ಮೈಸೂರು: ಪ್ರತ್ಯೇಕ ಮೂರು ಕಡೆ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ; ಎಂಟು ಮಂದಿಯ ಬಂಧನ

Update: 2018-07-22 16:45 GMT

ಮೈಸೂರು,ಜು.22: ಪ್ರತ್ಯೇಕ ಮೂರು ಕಡೆಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಅರೋಪಿಗಳಿಂದ ನಗದು ಹಾಗೂ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ವಿದ್ಯಾರಣ್ಯಪುರಂ 4ನೇ ಮೇನ್ 19ನೇ ಕ್ರಾಸ್‍ನಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮೂವರನ್ನು ಬಂಧಿಸಿ, ಅವರಿಂದ 10,500 ನಗದು ಮತ್ತು 4 ಮೊಬೈಲ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಇಲ್ಲಿ ವೇಶ್ಯವಾಟಿಕೆ ನಡೆಸುತ್ತಿದ್ದ ಕುವೆಂಪುನಗರದ ಎಂ. ಬ್ಲಾಕ್‍ನ ಓರ್ವ ಮಹಿಳೆ ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮೈಸೂರಿನ ರವೀಂದ್ರ (38), ಮಂಡ್ಯದ ಶಿವಲಿಂಗಯ್ಯ (51) ಎಂಬುವರನ್ನು ಬಂಧಿಸಲಾಗಿದೆ. ಬಂಧಿತರನ್ನು ದಸ್ತಗಿರಿ ಮಾಡಲಾಗಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಟ್ಟಗಳ್ಳಿ, 3ನೇ ಹಂತ, ಮಹಾಮನೆ ವೃತ್ತದ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ. 

ವೇಶ್ಯಾವಾಟಿಕೆ ನಡೆಸುತ್ತಿದ್ದ ಶ್ರೀರಂಗಪಟ್ಟಣದ ಪಾಲಹಳ್ಳಿಯ  ಪಿ.ಟಿ.ಸಂದೇಶ್‍ಕುಮಾರ್ (26),  ವೇಶ್ಯವಾಟಿಕೆಯಲ್ಲಿ ತೊಡಗಿದ್ದ ಬಿಳಿಕೆರೆ ಹೋಬಳಿಯ ಮಹದೇವು(33) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ 4,450 ರೂ. ನಗದು ಹಾಗೂ 2 ಮೊಬೈಲ್‍ಗಳನ್ನು ವಶಪಡಿಸಿಕೊಂಡು, ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ರಾಮಕೃಷ್ಣನಗರದ ಐ ಬ್ಲಾಕ್‍ನ ಮೂರನೇ ಮುಖ್ಯರಸ್ತೆಯ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ರಾಮಕೃಷ್ಣನಗರದ ತಮ್ಮಣ್ಣೇಗೌಡ(31),  ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಹುಣಸೂರಿನ ಮೇದರ್ ಬ್ಲಾಕ್‍ನ  ಶಾಂತಕುಮಾರ್(48), ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಅಭಿಷೇಕ್ (26) ಎಂಬವರು ಸೆರೆಯಾಗಿದ್ದಾರೆ. 

ಬಂಧಿತರಿಂದ 4, 320 ರೂ ನಗದು, 4 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News