ಮೈಸೂರು: ರಿಲಯನ್ಸ್, ಮೆಟ್ರೋ ಕಂಪನಿಗಳ ವಿರುದ್ಧ ಪ್ರತಿಭಟನಾ ಮೆರವಣಿಗೆ

Update: 2018-07-21 16:43 GMT

ಮೈಸೂರು,ಜು.21: ರಿಲಯನ್ಸ್ ಮತ್ತು ಮೆಟ್ರೋ ಕಂಪನಿಗಳ ಮಾರಾಟ ವೈಖರಿ ವಿರುದ್ಧ ಮೈಸೂರು ಡಿಸ್ಟ್ರಿಕ್ಟ್ ಡಿಸ್ಟಿಬ್ಯೂಟರ್ಸ್ ಅಸೋಸಿಯೇಶನ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರು, ನಮ್ಮ ಸಂಘದ ಸದಸ್ಯರುಗಳು ಕಾನೂನಾತ್ಮಕವಾಗಿ ಸರ್ಕಾರ ನೀಡಲ್ಪಡುವ ಎಲ್ಲಾ ಲೈಸೆನ್ಸ್ ಗಳನ್ನು ಪಡೆದು ಹಲವಾರು ವರ್ಷಗಳಿಂದ ಗ್ರಾಹಕ ವಸ್ತುಗಳ ವಿತರಕರಾಗಿ ರಾಜ್ಯಾದ್ಯಂತ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಬಂದಿರುತ್ತದೆ. ಇದನ್ನೇ ನಂಬಿ ನಮ್ಮ ಕುಟುಂಬ ಹಾಗೂ ನಮ್ಮ ನೌಕರರ ಕುಟುಂಬಗಳು ಜೀವನ ನಡೆಸುತ್ತಿದ್ದೇವೆ. ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ನಮ್ಮ ವ್ಯಾಪಾರವನ್ನು ಅವಲಂಬಿಸಿರುತ್ತಾರೆ. ಇತ್ತೀಚಿನ ಕೆಲ ವರ್ಷಗಳಿಂದ ದೈತ್ಯ ಕಂಪನಿಗಳಾದ ರಿಲಯನ್ಸ್ ಮತ್ತು ಮೆಟ್ರೋ ಕಂಪನಿಗಳು ನಮ್ಮ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುವ ರೀಯಿಯಲ್ಲಿ ನಾವು ಅವಲಂಬಿಸಿರುವ ವ್ಯಾಪಾರದ ಮೇಲೆ ಗದಾಪ್ರಹಾರ ಮಾಡಿ ವಹಿವಾಟನ್ನು ನಡೆಸುತ್ತಿದ್ದಾರೆ. ನೇರವಾಗಿ ತಮ್ಮ ವ್ಯವಹಾರವನ್ನು ಆರಂಭಿಸಿ ಜನರಿಗೂ ನಂಬಿಕೆ ಇಲ್ಲದ ರೀತಿ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಅತಿ ಶೀಘ್ರದಲ್ಲಿ ನಮ್ಮ ವ್ಯಾಪಾರ ಹಾಗೂ ನಮ್ಮನ್ನೆ ನಂಬಿ ಜೀವನ ನಡೆಸುತ್ತಿರುವವವರು ಬೀದಿ ಪಾಲಾಗುವುದರಲ್ಲಿ ಸಂಶಯವಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಮಹಾವೀರ ವೃತ್ತ, ಗಾಂಧಿವೃತ್ತ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎ.ಎಸ್.ಚೇತನ್, ಸತೀಶ್ ಬಿ, ಗಣೇಶ್ ರಾವ್, ಶಿವಾಜಿ ರಾವ್, ಮನೋಜ್, ರೋಶನ್ ಲಾಲ್, ಲಖನ್, ಚಂದ್ರಶೇಖರ್, ವಿಶ್ವನಾಥ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News