ಧಾರವಾಡದ ಸೇವಾ ಅವಧಿ ಅವಿಸ್ಮರಣೀಯ: ನಿಕಟಪೂರ್ವ ಡಿ.ಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ

Update: 2018-07-20 13:28 GMT

ಧಾರವಾಡ, ಜು.20: ನನ್ನ ಹೃದಯಕ್ಕೆ ಹತ್ತಿರವಾದ ಎರಡು ಸ್ಥಳಗಳೆಂದರೆ ನನ್ನ ಹುಟ್ಟೂರು ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಹಾಗೂ ನನ್ನನ್ನು ಮನುಷ್ಯನನ್ನಾಗಿ ಈ ಎತ್ತರಕ್ಕೆ ಬೆಳೆಸಿದ ಧಾರವಾಡ. ಇಲ್ಲಿ ವಿದ್ಯಾರ್ಥಿ ಜೀವನದಿಂದ ಹಿಡಿದು ಜಿಲ್ಲಾಧಿಕಾರಿಯಾಗಿ ಸೇವೆಗೈದ ಪ್ರತಿ ಕ್ಷಣವೂ ನನಗೆ ಅವಿಸ್ಮರಣೀಯವಾಗಿದೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಗುರುವಾರ ಸಂಜೆ ಅವರಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಧಾರವಾಡವು ವಿದ್ಯಾರ್ಥಿ ದೆಸೆಯಿಂದಲೂ ನನಗೆ ಬದುಕನ್ನು ಕಟ್ಟಿಕೊಟ್ಟಿದೆ. ಇಲ್ಲಿನ ಕೆಸಿಡಿಯ ಪ್ರಾಧ್ಯಾಪಕರು ಗ್ರಾಮೀಣ ಭಾಗದಿಂದ ಬಂದಂತಹ ನಮ್ಮಂತಹ ವಿದ್ಯಾರ್ಥಿಗಳಲ್ಲಿದ್ದ ಕೀಳರಿಮೆ ಹೋಗಲಾಡಿಸಿ, ಪ್ರತಿಭೆ ಗುರುತಿಸಿದರು ಎಂದರು.

ಯಾವ ಕಚೇರಿ ಹಾಗೂ ಬಂಗಲೆಯ ಮುಂದೆ ದಿನ ನಿತ್ಯ ಓಡಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದೆನೋ, ಅದೇ ಕಚೇರಿಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದು ನನ್ನ ಪುಣ್ಯ. ವಿದ್ಯಾರ್ಥಿಯಾಗಿದ್ದಾಗ ಅನೇಕ ಚಳವಳಿಗಳಲ್ಲಿ ಸಕ್ರಿಯನಾಗಿದ್ದೆ. ಈಗ ಜಿಲ್ಲಾಧಿಕಾರಿಯಾಗಿ ಅಂತಹವುಗಳನ್ನು ನಿಭಾಯಿಸುವ ಅವಕಾಶವೂ ದೊರೆಯಿತು. ಜಿಲ್ಲೆಯ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ನೀಡಿದ ಸಹಕಾರ ಮತ್ತು ಪ್ರೀತಿ ದೊಡ್ಡದು. ಅದರಿಂದಾಗಿ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಿಕ್ಕಿದೆ ಎಂದು ಅವರು ಹೇಳಿದರು.

ಎರಡು ವರ್ಷಗಳ ಬರಗಾಲ ನಿರ್ವಹಣೆ, ಐಐಟಿ ಉದ್ಘಾಟನೆ, ರಾಜ್ಯ ಒಲಿಂಪಿಕ್ಸ್, ಮಾಹಿತಿ ಉತ್ಸವ, ಸಾಧನಾ ಸಂಭ್ರಮ ಮತ್ತಿತರ ಮಹತ್ವದ ಕಾರ್ಯಕ್ರಮಗಳ ಆಯೋಜನೆ. ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ಇದೆ ಎಂದು ಬೊಮ್ಮನಹಳ್ಳಿ ತಿಳಿಸಿದರು.

ಬೆಳೆ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲೆಯಲ್ಲಿ ಮಾಡಿದ ಕಾರ್ಯ ಗುರುತಿಸಿ ಮುಖ್ಯಮಂತ್ರಿ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಕಳೆದ ಹಲವು ವರ್ಷಗಳಿಂದ ಅನೇಕ ಕಾರಣಗಳಿಂದ ಹಂಚಿಕೆಯಾಗದೇ ಉಳಿದಿದ್ದ ಮಹರ್ಷಿ ವಾಲ್ಮೆಕಿ ಭವನ, ಗಾಂಧಿ ಭವನ, ಮಹಿಳಾ ಕಾಲೇಜುಗಳಿಗೆ ನಿವೇಶನ ನೀಡಿ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಾರ್ವಜನಿಕರಿಗೆ ಉತ್ತಮ ಸ್ಪಂದನೆ ನೀಡಬೇಕು ಎಂದು ಅವರು ಹೇಳಿದರು.

ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳು ಪರಿಹಾರವಾದರೆ ಜನರು ರಾಜಧಾನಿಗೆ ಬರುವುದು ತಪ್ಪುತ್ತದೆ. ನನಗಿಂತಲೂ ಸಮರ್ಥವಾದ ದಕ್ಷ ಅಧಿಕಾರಿ ಎಂ.ದೀಪಾ ಅವರು ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆಯ ಹೆಸರು ಇನ್ನಷ್ಟು ಎತ್ತರಕ್ಕೇರುವ ಭರವಸೆ ಇದೆ. ನನ್ನ ಕೊನೆಯ ಉಸಿರುವವರೆಗೂ ಧಾರವಾಡದ ಸೇವಾ ಅವಧಿಯನ್ನು ಹೃದಯದಲ್ಲಿಟ್ಟುಕೊಳ್ಳುತ್ತೇನೆ ಎಂದು ಬೊಮ್ಮನಹಳ್ಳಿ ಹೇಳಿದರು.

ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಎಂ.ದೀಪಾ ಮಾತನಾಡಿ, ಉತ್ತರ ಕರ್ನಾಟಕದ ಗದಗ, ಬೆಳಗಾವಿ, ಧಾರವಾಡಗಳಲ್ಲಿ ಈಗಾಗಲೇ ಕೆಲಸ ಮಾಡಿದ ಅನುಭವವಿದೆ. ಈ ಭಾಗದ ಜನರ ಕರ್ತವ್ಯಶೀಲ ಮನೋಭಾವದ ಬಗ್ಗೆ ಗೌರವವಿದೆ. ಇಲ್ಲಿನ ಆಹಾರ ಪದ್ಧತಿ, ಸಂಸ್ಕೃತಿ ಬಗ್ಗೆ ನನಗೆ ಹೆಮ್ಮೆಯಿದೆ. ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಉತ್ತಮ ತಂಡ ಕಟ್ಟಿರುವುದು ಆಡಳಿತ ಮುನ್ನಡೆಸಲು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಸ್ನೇಹಲ್, ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಮನೋಹರ ಮಂಡೋಲಿ, ಎಸ್.ಜಿ.ಕೊರವರ್, ಟಿ.ಎಸ್.ರುದ್ರೇಶಪ್ಪ, ರಮೇಶ ಕೋನರಡ್ಡಿ, ಮಂಜುನಾಥ ಡೊಳ್ಳಿನ, ಎಸ್.ಕೆ.ರಂಗಣ್ಣವರ, ಪ್ರಕಾಶ ಕುದರಿ, ಶೇಖರ್ ಜಿ.ಡಿ., ಡಿಸಿಪಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ, ಉಪವಿಭಾಗಾಧಿಕಾರಿ ಮುಹಮ್ಮದ್ ಝುಬೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News