ತುಮಕೂರು: ಮಂಗಳಮುಖಿಯರಿಗೆ ಸೂರು ಕಲ್ಪಿಸಿದ ಜಿಲ್ಲಾಧಿಕಾರಿಗೆ ಅಭಿನಂದನೆ
ತುಮಕೂರು,ಜು.13: ನಗರದ ದಿಬ್ಬೂರಿನಲ್ಲಿ ನಿರ್ಮಿಸಿರುವ ಕೊಳಗೇರಿ ಅಭಿವೃದ್ದಿ ಮಂಡಳಿಯ ವಸತಿ ಸಮುಚ್ಚಯದಲ್ಲಿ ವಸತಿ ಪಡೆಯಲು ಆರ್ಹರಾಗಿದ್ದ 6 ಜನ ಮಂಗಳಮುಖಿಯರು ಪಾವತಿಸಬೇಕಿದ್ದ ತಲಾ 75 ಸಾವಿರ ರೂ ಶುಲ್ಕವನ್ನು ಮಹಾನಗರ ಪಾಲಿಕೆಯ ಶೇ 7.25 ರ ಅನುದಾನದಲ್ಲಿ ಪಾವತಿಸುವ ವ್ಯವಸ್ಥೆ ಮಾಡಿದ ಜಿಲ್ಲಾಡಳಿತ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಮಂಗಳಮುಖಿಯರು ಅಭಿನಂಧನೆ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಮಂಗಳಮುಖಿಯರ ಪಾಲಿನ ಹಣ ಪಾವತಿಸಲು ಸಹಾಯ ಮಾಡಿದ ನಗರಾಭಿವೃದ್ದಿ ಕೋಶದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಜಿಲ್ಲಾಡಳಿತಕ್ಕೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು.
ಮಹಾನಗರಪಾಲಿಕೆ, ನಗರಾಭಿವೃದ್ದಿ ಇಲಾಖೆಯ ವಾಣಿಜ್ಯ ಸಂಕೀರ್ಣಗಳಲ್ಲಿ ಅಂಗಡಿಗಳಲ್ಲಿ ಅದ್ಯತೆಯ ಮೇರೆಗೆ ಮಳಿಗೆಗಳನ್ನು ನೀಡಿ ವ್ಯಾಪಾರ ಮಾಡಲು ಅವಕಾಶ ಒದಗಿಸುವುದು, ಕುರಿ ಮತ್ತು ಹಸು ಸಾಕಣಿಕೆಗೆ ಪಶು ಇಲಾಖೆಯಿಂದ ಪಶು ಭಾಗ್ಯಕ್ಕೆ ಆಯ್ಕೆ ಮಾಡುವುದು. ವಿದ್ಯಾವಂತ ಮಂಗಳಮುಖಿಯರಿಗೆ ಸರಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ, ದಿನಗೂಲಿ ಅಥವಾ ಕನಿಷ್ಠ ವೇತನದಾಡಿಯಲ್ಲಿ ಸಹಾಯಕರಾಗಿ, ಗುಮಾಸ್ತರನ್ನಾಗಿ ನೇಮಕ ಮಾಡಬೇಕು. ಸ್ವಯಂ ಉದ್ಯೋಗದಡಿಯಲ್ಲಿ ವೈಯುಕ್ತಿಕ ಸಾಲ ಪಡೆಯಲು ಕನಿಷ್ಠ 3 ಲಕ್ಷದಿಂದ ಗರಿಷ್ಠ 10 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಿ ಉದ್ಯಮ ಶೀಲತೆಯಲ್ಲಿ ತೊಡಗಿಸಿಕೊಳ್ಳಲು ಸಂಬಂದಪಟ್ಟ ಇಲಾಖೆ ಮತ್ತು ಬ್ಯಾಂಕ್ ಅಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಗರದಲ್ಲಿ 120 ಮಂಗಳಮುಖಿಯರಿಗೆ ಜಿಲ್ಲಾಡಳಿತದಿಂದ 5 ಎಕರೆ ಭೂಮಿ ನೀಡಿ, ಸರಕಾರದಿಂದ ಅನುಷ್ಠಾನಗೊಳ್ಳುವ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು ಮತ್ತು ನಿವೇಶನ ಹಂಚಿಕೆಯಲ್ಲಿ ಶೇ1%ರಷ್ಟು ಮೀಸಲಾತಿ ಜಾರಿಗೊಳಿಸಬೇಕು. ನಗರ ಪರಿಮಿತಿ ಅಥವಾ ಅಸುಪಾಸಿನಲ್ಲಿ ಮಂಗಳಮುಖಿಯರಿಗೆ ಕೌಶಲ್ಯ ತರಬೇತಿಗೆ 2 ಎಕರೆ ಭೂಮಿ ಮಂಜೂರು ಮಾಡಿ ಇದಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಒದಗಿಸಿಕೊಡಬೇಕು. ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ನಮ್ಮ ಸಮುದಾಯ ನಡೆಸುತ್ತಿರುವ ಮಂಗಳಮುಖಿಯರ ಸಹಬಾಳ್ವೆ ಸಂಸ್ಥೆಗೆ ಸಿ.ಎ ನಿವೇಶನವನ್ನು ರಿಯಾರಿತಿ ದರದಲ್ಲಿ ಮಂಜೂರು ಮಾಡಿಸಿಕೊಡಬೇಕು ಮನವಿಯಲ್ಲಿ ಕೋರಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿಶಾಲ್, ಮಂಗಳ ಮುಖಿಯರ ಘನತೆ ಮತ್ತು ಜೀವನೋಪಾಯಕ್ಕೆ ಉಪನಿರ್ದೇಶಕರು ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಮಗ್ರ ವರದಿ ನೀಡಲು ಸೂಚಿಸಿದರು.
ಈ ಸಂದರ್ಭದಲ್ಲಿ ದೀಪಿಕಾ, ದಿವ್ಯ, ಶಬು, ಸುಮಾ, ನಮ್ರತಾ, ಪಿಂಕಿ ಮತ್ತು ತುಮಕೂರು ಕೊಳಗೇರಿ ಸಮಿತಿಯ ಎ,ನರಸಿಂಹಮೂರ್ತಿ, ಶೆಟ್ಟಾಳಯ್ಯ ಉಪಸ್ಥಿತರಿದ್ದರು.