ಮಡಿಕೇರಿ: ಜಿಲ್ಲಾ ಮಟ್ಟದ 'ಆಟಿ-ನಾಟಿ ಕೂಡುಕೂಟ' ಕಾರ್ಯಕ್ರಮ
ಮಡಿಕೇರಿ, ಜು. 23: ಕೊಡಗಿನಲ್ಲಿ ಮಳೆಯ ತೀವ್ರತೆ ನಡುವೆ ಆಟಿ (ಕಕ್ಕಡ) ಮಾಸದ ಚಳಿಗಾಳಿಯ ನಡುವೆ, ಇಲ್ಲಿಗೆ ಸಮೀಪದ ದೇವಸ್ತೂರು ಗ್ರಾಮದಲ್ಲಿ ಚಿಣ್ಣರ ಸಹಿತ ಆಬಾಲವೃದ್ಧರಾದಿಯಾಗಿ ಚಳಿ ಗಾಳಿಯೊಂದಿಗೆ ಕೆಸರಿನೊಳು ಕಲೆತು - ಬೆರೆತು ಕ್ರೀಡಾ ಸ್ಫೂರ್ತಿ ಮೆರೆದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕುಕ್ಕೇರ ಕುಟುಂಬಸ್ಥರ ಸಹಯೋಗದಲ್ಲಿ ದೇವಸ್ತೂರು ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 'ಆಟಿ-ನಾಟಿ ಕೂಡುಕೂಟ' ಕಾರ್ಯಕ್ರಮದಲ್ಲಿ ಮೈನವೀರೆಳಿಸುವ ಸ್ಪರ್ಧೆಗಳು ನಡೆದವು.
ಬೆಳಿಗ್ಗೆಯಿಂದ ಸಂಜೆಯ ತನಕ ಜರುಗಿದ ಫೈಪೋಟಿಗಳಲ್ಲಿ ಕೊಡಗಿನ ಜಾನಪದ ಸೊಗಡುವಿನೊಂದಿಗೆ ಭಾಷಾ ಸಂಸ್ಕೃತಿಗೆ ಭದ್ರ ಬುನಾದಿಯಾಗಿರುವ ಕೃಷಿ ಕಾರ್ಯ ಸಹಿತ ವಿನೂತನ ಕ್ರೀಡೆಗಳೊಂದಿಗೆ ಪೈಪೋಟಿಯು ನೋಡುಗರ ಕಣ್ಮನ ಸೂರೆಗೊಂಡಿತು. ಕುಕ್ಕೇರ ಕುಟುಂಬದ ಪಳಂಗಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಅದೇ ಕುಟುಂಬದ ಪಟ್ಟೆದಾರ ಕುಕ್ಕೇರ ತಮ್ಮಯ್ಯ ಚಾಲನೆ ನೀಡಿದರು.
ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ಅಧ್ಯಕ್ಷತೆಯೊಂದಿಗೆ ಸ್ಪರ್ಧೆಗಳಿಗೆ ಶುಭ ಕೋರಿದರು.
ಸಮಾರೋಪ: ಸಂಜೆ ಜರುಗಿದ ಸಮಾರೋಪ ಸಮಾರಂಭದ ನಡುವೆ ಕೆಸರು ಗದ್ದೆಯಲ್ಲಿ ಹಿಂದಕ್ಕೆ ನಡೆಯುವ ಸ್ಪರ್ಧೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಅಂಬುಗಾಯಿ ಸ್ಪರ್ಧೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿ ಮಾತನಾಡಿದರು.
ಪರಂಪರೆ ಉಳಿಸಲು ಕರೆ: ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಹಿಂದೆ ಎಲ್ಲರೂ ನಾಟಿ ಕೃಷಿ ಮಾತಡಿ ಮುಂಗಾರುವಿನಲ್ಲಿ ಪ್ರತಿ ಕುಟುಂಬದಲ್ಲಿ ದೊಡ್ಡ ಗದ್ದೆ ಓಟದೊಂದಿಗೆ ಕ್ರೀಡಾಸ್ಫೂರ್ತಿ ಮೆರೆಯುತ್ತಿದ್ದುದಾಗಿ ನೆನಪಿಸುತ್ತಾ, ಅಂತಹ ಪರಂಪರೆಯನ್ನು ಈ ಮೂಲಕ ಉಳಿಸಿಕೊಳ್ಳುವಂತೆ ಕರೆ ನೀಡಿದರು.
ಆ ದಿಸೆಯಲ್ಲಿ ಅರೆಭಾಷೆ ಅಕಾಡೆಮಿ ಚಟುವಟಿಕೆಗಳನ್ನು ಶ್ಲಾಘಿಸಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಭಾಷೆ, ಸಂಸ್ಕೃತಿ, ನಾಂಗಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗಳ ಬೆಳವಣಿಗೆಗೆ ಎಲ್ಲಾ ರೀತಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವಿದ್ಯಾವಂತರಾಗಲು ಕರೆ: ಕೊಡಗಿನವರೇ ಆಗಿರುವ ಕೋಲಾರ ಜಿಲ್ಲಾ ಅಬಕಾರಿ ಉಪ ಆಯುಕ್ತೆ ನಂಗಾರು ಸುಮಿತ ಲಿಂಗರಾಜು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ, ತನ್ನ ತವರು ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೆಮ್ಮೆ ಎಂದರಲ್ಲದೆ, ಜನಾಂಗದ ಮಕ್ಕಳು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಸ್ಥಾನಮಾನಗಳಿಗೆ ಏರುವಂತೆ ತಿಳಿ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪಿ.ಸಿ. ಜಯರಾಂ ಮಾತನಾಡಿ ಶಾಸಕರು, ಸರಕಾರದ ಸಹಕಾರದಿಂದ ಇನ್ನು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಆಶ್ವಾಸನೆಯೊಂದಿಗೆ ಐದು ವರ್ಷಗಳಲ್ಲಿ ಈ ಅಕಾಡೆಮಿ ನಡೆದು ಬಂದಿರುವ ಕುರಿತು ಮಾಹಿತಿ ನೀಡಿದರು.
ಪಟ್ಟಡ ಶಿವಕುಮಾರ್ ಹಾಗೂ ಕಡ್ಲೇರ ತುಳಸಿ ಮೋಹನ್ ನಿರೂಪಿಸಿ, ಕಾನೆಹಿತ್ಲು ಮೊಣ್ಣಪ್ಪ ಸ್ವಾಗತಿಸಿದರು. ಪ್ರೇಮಾ ರಾಘವಯ್ಯ ಪ್ರಾರ್ಥಿಸಿದರು. ತಾ. ಪಂ. ಸದಸ್ಯ ರಾಯ್ ತಮ್ಮಯ್ಯ, ಗಾಳಿಬೀಡು ಗ್ರಾ. ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ, ಸದಸ್ಯ ಪ್ರದೀಪ್, ಪ್ರಮುಖರಾದ ಲಕ್ಷ್ಮಣ, ಅರವಿಂದ, ಹಿರಿಯರಾದ ಮೊಣ್ಣಪ್ಪ ಗೌಡ, ಕಟ್ಟೆಮನೆ ಸೋನಾಜಿತ್, ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಗಣಾಧಿಕಾರಿ ಕೆ.ಟಿ. ವಿಶ್ವನಾಥ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ನಿವೃತ್ತ ಮುಖ್ಯೋಪಾಧ್ಯಯ ಬಿ.ಆರ್. ಜೋಯಪ್ಪ ವಂದಿಸಿದರು.