಾಳಜಿ ಇಲ್ಲದವರು: ಬಜೆಟ್‍ನಲ್ಲಿ ಕುಮಾರಸ್ವಾಮಿ 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಿರುವುದನ್ನು ಕೆಲವು ರೈತರು ಸ್ವಾಗತ ಮಾಡಿರುವುದ ಖಂಡನೀಯ. ಇವರು ನಿಜವಾದ ರೈತಪರ ಕಾಳಜಿ ಇಲ್ಲದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕೇಶ್ ರಾಜೇಅರಸ್, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ವಿಜೇಂದ್ರ ಉಪಸ್ಥಿತರಿದ್ದರು.

ವಾಡಿಕೆಯಂತೆ ಕೇಂದ್ರ ಸರಕಾರ ರೈತರ ಬೆಳೆಗೆ ಬೆಲೆ ನಿಗದಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಕೊಡುಗೆ ಏನೂ ಇಲ್ಲ, ಎಸ್‍ಎಪಿ ಆಧಾರದಲ್ಲಿ ಭತ್ತಕ್ಕೆ 1700 ರೂ. ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ಒಂದು ಕ್ವಿಂಟಾಲ್ ಭತ್ತ ಬೆಳೆಯುವ ರೈತ 2.500  ರೂ. ಖರ್ಚು ಮಾಡುತ್ತಾನೆ. ಅದೇಗೆ ಇವರು ಬೆಂಬಲ ಬೆಲೆ ನೀಡುತ್ತಾರೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಮತ ಬ್ಯಾಂಕ್ ಪಡೆಯುವ ಒಂದು ತಂತ್ರವಷ್ಟೆ.
-ಬಡಗಲಪುರ ನಾಗೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News