ಅಧಿಕಾರ ಕಳೆದುಕೊಳ್ಳುವ ಮೌಢ್ಯದ ಬಗ್ಗೆ ನಂಬಿಕೆ ಇಲ್ಲ: ಸಿಎಂ ಕುಮಾರಸ್ವಾಮಿ

Update: 2018-07-20 17:17 GMT

ಮಡಿಕೇರಿ, ಜು.20: ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುವ ಮೌಢ್ಯದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ನುಡಿದಿದ್ದಾರೆ.

ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ತಲಕಾವೇರಿಗೆ ಬಂದು ಅಧಿಕಾರ ಕಳೆದುಕೊಂಡಿದ್ದರು ಎಂದು ಬಿಂಬಿಸಿರುವುದನ್ನು ನಾನು ನೋಡಿದ್ದೇನೆ. ದೇವರು ಕೊಟ್ಟಿರುವ ಅಧಿಕಾರಿವನ್ನು ದೇವರೇ ಕಾಪಾಡುತ್ತಾನೆ. ನಾನು ಮೊದಲಿನಿಂದಲೂ ಯಾವುದೇ ಮೂಢ ನಂಬಿಕೆ ಆಚರಿಸಿಕೊಂಡು ಬಂದಿಲ್ಲ. ಒಂದು ವಿಶ್ವಾಸ ಅಷ್ಟೇ, ಕಾಕತಾಳಿಯವನ್ನೇ ನಿಜವೆಂದು ಬಾವಿಸಬಾರದು. ದೇವರ ಅನುಗ್ರಹದಲ್ಲಿ ನಾವಿರಬೇಕು. ಮೂಢ ನಂಬಿಕೆಗಳು ನಾವು ಸೃಷ್ಟಿ ಮಾಡಿಕೊಂಡಿರುವಂತದ್ದು ಎಂದು ಅವರು ಅಭಿಪ್ರಾಯಪಟ್ಟರು.

ನಾವೆಲ್ಲ ಮಾನವರು, ಭಯ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಬೇಕು. ನಾನು ನಾಡಿನ ಜನತೆಗೆ ಸುಭಿಕ್ಷೆ ನೀಡುವಂತೆ ಪ್ರಾರ್ಥಿಸಲು ಇಲ್ಲಿಗೆ ಬಂದಿದ್ದೇನೆ. ನಾಲ್ಕು ಜಲಾಶಯಗಳಿಗೂ ತೆರಳಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಉತ್ತಮ ಮಳೆಯಿಂದಾಗಿ ನಾಡಿನ ನದಿಗಳು ತುಂಬಿ ಹರಿಯುತ್ತಿದ್ದು, ಮುಖ್ಯಮಂತ್ರಿಗಳು ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾವೇರಿ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧರ್ಮವನ್ನು ಯಾರು ಕಾಪಾಡುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ ಎಂದು ತಲಕಾವೇರಿಯಲ್ಲಿ ಹೇಳಿದರು.

ನಾಡಿನ ಜನ ಸುಭಿಕ್ಷೆಯಿಂದ ಇರಬೇಕು ಮತ್ತು ಉತ್ತಮ ಆಡಳಿತವನ್ನು ನೀಡಬೇಕೆನ್ನುವ ಗುರಿ ಸಮ್ಮಿಶ್ರ ಸರಕಾರದ್ದು. ಚಾಮುಂಡಿ ಬೆಟ್ಟ ಮತ್ತು ಎಲ್ಲಾ ಜಲಾಶಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ಬಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿಯಲ್ಲಿ ಮುಖ್ಯಮಂತ್ರಿಗಳು ವಿಶೇಷ ಪೂಜೆ ಸಲ್ಲಿಸಿದ ಸಂದರ್ಭ ಪತ್ನಿ ಅನಿತಾ ಕುಮಾರಸ್ವಾಮಿ, ರೇಷ್ಮೆ ಸಚಿವ ಸಾ.ರಾ. ಮಹೇಶ್, ಶಾಸಕ ಕೆ.ಜಿ. ಬೋಪಯ್ಯ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಮತ್ತಿತರರು ಹಾಜರಿದ್ದರು.

ಹಲವು ವರ್ಷಗಳ ನಂತರ ಕಾವೇರಿ ಮಾತೆಯ ಅನುಗ್ರಹದಿಂದ ಕಾವೇರಿ ಭಾಗದ 4 ಜಲಾಶ ಯಗಳು ಭರ್ತಿಯಾಗಿವೆ. ಕರ್ನಾಟಕ ಹಾಗೂ ತಮಿಳುನಾಡು ನಡುವಿನ ನೀರಿನ ಸಮಸ್ಯೆಗೆ ಕಾವೇರಿ ತಾಯಿಯೇ ಪರಿಹಾರ ನೀಡಿದ್ದಾಳೆ. ನ್ಯಾಯಾಲಯದ ತೀರ್ಪಿಗಿಂತ ಕಾವೇರಿ ತಾಯಿ ಕೊಡುವ ತೀರ್ಪು ಸಮಾಧಾನಕರವಾದುದು. ಈ ಹಿನ್ನೆಲೆಯಲ್ಲಿ ಕಾವೇರಿ ಸನ್ನಿಧಾನಕ್ಕೆ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದೇನೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಶಿರೂರು ಶ್ರೀಗಳ ನಿಗೂಢ ಸಾವಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಶ್ರೀಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆ ವಿಚಾರ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News