ಚಿಕ್ಕಮಗಳೂರು: ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ 9 ದಿನಗಳ ಬಳಿಕ ಪತ್ತೆ
ಚಿಕ್ಕಮಗಳೂರು, ಜು.19: ಇತ್ತೀಚಗೆ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಪ್ಪ ತಾಲೂಕು ವ್ಯಾಪ್ತಿಯ ಬಸ್ತಿಹಳ್ಳದ ಸೇತುವೆಯನ್ನು ಬೈಕ್ನಲ್ಲಿ ದಾಟುತ್ತಿದ್ದ ವೇಳೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಸ್ಥಳೀಯ ಯುವಕನ ಶವ ಗುರುವಾರ ಕೊನೆಗೂ ಪತ್ತೆಯಾಗಿದ್ದು, ಸತತ 9 ದಿನಗಳ ಕಾಲ ಸ್ಥಳೀಯರು ಹಳ್ಳದಲ್ಲಿ ಯುವಕನ ಶವಕ್ಕಾಗಿ ಶೋಧ ಕಾರ್ಯಾಚರಣೆಗೆ ನಡೆಸಿದ್ದರು.
ಜು.11ರಂದು ಮಂಗಳವಾರ ಮಲೆನಾಡು ಭಾಗದಲ್ಲಿ ಸುರಿದ ಧಾರಕಾರ ಮಳೆಗೆ ಸುರಿದಿದ್ದು, ಅಂದು ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆತೋಟ ಗ್ರಾಮ ಪಂಚಾಯತ್ನ ಮೇಗೂರು ಕಾರೆಮನೆ ಗ್ರಾಮದ ಅಶೋಕ್(21) ಎಂಬಾತ ಹುಲ್ಲನಗದ್ದೆ ಎಂಬಲ್ಲಿರುವ ಸೇತುವೆಯನ್ನು ಬೈಕ್ನಲ್ಲಿ ದಾಟಲು ಹೋಗಿದ್ದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಯುವಕನ ಬೈಕ್ ಬುಧವಾರ ಬೆಳಗ್ಗೆ ಬಸ್ತಿಹಳ್ಳದ ಸೇತುವೆ ಬಳಿ ಪತ್ತೆಯಾಗಿತ್ತಾದರೂ ಯುವಕನ ಶವ ಪತ್ತೆಯಾಗಿರಲಿಲ್ಲ.
ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಜಿಲ್ಲಾಡಳಿತದ ನೆರವಿನೊಂದಿಗೆ ಯುವಕನಿಗಾಗಿ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಳ್ಳದಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ನಂತರ ಎನ್ಡಿಆರ್ಎಫ್ ಸಿಬ್ಬಂದಿ ಬಸ್ತಿಹಳ್ಳದಲ್ಲಿ ಮೂರು ದಿನಗಳ ಕಾಲ ಸುರಿಯುತ್ತಿದ್ದ ಮಳೆ ಲೆಕ್ಕಿಸದೇ ಶವಕ್ಕಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಶೋಧ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದ್ದ ಕಾರಣಕ್ಕೆ ಎನ್ಡಿಆರ್ಎಫ್ ಸಿಬ್ಬಂದಿ ಮೂರು ದಿನಗಳ ಬಳಿಕ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿ ಹಿಂದಿರುಗಿದ್ದರು.
ಆದರೆ ಸ್ಥಳೀಯರು ತಾವೇ ವಂತಿಗೆ ಸಂಗ್ರಹಿಸಿ ಬಾಳೆಹೊಳೆಯ ಸ್ಥಳೀಯ ಮುಳುಗುತಜ್ಞ ಭಾಸ್ಕರ್ ಎಂಬವರನ್ನು ಕರೆ ತಂದು ಯುವಕನ ಶವಕ್ಕಾಗಿ ಶೋಧ ಮುಂದುವರಿಸಿದ್ದರು. 8 ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಿದರೂ ಯುವಕನ ಸುಳಿವು ಸಿಕ್ಕಿರಲಿಲ್ಲ. ಆದರೆ 9ನೇ ದಿನವಾಗಿದ್ದ ಗುರುವಾರ ಸಂಜೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭದ್ರಾಗೇಟ್ ಎಂಬಲ್ಲಿ ಹರಿಯುವ ಬಸ್ತಿಹಳ್ಳದಲ್ಲಿ ಅಶೋಕನ ಶವ ಸ್ಥಳೀಯರಿಗೆ ಕಂಡಿದೆ ಎಂದು ತಿಳಿದು ಬಂದಿದ್ದು, ಸ್ಥಳೀಯ ಪೊಲೀಸರು ಹಾಗೂ ಸಾರ್ವಜನಿಕರು ಅಶೋಕನ ಶವವನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಅಶೋಕನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ಜನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವೈಜ್ಞಾನಿಕ ಸೇತುವೆಯೇ ಘಟನೆಗೆ ಕಾರಣ: ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಬಸ್ತಿಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಅಶೋಕ ಸಾವಿಗೆ ಆ ಭಾಗದ ಜನಪ್ರತಿನಿಧಿಗಳ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ತಿಹಳ್ಳಕ್ಕೆ ಕಟ್ಟಲಾಗಿರುವ ಸೇತುವೆ ಅವೈಜ್ಞಾನಿಕವಾಗಿದ್ದು, ಸೇತುವೆ ಎರಡೂ ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಿಲ್ಲ. ಅಲ್ಲದೇ ಸೇತುವೆ ಅಡಿಯಲ್ಲಿ ನೀರು ಹಾದು ಹೋಗಲು ಬಿಟ್ಟಿರುವ ಕಿಂಡಿಗಳ ಕಿರಿದಾಗಿದ್ದು, ಮಳೆಗಾಲದಲ್ಲಿ ಹೂಳು, ಮರದ ದಿಮ್ಮಿಗಳು ಸಿಲುಕಿ ನೀರು ಸೇತುವೆ ಮೇಲೆಯೇ ಹರಿಯುತ್ತದೆ. ಅಲ್ಲದೇ ಮರಳು ದಂಧೆಕೋರರು ಹಳ್ಳದಲ್ಲಿ ಮರಳು ಸಂಗ್ರಹವಾಗಲಿ ಎಂದು ಹಳ್ಳಕ್ಕೆ ಉದ್ದೇಶಪೂರ್ವಕವಾಗಿ ಮರದ ದಿಮ್ಮಿಗಳನ್ನು ಕಡಿದು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಸೇತುವೆ ಕೆಳಗೆ ಹಳ್ಳದ ನೀರು ಸರಾಗವಾಗಿ ಹರಿಯುತ್ತಿಲ್ಲ. ಪ್ರತೀ ಮಳೆಗಾಲದಲ್ಲಿ ಸ್ವಲ್ಪ ಮಳೆ ಬಂದರೂ ಸೇತುವೆ ಮೇಲೆ ನೀರು ಹರಿಯುತ್ತದೆ. ಸೇತುವೆ ಮೇಲೆ ನೀರಿದ್ದರೂ ಜನರು ಈ ಹಿಂದೆ ಸೇತುವೆ ದಾಟುತ್ತಿದ್ದರು. ಈ ಬಾರಿ ಭಾರೀ ಮಳೆಯಾದ ಪರಿಣಾಮ ನೀರು ರಭಸವಾಗಿ ಸೇತುವೆ ಮೇಲೆ ಹರಿದಿದ್ದರಿಂದ ಅಶೋಕ ಮೃತಪಟ್ಟಿದ್ದಾನೆ. ಕಿಂಡಿಗಳಲ್ಲಿ ಹೂಳು, ಮರದ ದಿಮ್ಮಿ ಸಿಲುಕದಿದ್ದಲ್ಲಿ ನೀರು ಸೇತುವೆ ಅಡಿಯೇ ಹರಿಯುತ್ತಿತ್ತು. ಸೇತುವೆ ಮೇಲೆ ಎರಡೂ ಬದಿಯಲ್ಲೂ ತಡೆಗೋಡೆ ಇಲ್ಲವೇ ಕೈಪಿಡಿಗಳನ್ನು ಅಳವಡಿಸಿದ್ದರೂ ಅಶೋಕ್ ಸಾಯುತ್ತಿರಲಿಲ್ಲ. ಜನಪ್ರತಿನಿಧಿಗಳು ಕಮಿಶನ್ ಆಸೆಗೆ ಬಿದ್ದು, ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮಹಾಮಳೆಗೆ ನಾಲ್ಕು ಬಲಿ:
ಈ ಬಾರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಅಶೋಕ್ ಸೇರಿದಂತೆ ಒಟ್ಟು ನಾಲ್ವರನ್ನು ಬಲಿ ಪಡೆದಿದೆ. ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ತುಂಗಾ ನದಿಯಲ್ಲಿ ಜೂ.27 ರಂದು ರಾತ್ರಿ ಮೀನು ಹಿಡಿಯಲು ಹೋಗಿದ್ದ ರೈತ ಉಮೇಶ್ ಎಂಬವರು ನದಿಯ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅವರ ಶವ 5 ದಿನಗಳ ಬಳಿಕ ಎನ್ಡಿಆರ್ಎಫ್ ಸಿಬ್ಬಂದಿಗೆ ಸಿಕ್ಕಿತ್ತು. ಜು.6 ರಂದು ಶೃಂಗೇರಿ ತಾಲೂಕಿನ ರೈತ ಸುರೇಂದ್ರ ಎಂಬ ರೈತ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಜು.9ರಂದು ರಾತ್ರಿ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಕಂಬಿಹಳ್ಳಿ ಎಂಬಲ್ಲಿ ದನದ ಕೊಟ್ಟಿಗೆ ಕುಸಿದು ವನಜಾ ಎಂಬವರು ಮೃತಪಟ್ಟಿದ್ದು, ಜು.11ರಂದು ರಾತ್ರಿ ಅಶೋಕ್ ಬಸ್ತಿಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ.