ಮಂಡ್ಯ: ತವರಿಗೆ ಮರಳಿದ ದರ್ಶನ್ ಪುಟ್ಟಣ್ಣಯ್ಯಗೆ ಭವ್ಯ ಸ್ವಾಗತ

Update: 2018-07-13 16:50 GMT

ಮಂಡ್ಯ, ಜು.13: ಚುನಾವಣಾ ಸಂದರ್ಭದಲ್ಲಿ ಘೋಷಿಸಿದಂತೆ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ, ಅಮೆರಿಕಾದ ತನ್ನ ಕಂಪನಿಯನ್ನು ಮಾರಾಟ ಮಾಡಿ ಶುಕ್ರವಾರ ಸ್ವದೇಶಕ್ಕೆ ಮರಳಿದ್ದಾರೆ.

ಪಾಂಡವಪುರದಲ್ಲಿ ರೈತಸಂಘದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಭವ್ಯ ಸ್ವಾಗತ ಸ್ವೀಕರಿಸಿ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ತಂದೆಯ ಹೋರಾಟವನ್ನು ಮುಂದುವರೆಸುವುದಕ್ಕಾಗಿ ಅಮೇರಿಕದಿಂದ ನಮ್ಮೂರಿಗೆ ಆಗಮಿಸಿದ್ದೇನೆ ಎಂದರು.

ನನ್ನನ್ನು ಇಷ್ಟೊಂದು ಅದ್ದೂರಿಯಾಗಿ ಸ್ವಾಗತ ಮಾಡಿದ ಎಲ್ಲಾ ಕಾರ್ಯಕರ್ತರಿಗೆ, ಕ್ಷೇತ್ರದ ಮತದಾರರಿಗೆ ಅಭಿನಂದನೆಗಳು. ನಿಮ್ಮ ನಡುವೆಯೇ ಇರುತ್ತೇನೆಂದು ಭರವಸೆ ಕೊಟ್ಟಿದ್ದೆ. ಮಾತು ಉಳಿಸಿಕೊಂಡಿದ್ದೇನೆ ಎಂದು ಅವರು ಭಾವುಕರಾದರು. ಅಮೇರಿಕದ ನನ್ನ ಕಂಪನಿಗಳನ್ನು ಮಾರಾಟ ಮಾಡಿ ಮತ್ತೆ ತವರಿಗೆ ವಾಪಸ್ಸಾಗಿದ್ದೇನೆ. ಇನ್ನೂ ಸ್ವಲ್ಪ ಕಂಪನಿ ಮಾರಾಟ ಮಾಡುವುದಿದೆ. ನನ್ನ ಕುಟುಂಬವು ಸಹ ಅಮೇರಿಕದಲ್ಲಿದೆ. ರೈತ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಚಳವಳಿಗೂ ದುಮುಕುತ್ತೇನೆ. ನನ್ನ ತಂದೆಯ ಹಾದಿಯಲ್ಲಿಯೇ ಸಾಗುತ್ತೇನೆ ಎಂದು ಅವರು ಹೇಳಿದರು.

ನಾನು ಯಾವುದೇ ಬೇರೆ ಪಕ್ಷಗಳಿಗೂ ಹೋಗೋದಿಲ್ಲ. ಲೋಕಸಭಾ ಚುನಾವಣೆಗೂ ನಿಲ್ಲೋದಿಲ್ಲ. ನಾನು ಮೊದಲು ಸ್ವರಾಜ್ ಇಂಡಿಯಾ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತೇನೆ. ಚುನಾವಣೆಯ ಸಂದರ್ಭದಲ್ಲಿ ಎದುರಾದ ಕೆಲವು ಸಮಸ್ಯೆಗಳ ಬಗ್ಗೆ ಪಾಠಕಲಿತಿದ್ದೇನೆ ಎಂದು ಅವರು ತಿಳಿಸಿದರು.

ಕಳೆದ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನಗೆ ಮತಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ತಿಳಿಸಬೇಕಿದೆ. ಆದ್ದರಿಂದ ನಾಳೆಯಿಂದಲೇ ಅದರ ಬಗ್ಗೆ ಚರ್ಚೆ ನಡೆಸಿ ಕಾರ್ಯಕ್ರಮ ರೂಪಿಸುತ್ತೇನೆ. ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ತೆರಳಿ ಮತದಾರರಿಗೆ ಕೃತಜ್ಞತೆಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ತಾಯಿ, ಸುನೀತ ಪುಟ್ಟಣ್ಣಯ್ಯ, ಸೋದರಿ ಅಕ್ಷತಾ ಪುಟ್ಟಣ್ಣಯ್ಯ, ರೈತಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಪಿಎಸ್‍ಎಸ್‍ಕೆ ಉಪಾಧ್ಯಕ್ಷ ಹರವು ಪ್ರಕಾಶ್, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News