ಉಡುಪಿ ಬಾಲಕಿಯ ಅತ್ಯಾಚಾರ ಪ್ರಕರಣ: ಅರೋಪಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್

Update: 2018-07-20 16:35 GMT

ಬೆಂಗಳೂರು, ಜು.20: ಅತ್ಯಾಚಾರ ಎಸಗುತ್ತಿದ್ದಾಗ ಕಿರುಚಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಅಪ್ರಾಪ್ತೆಯೊಬ್ಬಳ ಬಾಯಿಗೆ ಈರುಳ್ಳಿ ತುರುಕಿದ್ದಲ್ಲದೆ, ಮೂಗು ಮುಚ್ಚಿ ಕೊಲೆ ಮಾಡಿದ್ದ ಆರೋಪಿಯೊಬ್ಬನಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ಕಾಯಂ ಮಾಡಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಾಲಿನಿನಗರದ ನಿವಾಸಿ ಸುಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ. 'ನಾನು ಅತ್ಯಾಚಾರ ಎಸಗಿರುವುದು ನಿಜ. ಅದಕ್ಕಾಗಿ ಅಧೀನ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ನಾನು 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಆದರೆ, ನಾನು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಲೈಂಗಿಕ ಸಂಪರ್ಕಕ್ಕೆ ಯತ್ನಿಸುತ್ತಿದ್ದ ವೇಳೆ ಅಪ್ರಾಪ್ತೆ ಕಿರುಚಾಡುತ್ತಿದ್ದಳು. ಆಕೆಯನ್ನು ಸುಮ್ಮನಿರಿಸಲು ಬಾಯಿಗೊಳಗೆ ಈರುಳ್ಳಿ ಹಾಕಿದ್ದೆ. ಈರುಳ್ಳಿ ಗಂಟಲಲ್ಲಿ ಸಿಲುಕಿ ಉಸಿರಾಡದೇ ಸಾವನ್ನಪ್ಪಿದ್ದಾಳೆ. ಹೀಗಾಗಿ, ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿ ಸುಕುಮಾರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

ಅಪ್ರಾಪ್ತಳ ಬಾಯಿಯೊಳಗೆ ಬಲವಂತವಾಗಿ ಈರುಳ್ಳಿಯನ್ನು ಹಾಕಲಾಗಿದೆ. ಬಾಲಕಿ ಕೊನೆಯುಸಿರೆಳೆದಾಗ ಆಕೆಯ ಗಂಟಲಲ್ಲಿ ಈರುಳ್ಳಿ ಇತ್ತು. ಮೇಲಾಗಿ ಆಕೆಯ ಮೂಗು ಹಾಗೂ ಬಾಯಿ ಮುಚ್ಚಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಶವಪರೀಕ್ಷೆ ನಡೆಸಿದ್ದ ವೈದ್ಯರು ಸಾವಿಗೆ ಕಾರಣವನ್ನು ದೃಢಪಡಿಸಿದ್ದರು. ಹೆಚ್ಚುವರಿ ರಾಜ್ಯ ಅಭಿಯೋಜಕ ವಿಜಯ ಕುಮಾರ್ ಮಜಗೆ ಅವರು ಶವಪರೀಕ್ಷೆಯ ವರದಿ ಕೋರ್ಟ್‌ಗೆ ಸಲ್ಲಿಸಿ, ಸುಕುಮಾರ್ ಕೊಲೆ ಮಾಡಿರುವುದಾಗಿ ಬಲವಾಗಿ ವಾದ ಮಂಡಿಸಿದ್ದರು.

ಈ ವಾದ ಪರಿಗಣಿಸಿದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಮತ್ತು ನ್ಯಾಯಮೂರ್ತಿ ಬಿ.ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ಕೊಲೆ ಪ್ರಕರಣ ಸಂಬಂಧ ಸುಕುಮಾರ್‌ಗೆ ನಗರದ 50ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿ, ಮೇಲ್ಮನವಿ ವಜಾಗೊಳಿಸಿತು.

ಪ್ರಕರಣವೇನು: ಮೂಲತಃ ಉಡುಪಿ ಜಿಲ್ಲೆಯ ಸುಕುಮಾರ್(29), ಮೈಕೋಲೇಔಟ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಸಂಬಂಧಿಕರಿದ್ದ ಬಾಡಿಗೆ ಮನೆಗೆ ಆಗ್ಗಾಗೆ ಬರುತ್ತಿದ್ದ. 2007ರಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಆತ, ಕಿಟಕಿಯೊಳಗಿರುವ ಬೀಗ ತೆಗೆದುಕೊಡುವಂತೆ ಮನೆಯ ಮಾಲಕರ 12 ವರ್ಷದ ಪುತ್ರಿಯನ್ನು ಕರೆದುಕೊಂಡು ಹೋಗಿದ್ದ. ಬೀಗದ ಕೈ ತೆಗೆದುಕೊಂಡಿದ್ದ ಬಾಲಕಿಯನ್ನು ಬಾಗಿಲು ತೆರೆದ ನಂತರ ಪುಸಲಾಯಿಸಿ ಅಡುಗೆ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವೇಳೆ ಬೆದರಿದ್ದ ಬಾಲಕಿ ಕಿರುಚಾಡತೊಡಗಿದ್ದಳು. ಹೀಗಾಗಿ ಬಾಲಕಿಯ ಬಾಯಿಗೆ ಸುಕುಮಾರ್ ಬಲವಂತವಾಗಿ ಈರುಳ್ಳಿಯನ್ನು ತುರುಕಿ,  ಬಾಲಕಿಯ ಬಾಯಿ ಹಾಗೂ ಮೂಗು ಮುಚ್ಚಿದ್ದ. ಈ ಮಧ್ಯೆ ಉಸಿರಾಡಲು ಸಾಧ್ಯವಾಗದೆ ಬಾಲಕಿ ಮೃತಪಟ್ಟಿದ್ದಳು.

ಬಾಗಿಲು ಮುಚ್ಚಿದ್ದರಿಂದ ಸಿಕ್ಕಿಬಿದ್ದ: ಬಾಗಿಲು ಸ್ವಯಂಚಾಲಿತವಾಗಿ ಮುಚ್ಚಿಕೊಂಡಾಗ ಬೀಗದ ಕೈ ಹೊರಗಡೆಗೆ ಬಿದ್ದಿತ್ತು. ಆಗ ಸ್ನೇಹಿತರಿಗೆ ಮೊಬೈಲ್ ಕರೆ ಮಾಡಿದ್ದ ಸುಕುಮಾರ್, ಬಾಗಿಲು ತೆರೆಯಲು ಬರುವಂತೆ ಸೂಚಿಸಿದ್ದ. ಇದೇ ವೇಳೆ ಬಾಲಕಿಗಾಗಿ ಮನೆಯವರು ಹುಡುಕಾಟ ನಡೆಸಿದ್ದರು. ಬಾಲಕಿಯು ಸುಕುಮಾರ್ ಜತೆಗೆ ತೆರಳಿದ್ದ ಬಗ್ಗೆ ಪಕ್ಕದ ಮನೆಯವರು ತಿಳಿಸಿದ್ದರು. ಇದೇ ವೇಳೆ ಸುಕುಮಾರ್ ಸ್ನೇಹಿತರು ಮನೆಗೆ ಬಂದಾಗ ಅನುಮಾನಗೊಂಡ ಪೋಷಕರು ಅವರನ್ನು ಹಿಡಿದು ಬಡಿದು ವಿಚಾರಿಸಿದ್ದರು. ನಂತರ ಮನೆಯೊಳಗೆ ತೆರಳಿ ನೋಡಿದ್ದಾಗ ಅಡುಗೆ ಮನೆಯಲ್ಲಿ ಬಾಲಕಿ ಸಾವನ್ನಪ್ಪಿ ಬಿದ್ದಿರುವುದು ಕಂಡು ಬಂದಿತ್ತು.

ಮೈಕೋಲೇಔಟ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಹಾಗೂ ಅತ್ಯಾಚಾರ ಪ್ರಕರಣದಡಿ ಸುಕುಮಾರ್ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಗರದ 50ನೆ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ಕೊರ್ಟ್, ಸುಕುಮಾರ್‌ನನ್ನು ದೋಷಿ ಎಂಬುದಾಗಿ ಪರಿಗಣಿಸಿ ಅತ್ಯಾಚಾರಕ್ಕೆ 10 ವರ್ಷ ಜೈಲು ಹಾಗೂ ಕೊಲೆ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಆತ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News