×
Ad

ಶಿಕ್ಷಕರ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮ: ಪರಿಷತ್ ಸದಸ್ಯ ಭೋಜೇಗೌಡ ಭರವಸೆ

Update: 2018-07-23 19:10 IST

ಮಡಿಕೇರಿ, ಜು.23: ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ವೇತನವನ್ನೇ ಪಡೆಯಲಾಗದಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದನ್ನು ಬಗೆಹರಿಸಲು ಸರ್ಕಾರದ ಗಮನ ಸೆಳೆಯುವುದಾಗಿ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ನೇತೃತ್ವದಲ್ಲಿ ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜ್‍ನಲ್ಲಿ ನಡೆದ ಶಿಕ್ಷಕರ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅನುದಾನಿತ ಪ್ರೌಢಶಾಲೆಗಳಲ್ಲಿ ತರಗತಿಯಲ್ಲಿ 25 ಮಕ್ಕಳು ಇರಲೇಬೇಕೆಂಬ ನಿಯಮವನ್ನು ಸಡಿಲಿಸಬೇಕಾಗಿದೆ. ಈ ಕಾರಣಕ್ಕಾಗಿ ಬೋಧಿಸಿದ ಶಿಕ್ಷಕರ ವೇತನವನ್ನು ತಡೆಹಿಡಿದಿರುವುದು ಉಚಿತವಲ್ಲ. ತಡೆಹಿಡಿಯಲ್ಪಟ್ಟಿರುವ ಶಾಲೆಗಳ ವೇತನವನ್ನು ಬಿಡುಗಡೆ ಮಾಡಲು ಸೂಚಿಸಲಾಗುವುದು. ಗಿರಿಭತ್ಯೆಯನ್ನು ಮಡಿಕೇರಿ ನಗರಕ್ಕೆ ಮಾತ್ರ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಹಿರಿಯ ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಬಹುಪಾಲು ಪ್ರದೇಶ ಗುಡ್ಡಗಾಡಿನಿಂದ ಆವೃತ್ತವಾಗಿದೆ. ಈ ಸೌಲಭ್ಯ ಜಿಲ್ಲೆಯ ಎಲ್ಲ ಶಿಕ್ಷಕರಿಗೂ ವಿಸ್ತರಿಸಬೇಕು. ಎನ್.ಪಿ.ಎಸ್ ಹಾಗೂ ಪಿಂಚಣಿ ವಂಚಿತ ನೌಕರರ ಹೋರಾಟದ ಬಗ್ಗೆ ತಿಳಿದಿದೆ.ಇದನ್ನು ಮೇಲ್ಮಟ್ಟದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದರು.

ಈಗಾಗಲೇ ಪ್ರತಿ ತರಗತಿಯ ವಿದ್ಯಾರ್ಥಿಗಳ ಮಿತಿಯನ್ನು 70 ರಿಂದ 50 ಕ್ಕೆ ಇಳಿಸಲಾಗಿದೆ. 2008 ರ ನಂತರ ನೇಮಕಾತಿ ಹೊಂದಿದವರಿಗೆ ವಿಶೇಷ ಭತ್ಯೆ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ಸಹಶಿಕ್ಷಕರ ಭಡ್ತಿಗೆ ಸಂಬಂಧಿಸಿದಂತೆ ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಶಿಕ್ಷಣ ಇಲಾಖೆಯ ಕಚೇರಿಗಳಿಗೆ ಶಿಕ್ಷಕರು ಭೇಟಿ ಕೊಟ್ಟಾಗ ಅವರನ್ನು ಗೌರವದಿಂದ ಕಾಣುವಂತೆ ಹಾಗೂ ಇಲಾಖೆ ಲಂಚಮುಕ್ತವಾಗಿರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಿಕ್ಷಕರು ಸಮಸ್ಯೆಗಳಿದ್ದಾಗ ತಮ್ಮನ್ನು ನೇರವಾಗಿ ಸಂಪರ್ಕಿಸಲು ಭೋಜೇಗೌಡ ಕರೆ ನೀಡಿದರು.

ಶಿಕ್ಷಕರ ವಿವಿಧ ಸಮಸ್ಯೆಗಳ ಕುರಿತು ಕೊಡಗು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಶೇಖರ್ ಮನವಿ ಸಲ್ಲಿಸಿದರು.ಮಡಿಕೇರಿ ತಾಲೂಕು ಅದ್ಯಕ್ಷ ಮಹಬೂಬ್ ಸಾಬ್, ಕಾರ್ಯದರ್ಶಿ ಪಿ.ಎಸ್ ರವಿಕೃಷ್ಣ ವಿವಿಧ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಪರಿಹರಿಸುವಂತೆ ವಿನಂತಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳ, ಮಡಿಕೇರಿ ಬಿಇಒ ಗಾಯತ್ರಿ, ಸೋಮವಾರಪೇಟೆ ಬಿ.ಇ.ಒ ನಾಗರಾಜಯ್ಯ, ವಿರಾಜಪೇಟೆ ಬಿ.ಇ.ಒ ಲೋಕೇಶ್, ಅಕ್ಷರದಾಸೋಹ ನಿರ್ದೇಶಕ ಪಾಂಡು, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷೆ ಕುಂತಿ ಬೋಪಯ್ಯ, ಪ್ರಭಾರ ಪಿ.ಯು.ಉಪನಿರ್ದೇಶಕ ಕೆಂಚಪ್ಪ ಮೊದಲಾದವರು ವಿವಿಧ ವಿಚಾರಗಳ ಮಾಹಿತಿ ನೀಡಿದರು.

ಪ್ರೌಡಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಹೆಚ್.ಜಿ.ಕುಮಾರ್, ಸೋಮವಾರಪೇಟೆ ಅಧ್ಯಕ್ಷ ಧರ್ಮಪ್ಪ,ವಿರಾಜಪೇಟೆ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಟಿ.ಚಂದನ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸೋಮವಾರಪೇಟೆ ಕಾರ್ಯದರ್ಶಿ ನಾಗರಾಜು ನಿರೂಪಿಸಿದರು, ನಿರ್ದೇಶಕ ದಯಾನಂದ ಪ್ರಕಾಶ್ ನಿರೂಪಿಸಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಮನೋಹರ ನಾಯ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News