ಈಜಿ ಬರುವುದಾಗಿ ಸ್ನೇಹಿತರಿಗೆ ಸವಾಲು ಹಾಕಿ ನದಿಯಲ್ಲಿ ಕೊಚ್ಚಿಹೋದ ಯುವಕ
ಮಂಡ್ಯ, ಜು.17: ಈಜಿ ಬರುವುದಾಗಿ ಗೆಳೆಯರಿಗೆ ಸವಾಲು ಹಾಕಿ ಹೇಮಾವತಿ ನದಿಗೆ ಹಾರಿದ ಯುವಕ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಅಕ್ಕಿಹೆಬ್ಬಾಳು ಬಳಿ ಮಂಗಳವಾರ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದ ಗಣೇಶ್ ಎಂಬುವರ ಮಗ ಶಿವು ಎಂಬಾತನೇ ಪ್ರವಾಹದಲ್ಲಿ ಕೊಚ್ಚಿಹೋದ ಯುವಕನಾಗಿದ್ದು, ಯುವಕನಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ ಎನ್ನಲಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ಮಧ್ಯಾಹ್ನ ಸ್ನೇಹಿತರೊಂದಿಗೆ ತುಂಬಿ ಹರಿಯುತ್ತಿದ್ದ ನದಿ ನೋಡಲು ತೆರಳಿದ್ದ ಶಿವು, ಬ್ರಿಡ್ಜ್ ಮೇಲಿಂದ ಬಿದ್ದು ಈಜುವುದಾಗಿ ಚಾಲೆಂಜ್ ಮಾಡಿ ನೀರಿಗೆ ಜಿಗಿದು ಕೊಚ್ಚಿ ಹೋಗಿದ್ದಾನೆನ್ನಲಾಗಿದೆ. ನೀರಿನಲ್ಲಿ ಆತ ಈಜುತ್ತಿದ್ದುದ್ದನ್ನು ನೋಡುತ್ತಾ, ದಡ ಸೇರಲಿದ್ದಾನೆಂದು ಸ್ನೇಹಿತರು ದಡ ತನಕ ಹಿಂಬಾಲಿಸಿದ್ದಾರೆ. ಆದರೆ, ಆತ ಈಜಲಾರದೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಇದನ್ನು ಗೆಳೆಯರೇ ವೀಡಿಯೋ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆತ ಮೃತಪಟ್ಟಿರಬಹುದೆಂದು ಶಂಕಿಸಿರುವ ಅಗ್ನಿಶಾಮಕ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ. ಸ್ಥಳದಲ್ಲಿ ತಹಸೀಲ್ದಾರ್ ಶಿವಮೂರ್ತಿ ಮೊಕ್ಕಾಂ ಹೂಡಿದ್ದಾರೆ.