ಚಿಕ್ಕಮಗಳೂರು: ಅರಣ್ಯ ಇಲಾಖೆ ಸಿಬ್ಬಂದಿಯಿಂದ ರೈತನಿಗೆ ಹಲ್ಲೆ ಆರೋಪ; ರೈತ ಸಂಘ ಧರಣಿ
ಚಿಕ್ಕಮಗಳೂರು, ಜು.16: ವಸ್ತಾರೆ ಹೋಬಳಿ ಹಲಸುಮನೆ ಗ್ರಾಮದ ಪರಿಶಿಷ್ಟ ವರ್ಗಕ್ಕೆ ಸೇರಿದ ಶಿವಕುಮಾರ್ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಲಸುಮನೆ ಗ್ರಾಮದ ಶಿವಕುಮಾರ್ ಬಿನ್ ಕೃಷ್ಣಪ್ಪ ಎಂಬಾತ ಅದೇ ಗ್ರಾಮದ ಸರ್ವೆ ನಂ.16ರ 3ಎಕರೆ ಜಮೀನಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಆ ಜಮೀನಿನಲ್ಲಿ ಬಾಳೆ, ಕಿತ್ತಳೆ ಹಾಗೂ ಇತರೆ ಬೆಳೆಗಳನ್ನು ಬೆಳೆದಿದ್ದರು. ಈ ಪ್ರದೇಶ ಅರಣ್ಯ ಇಲಾಖೆಗೆ ಸಂಬಂಧಪಡದಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಅವರ ಜಮೀನಿಗೆ ನುಗ್ಗಿ ಕೃಷಿ ಬೆಳೆಗಳನ್ನು ನಾಶ ಮಾಡಿ ಜಮೀನಿಗೆ ಹಾಕಿದ್ದ ತಂತಿಬೇಲಿಯನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಿರುಕುಳ ನೀಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ಸಹ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿರುವ ಪ್ರತಿಭಟನಾಕಾರರು ಅರಣ್ಯ ಇಲಾಖೆಯವರೊಂದಿಗೆ ಗ್ರಾಮಸ್ಥರು ಸಹ ಆ ಜಮೀನು ತೆರವುಗೊಳಿಸುವಂತೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಈ ಜಮೀನಿಗೆ ಸಂಬಂಧಪಟ್ಟಂತೆ ಶಿವಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದು, ಅದನ್ನರಿತ ಅರಣ್ಯ ಇಲಾಖೆಯವರು ಹೇಗಾದರೂ ಮಾಡಿ ಶಿವಕುಮಾರ್ ರನ್ನು ಆ ಪ್ರದೇಶದಿಂದ ಹೊರದಬ್ಬಲು ಷಡ್ಯಂತ್ರ ರೂಪಿಸಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅವರನ್ನು ಬಂಧಿಖಾನೆಗೆ ತಳ್ಳಿರುವುದು ಅಮಾನವೀಯ ಕೃತ್ಯ ಎಂದ ಸಂಘಟಕರು, ಅವರ ಮೇಲೆ ಹೊರಿಸಿರುವ ಆರೋಪವನ್ನು ಹಿಂಪಡೆದು, ಅವರನ್ನು ಬಿಡುಗಡೆಗೊಳಿಸಿ ಅವರಿಗಾಗಿರುವ ನಷ್ಟವನ್ನು ಭರಿಸಬೇಕು. ಇಲ್ಲದಿದ್ದರೆ ಸಂಘಟನೆಯ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎ ಮಂಜುನಾಥ್, ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥ್, ರಾಜ್ಯ ಸಮಿತಿ ಸದಸ್ಯ ಕೆ.ಕೆ. ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಎಂ.ಸಿ ಬಸವರಾಜ್, ಉಪಾಧ್ಯಕ್ಷ ಕೆ.ಎಚ್. ಚಂದ್ರೇಗೌಡ, ಮುಖಂಡರಾದ ಕೆ.ಪಿ ಚಂದ್ರೇಗೌಡ, ವನಮಾಲಾ, ಲಕ್ಷ್ಮಣಗೌಡ, ಚಂದ್ರಶೇಖರ್, ಕೃಷ್ಣಮೂರ್ತಿ, ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.