ಬಾಗೇಪಲ್ಲಿ: ದ್ವಿಚಕ್ರ ವಾಹನ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು
Update: 2018-07-16 18:12 IST
ಬಾಗೇಪಲ್ಲಿ,ಜು.16: ರಸ್ತೆ ಬದಿಯ ಕಲ್ಲಿಗೆ ದ್ವಿಚಕ್ರ ವಾಹನವೊಂದು ಢಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಕದರಿ ತಾಲೂಕಿನ ಯಲಗನೂರು ಹುಸೇನ್ ಬಾಷ (30) ಮತ್ತು ತಾಲೂಕಿನ ಬಿಳ್ಳೂರು ಗ್ರಾಮದ ಪಯಾಜ್(32) ಅಪಘಾತದಲ್ಲಿ ಮೃತಪಟ್ಟವರು. ಇನ್ನೊರ್ವ ಪ್ರಯಾಣಿಕ ಬಿಳ್ಳೂರಿನ ಮಸ್ತಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೃತರು ಚೇಳೂರು ಕಡೆಯಿಂದ ಬಾಗೇಪಲ್ಲಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಮೂಗಿರೆಡ್ಡಿಪಲ್ಲಿ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಕಲ್ಲಿಗೆ ಢಿಕ್ಕಿ ಹೊಡೆದಿದೆ. ಈ ಸಂಬಂಧ ಚೇಳೂರು ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.