ಮಡಿಕೇರಿಯ ಹಲವೆಡೆ ಬಿರುಕು ಬಿಟ್ಟ ಭೂಮಿ: ಮನೆಗಳಿಗೆ ಹಾನಿ

Update: 2018-07-21 17:15 GMT

ಮಡಿಕೇರಿ, ಜು.21: ಕಳೆದ ಒಂದು ತಿಂಗಳಿನಿಂದ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಯ ಆರ್ಭಟ ಕಡಿಮೆಯಾಗಿದ್ದರೂ ಅದು ಮಾಡಿರುವ ಅನಾಹುತಗಳು ಇನ್ನೂ ಹಸಿಯಾಗಿಯೇ ಇವೆ. ಗಾಳಿ, ಮಳೆಗೆ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾಗಿದ್ದು, ಕೋಟ್ಯಂತರ ರೂ.ನಷ್ಟ ಸಂಭವಿಸಿದೆ. ಇದರ ನಡುವೆಯೇ ಕೆಲವು ಗ್ರಾಮಗಳಲ್ಲಿ ಭೂಮಿ ಬಾಯಿ ಬಿಡತೊಡಗಿದೆ.

ಮಡಿಕೇರಿ ತಾಲೂಕಿನ ಮಕ್ಕಂದೂರು ಹಾಗೂ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಕಿ.ಮೀ. ನಷ್ಟು ದೂರ ಭೂಮಿ ಬಿರುಕು ಬಿಟ್ಟಿದ್ದು, ದಿನದಿಂದ ದಿನಕ್ಕೆ ಇದರ ದೂರ ವ್ಯಾಪಿಸುತ್ತಲೇ ಇದೆ. ಮಕ್ಕಂದೂರು ದೇವಾಲಯದಿಂದ ಸ್ವಲ್ಪದೂರದಲ್ಲಿ ಭೂಮಿ ಬಾಯಿ ಬಿಡುತ್ತಿರುವುದರಿಂದ ಮಂಜುನಾಥ್ ಎಂಬವರಿಗೆ ಸೇರಿದ ಹಂಚಿನ ಮನೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಅಪಾಯದ ಮುನ್ಸೂಚನೆಯನ್ನು ನೀಡಿದೆ. ಸುಮಾರು 15 ಲಕ್ಷ ರೂ.ವೆಚ್ಚದ ಈ ಮನೆ ಅಡಿಪಾಯದಿಂದಲೇ ಬಿರುಕು ಬಿಟ್ಟು ಮೇಲ್ಚಾವಣಿಯವರೆಗೂ ಗೋಡೆ ಬೀಳುವ ಸ್ಥಿತಿಯಲ್ಲಿದೆ. ಮನೆಯ ಪಕ್ಕದಲ್ಲಿರುವ ತೋಟದಿಂದಲೇ ಭೂಮಿ ಬಿರುಕು ಬಿಟ್ಟಿದ್ದು, ಇದು ಮನೆಯ ಭಾಗವನ್ನೂ ವ್ಯಾಪಿಸಿದೆ.

2ನೇ ಮೊಣ್ಣಂಗೇರಿಯಲ್ಲೂ ಆತಂಕ: ಮತ್ತೊಂದೆಡೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಎರಡನೇ ಮೊಣ್ಣಂಗೇರಿಯಲ್ಲಿ ಮತ್ತೊಮ್ಮೆ ಭೂಮಿ ಬಾಯ್ತೆರೆದಿದೆ. ಈ ಹಿಂದೆ ಬಿರುಕು ಬಿಟ್ಟ ಸ್ಥಳದಲ್ಲಿಯೇ ಬಿರುಕು ಬಿಟ್ಟು ಆತಂಕ ಮೂಡಿಸಿದೆ. ಬೆಟ್ಟ-ಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿರುವ ಎರಡನೇ ಮೊಣ್ಣಂಗೇರಿಯಲ್ಲಿ ಭೂಮಿ ಸುಮಾರು ಎರಡು ಕಿ.ಮೀ ವರೆಗೆ ಬಿರುಕುಬಿಟ್ಟಿದೆ.

ಮೂರು ದಿನಗಳ ಹಿಂದೆ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿದ್ದು, ಈಗ ದೊಡ್ಡದಾಗಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಕಾಂಕ್ರಿಟ್ ರಸ್ತೆ ಕೂಡ ಸೀಳಿ ಹೋಗಿದ್ದು, ಸುಮಾರು 4 ಇಂಚುಗಳಷ್ಟು ಅಗಲದಲ್ಲಿ ಬಿರುಕು ಬಿಟ್ಟಿದೆ. ಸ್ಥಳೀಯ ನಿವಾಸಿ ಬಾಬು ಪೂಜಾರಿ ಎಂಬವರ ಮನೆಯ ಅಂಗಳದ ಮೂಲಕ ಬಿರುಕು ಮೂಡಿದ್ದು, ಮನೆಗೆ ಯಾವುದೇ ಹಾನಿಯಾಗಿಲ್ಲ. 2013ರಲ್ಲಿ ಕೂಡ ಇದೇ ಪ್ರದೇಶದ ರಸ್ತೆಯಲ್ಲಿ ಬಾರೀ ಬಿರುಕು ಕಾಣಿಸಿಕೊಂಡು, ಕೆಲವು ಮನೆಗಳು ಬಿರುಕು ಬಿಟ್ಟಿದ್ದವು. ಆದರೆ, ಈ ಬಾರಿ ಮನೆಯಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ.

ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮಾ, ಗ್ರಾಮಾಂತರ ಠಾಣಾಧಿಕಾರಿ ಚೇತನ್, ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜಿಲ್ಲೆಯಲ್ಲಿ ಗಾಳಿ, ಮಳೆ ಕಡಿಮೆಯಾಗಿದ್ದರೂ ಮಡಿಕೇರಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಸಾಧಾರಣ ಶೀತಗಾಳಿ, ಮಳೆ ಗ್ರಾಮೀಣ ಭಾಗದಲ್ಲಿ ಆತಂಕವನ್ನು ಹೆಚ್ಚಿಸಿದೆ. ಕಳೆದ ಒಂದು ತಿಂಗಳ ಮಹಾಮಳೆಯಿಂದ ಭೂಮಿ ಮೆದುವಾಗಿ ಅಪಾಯದಂಚಿನಲ್ಲಿದೆ. ಪರಿಸ್ಥಿತಿ ಹೀಗಿರುವಾಗಲೇ ನಿರಂತರ ಸಾಧಾರಣ ಮಳೆಯಾಗುತ್ತಿರುವುದರಿಂದ ಭೂಮಿಯಲ್ಲಿ ಬಿರುಕು ಹೆಚ್ಚಾಗುತ್ತಿದೆ. ಗ್ರಾಮೀಣರಲ್ಲಿ ಅತಿವೃಷ್ಟಿಯ ಆತಂಕ ಮುಂದುವರೆದಿದ್ದು, ಗ್ರಾಮಸ್ಥರು ನುರಿತ ಅಧಿಕಾರಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಅಂತರ್ಜಲ ಕಾರಣ: ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸ್ಪಷ್ಟನೆ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ರೇಷ್ಮಾ ಮಾಧ್ಯಮಗಳೊಂದಿಗೆ ಮಾತನಾಡಿ, ಅಧಿಕ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಳೆ ಕಡಿಮೆಯಾದ ಬಳಿಕ ಯಥಾ ಸ್ಥಿತಿಗೆ ಮರಳಲಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷದ ಮಳೆಗೂ ಇದೇ ರೀತಿ ಭೂಮಿ ಬಿರುಕು ಬಿಟ್ಟಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News