ಶಿವಮೊಗ್ಗ: ಖಾಸಗಿ ಬಸ್ ಢಿಕ್ಕಿ; ಬೈಕ್ ಸವಾರ ಮೃತ್ಯು, ಯುವತಿ ಗಂಭೀರ

Update: 2018-07-10 15:21 GMT

ಶಿವಮೊಗ್ಗ, ಜು. 10: ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಹಿಂಬದಿ ಕುಳಿತಿದ್ದ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಸಮೀಪದ ಉಳಕೊಪ್ಪದಲ್ಲಿ ಸೋಮವಾರ ನಡೆದಿದೆ. 

ಕುಂದಾಪುರ ತಾಲೂಕಿನ ಕುನ್ಯಾಡಿ ಗ್ರಾಮದ ನಿವಾಸಿ ಪ್ರಸನ್ನ ಶೆಟ್ಟಿ (26) ಮೃತಪಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅಜ್ರಿ ಗ್ರಾಮದ ನಿವಾಸಿ ಅರ್ಪಿತ ಶೆಟ್ಟಿ (23) ಗಂಭೀರವಾಗಿ ಗಾಯಗೊಂಡ ಯುವತಿ ಎಂದು ಗುರುತಿಸಲಾಗಿದೆ. ಯುವತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಯುವಕ ಹಾಗೂ ಯುವತಿ ಸ್ನೇಹಿತರಾಗಿದ್ದರು. ಬೈಕ್‍ನಲ್ಲಿ ಕೆಲ ಪ್ರೇಕ್ಷಣಿಯ ಸ್ಥಳಗಳಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಖಾಸಗಿ ಬಸ್ ಚಾಲಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News