ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ತಗ್ಗದ ಮಳೆಯ ಅಬ್ಬರ: ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಹೆಚ್ಚಳ

Update: 2018-07-10 18:05 GMT

ಶಿವಮೊಗ್ಗ, ಜು.10: ಶಿವಮೊಗ್ಗ ಜಿಲ್ಲೆಯ ಹಲವೆಡೆ ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಆರ್ಭಟ ಮುಂದುವರಿದಿದೆ. ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. 

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಸ್ತಿಕಟ್ಟೆಯಲ್ಲಿ 200 ಮಿ.ಮೀ., ಹುಲಿಕಲ್‍ನಲ್ಲಿ 198 ಮಿ.ಮೀ., ಯಡೂರಿನಲ್ಲಿ 172 ಮಿ.ಮೀ., ಮಾಣಿಯಲ್ಲಿ 120 ಮಿ.ಮೀ. ವರ್ಷಧಾರೆಯಾಗಿದೆ. ಉಳಿದಂತೆ ತೀರ್ಥಹಳ್ಳಿಯಲ್ಲಿ 77.40 ಮಿ.ಮೀ., ಹೊಸನಗರದಲ್ಲಿ 59.60 ಮಿ.ಮೀ., ಶಿವಮೊಗ್ಗದಲ್ಲಿ 1.40 ಮಿ.ಮೀ., ಭದ್ರಾವತಿಯಲ್ಲಿ 3.20 ಮಿ.ಮೀ., ಸಾಗರದಲ್ಲಿ 38.40 ಮಿ.ಮೀ., ಶಿಕಾರಿಪುರದಲ್ಲಿ 3.80 ಮಿ.ಮೀ. ಹಾಗೂ ಸೊರಬದಲ್ಲಿ 25.10 ಮಿ.ಮೀ.  ಮಳೆಯಾಗಿದೆ. 

ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದಿರುವುದರಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದೆ. ಮಂಗಳವಾರದ ಬೆಳಿಗ್ಗಿನ ಮಾಹಿತಿಯಂತೆ 41,547 ಕ್ಯೂಸೆಕ್ ಒಳಹರಿವಿದ್ದು, 79.27 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 1781.40 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1762.75 ಅಡಿಯಿತ್ತು. 

ಭದ್ರಾ ಡ್ಯಾಂನ ಒಳಹರಿವು 20,079 ಕ್ಯೂಸೆಕ್ ಇದ್ದು, 230 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 155.90 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 125.40 ಅಡಿಯಿತ್ತು. ಉಳಿದಂತೆ ತುಂಗಾ ಡ್ಯಾಂನ ಒಳಹರಿವು 40,327 ಕ್ಯೂಸೆಕ್‍ಗೆ ಏರಿಕೆಯಾಗಿದ್ದು, 38,871 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 

ತಗ್ಗದ ಅಬ್ಬರ: ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ ಮೊದಲಾದೆಡೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನ ಹಲವು ಭಾಗಗಳಲ್ಲಿ ನಿರಂತರವಾಗಿ ಧಾರಾಕಾರ ಮಳೆ ಮುಂದುವರಿದಿರುವುದು, ನಾಗರಿಕರು ತತ್ತರಿಸಿ ಹೋಗುವಂತೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News