ಆಳುವ ಸರ್ಕಾರಗಳು ಸಮುದಾಯ ಭವನಗಳನ್ನು ನಿರ್ಮಿಸಿ ರಾಜಕೀಯ ಲಾಭ ಪಡೆಯುತ್ತಿದೆ: ಶಾಸಕ ಸತೀಶ್ ಜಾರಕಿಹೊಳಿ

Update: 2018-07-22 17:03 GMT

ಮೈಸೂರು,ಜು.22: ಆಳುವ ಸರ್ಕಾರಗಳು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನಹರಿಸದೆ, ಜನಾಂಗಗಳ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿ ರಾಜಕೀಯ ಲಾಭ ಪಡೆಯುತ್ತಿರುವುದು ವಿಷಾದನೀಯ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದರು. 

ನಗರದ ಕಲಾಮಂದಿರದಲ್ಲಿ ಅಂಬೇಡ್ಕರ್ ವಿವಿದೋದ್ದೇಶ ಸೇವಾ ಸಂಸ್ಥೆ ಹಾಗೂ ಅಂಬೇಡ್ಕರ್ ಸಹಕಾರ ಸಂಘ ನಿಯಮಿತ ವತಯಿಂದ ಆಯೋಜಿಸಿದ್ದ ಸಂಘದ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಶೈಕ್ಷಣಿಕ ಅಭಿವೃದ್ಧಿ ಕಾಣದೆ ಹಿಂದುಳಿದು, ಕೆಲವು ಶಾಲೆಗಳು ಮುಚ್ಚುತ್ತಿವೆ. ಇಂತಹ ವೇಳೆ ಆಳುವ ಸರ್ಕಾರಗಳು ಶಾಲೆಯ ಜೀರ್ಣೋದ್ಧಾರಗೊಳಿಸಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕುರಿತು ಗಮನಹರಿಸದೆ, ಸಮುದಾಯಗಳ ಭವನ ನಿರ್ಮಾಣ ಮಾಡುವುದರಲ್ಲಿ ತೊಡಗಿವೆ. ಇದರ ಉದ್ಧೇಶವೇನೆಂದರೆ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿ ನಿಮ್ಮನ್ನೂ ಶಿಕ್ಷಣದಿಂದ ವಂಚಿಸುವುದಾಗಿದೆ ಎಂದು ಹೇಳಿದರು. 

ದೇಶದಲ್ಲಿ ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಪಚಾಂಗ ಹೆಸರಿನ ಮೇಲೆ ಜನರನ್ನು ಎದುರಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಮೂಡನಂಬಿಕೆಗಳ ವಿರುದ್ಧ ಹೋರಾಡ ಮಾಡುವುದು ಅನಿವಾರ್ಯವಾಗಿದೆ. ಆದುದರಿಂದ ವಿದ್ಯಾರ್ಥಿಗಳು ಇವುಗಳ ವಿರುದ್ಧ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು. 

ಅಂಬೇಡ್ಕರ್ ಜಯಂತಿಗಳನ್ನು ದುಂದು ವೆಚ್ಚಗೊಳಿಸಿ ಆಡಬರದಿಂದ ಆಚರಣೆ ಮಾಡುವುದನ್ನು ಬಿಟ್ಟು, ಅವರ ವಿಚಾರಗಳನ್ನು ಸಮಾಜಕ್ಕೆ ಹರಡುವ ಕೆಲಸ ನಡೆಯಬೇಕಾಗಿದ್ದು, ಇದಕ್ಕೆ ವಿದ್ಯಾರ್ಥಿಗಳು ಈ ದೇಶದ ಇತಿಹಾಸವನ್ನು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. 

ಇತ್ತೀಚಿಗೆ ಕೆಲವರು ಅಂಬೇಡ್ಕರ್ ಅವರ ವಿಚಾರಗಳನ್ನು ತಿರುಚ್ಚುವ ಹುನ್ನಾರ ನಡೆಸುತ್ತಿದ್ದಾರೆ ಹಾಗೂ ವಿಶ್ವ ನಾಯಕರಾಗಿರುವ ಅವರನ್ನು ಕೇವಲ ಒಂದು ವರ್ಗಕ್ಕೆ ಮೀಸಲು ಎಂಬ ರೀತಿ ಬಿಂಬಿಸಲು ಹೋರಾಟಿದ್ದಾರೆ. ಇಂತಹ ಕಾಲ ಘಟ್ಟದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಅಂಬೇಡ್ಕರ್ ವಿವಿದೊದ್ದೇಶ ಸಂಘ ಹಾಗೂ ಸಹಕಾರ ಕಳೆದ 6 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿರುವುದು ಶ್ಲಾಘನೀಯ. ಮುಂದಿನ ವರ್ಷದಿಂದ ಈ ಕಾರ್ಯಕ್ರಮಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ತಿಳಿಸಿದರು. 

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ ಸಮಯದಲ್ಲಿ ಎಲ್ಲಾ ದಲಿತರು ಉಚಿತವಾಗಿ ಸಹಕಾರಿ ಸಂಘಗಳಲ್ಲಿ ಸದಸ್ಯತ್ವ ಪಡೆಯಲು ಅನುವು ಮಾಡಿಕೊಟ್ಟಿದ್ದರು. ಸಹಕಾರಿಗಳ ಸಂಘಗಳ ಸವಲತ್ತುಗಳಿಂದ ದಲಿತರು ವಂಚಿತರಾಗಿದ್ದಾರೆ ಎಂದು ಹೇಳಿದರು.

ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಚೈನ್ಯ ದೇಶದ ಪ್ರಗತಿಗೆ ಸಹಕಾರಿ ಸಂಘಗಳೇ ಅತಿ ಮುಖ್ಯ ಕಾರಣವಾಗಿದೆ. ಆದರೆ ನಮ್ಮ ದೇಶದಲ್ಲಿ ಸಹಕಾರಿ ಸಂಘಗಳು ಕಡಿಮೆ ಇರುವ ಕಾರಣ ಅಭಿವೃದ್ಧಿ ಕುಂಟಿತವಾಗಿದೆ ಎಂದು ಹೇಳಿದರು.   

ಕಾರ್ಯಕ್ರಮದಲ್ಲಿ ಸುಮಾರು 500 ವಿದ್ಯಾರ್ಥಿಗಳಿಗೆ ಕಿರುಕಾಣಿಕೆ ನೀಡಿ, ಅಂಬೇಡ್ಕರ್ ಕುರಿತಾದ ಪುಸ್ತಕ, ಒಂದು ಸಾವಿರ ರೂ.ನಗದು ಬಹುಮಾನ ನೀಡಿ ಗೌರವಿಸಲಾಯಿತು. 

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ, ಉರಿಲಿಂಗ ಪೆದ್ದೇಶ್ವರ ಮಠದ ಪೆದ್ದೀಶ್ವರ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ತಿ.ನರಸೀಪುರ ಬೋದಿದತ್ತ ಬಂತೇಜಿ, ಕೊಳ್ಳೆಗಾಲ ಬೋದಿರತ್ನ ಬಂತೇಜಿ, ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ಅಶ್ವಿನ್ ಕುಮಾರ್, ಹರ್ಷವರ್ಧನ್, ಚಾಮರಾಜ ನಗರ ಜಿಪಂ ಅಧ್ಯಕ್ಷೆ ಶಿವಮ್ಮ, ಅಂಕಣಕಾರ ಮಲ್ಕುಂಡಿ ಮಹದೇವಸ್ವಾಮಿ, ಇತಿಹಾಸ ತಜ್ಞ ನಂಜರಾಜೇ ಅರಸ್, ಜಿಪಂ ಸದಸ್ಯರಾದ ಬೋಮ್ಮಯ್ಯ, ಮಂಜುನಾಥ್, ರಾಮದಾಸು, ಸಿದ್ದರಾಜು, ಕಾವ್ಯ, ಮಾಜಿ ಮಹಾಪೌರ ಪುರುಷೋತ್ತಮ್, ಬಹುಜನ ಚಳುವಳಿಯ ಹಿರಿಯ ಮುಖಂಡ ಶಿವಮಲ್ಲು, ಬಿಎಸ್‍ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್, ಎವಿಎಸ್‍ಎಸ್ ಅಧ್ಯಕ್ಷ ತುಂಬಲ ರಾಮಣ್ಣ, ಕಾರ್ಯದರ್ಶಿ ಎಸ್.ಜಗದೀಶ್,  ಎಂ.ಸುರೇಶ್, ನಾಗಯ್ಯ, ನೂತನ್ ಇನ್ನಿತರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News