ಏಕಕಾಲದ ಚುನಾವಣೆಗಳ ಮಾತಿನ ಹಿಂದಿರುವ ರಾಜಕೀಯ ಕಾರಣಗಳು

Update: 2018-07-23 18:31 GMT

ಪ್ರಧಾನಮಂತ್ರಿಯವರ ಈ ಆಶಯದ ಹಿಂದೆ ಗುಣಾತ್ಮಕ ಆಡಳಿತ ನೀಡಬೇಕೆಂಬ ಉದ್ದೇಶಕ್ಕಿಂತ ಹೆಚ್ಚಾಗಿ ಲೋಕಸಭೆಯನ್ನೂ ಒಳಗೊಂಡಂತೆ ದೇಶದ ಎಲ್ಲ ರಾಜ್ಯಗಳಲ್ಲಿಯೂ ಭಾಜಪವೇ ಗೆದ್ದು ಅಧಿಕಾರ ಹಿಡಿಯ ಬೇಕೆಂಬ ದುರುದ್ದೇಶ ಇದೆ. 2014ರಲ್ಲಿ ಸೃಷ್ಟಿ ಮಾಡಿದಂತಹ ಕೃತಕ ಅಲೆಯೊಂದನ್ನು ಸೃಷ್ಟಿ ಮಾಡಿ ಅದರ ಲಾಭ ಪಡೆಯುವುದು ಅವರ ಉದ್ದೇಶವಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಆಡಳಿತವಿದ್ದಲ್ಲಿ ಅಭಿವೃದ್ಧಿಯು ತೀವ್ರಗತಿಯಲ್ಲಿ ಆಗುತ್ತದೆಯೆಂಬ ಭ್ರಮೆಯನ್ನು ಜನರಲ್ಲಿ ಬಿತ್ತುವುದು ಸುಲಭವಾಗುತ್ತದೆ.


ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂಬ ಹೇಳಿಕೆ ನೀಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಮಟ್ಟದ ಚರ್ಚೆಯೊಂದಕ್ಕೆ ಮತ್ತೊಮ್ಮೆ ನಾಂದಿ ಹಾಡಿದ್ದಾರೆ.

ಯಾವುದೋ ಚುನಾವಣೆಯ ಪ್ರಚಾರಸಭೆಯಲ್ಲಿಯೋ, ಅಥವಾ ಖಾಸಗಿ ಸಮಾರಂಭಗಳಲ್ಲಿ ಪ್ರಧಾನಿಯವರು ಈ ಮಾತನ್ನಾಡಿದ್ದರೆ ನಾವು ನಿರ್ಲಕ್ಷಿಸಬಹುದಿತ್ತು. ಆದರೆ ಇತ್ತೀಚೆಗೆ ನೀತಿ ಆಯೋಗದ ಸಭೆಯ ಸಮಾರೋಪ ಸಮಾರಂಭದಲ್ಲಿ ದೇಶದ ಹಲವಾರು ಮುಖ್ಯಮಂತ್ರಿಗಳ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಈ ಮಾತುಗಳನ್ನು ಆಡಿರುವುದರಿಂದ ಅದಕ್ಕೊಂದು ಮಾನ್ಯತೆ ಬಂದಿದೆ. ಜೊತೆಗೆ ರಾಜಕೀಯ ಪಕ್ಷಗಳೂ ಸೇರಿದಂತೆ ಚುನಾವಣಾ ತಜ್ಞರು, ವಿವಿಧ ಕ್ಷೇತ್ರಗಳ ಪರಿಣಿತರು ಈ ವಿಷಯದ ಮೇಲೆ ಚರ್ಚೆ ನಡೆಸಲೇ ಬೇಕಾದ ಅನಿವಾರ್ಯ ಬಂದೊದಗಿದೆ. 2016ರಲ್ಲಿ ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ಇಂತಹದೊಂದು ಶಿಫಾರಸನ್ನು ಮಾಡಿತ್ತು. ಅಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಇಂತಹದೊಂದು ಅನಿಸಿಕೆಯನ್ನು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೆ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮನಗಂಡವರು ಯಾರೂ ಅದರ ಬಗ್ಗೆ ಅಷ್ಟೊಂದು ಗಂಭೀರವಾಗೇನು ಚರ್ಚೆ ಮಾಡಲು ಹೋಗಿರಲಿಲ್ಲ..
 ಆದರೆ ಇದೀಗ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಮಂತ್ರಿಯವರು ಅಧಿಕೃತವಾಗಿಯೇ ಈ ಮಾತನ್ನು ಹೇಳಿರುವುದರಿಂದ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ತಿಳಿಯುವುದರ ಜೊತೆಗೆ ಆ ಬಗ್ಗೆ ಚರ್ಚೆ ನಡೆಸಬೇಕಾಗಿರುವುದು ಅತ್ಯಗತ್ಯವಾಗಿದೆ. ಯಾಕೆಂದರೆ ಕಾನೂನು ಸಚಿವಾಲಯವೇ ಹೇಳಿದಂತೆ ಇದಕ್ಕೆ ದೇಶದ ಎಲ್ಲ ರಾಜಕೀಯ ಪಕ್ಷಗಳ ಸಮ್ಮತಿ ಬೇಕಾಗುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ನಮ್ಮ ರಾಜಕೀಯ ಪಕ್ಷಗಳು ಮಾತಾಡಿರುವುದು ಇದು ಹೊಸದೇನಲ್ಲ. ಆದರೆ ಇದರ ಹಿಂದಿನ ರಾಜಕೀಯ ಉದ್ದೇಶಗಳನ್ನು ಚರ್ಚಿಸುವ ಮೊದಲು ನಮ್ಮ ಚುನಾವಣೆಗಳು ನಡೆಯುತ್ತಿದ್ದ ಮತ್ತು ನಡೆಯುತ್ತಿರುವ ರೀತಿಗಳನ್ನು ಸ್ವಲ್ಪಹಿಂದಕ್ಕೆ ಹೋಗಿ ನೋಡೋಣ:

1968ರವರೆಗೂ ರಾಷ್ಟ್ರದ ಸಂಸತ್ತು ಹಾಗೂ ವಿಧಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದ್ದು, ಇವತ್ತಿನ ಹಾಗೆ ರಾಜಕೀಯ ಪ್ರಕ್ಷುಬ್ಧತೆಯ ವಾತಾವರಣವಿರಲಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಕೇಂದ್ರವನ್ನು ಒಳಗೊಂಡಂತೆ ಬಹುತೇಕ ರಾಜ್ಯಗಳಲ್ಲಿ ನಿರಾತಂಕವಾಗಿ ದೊಡ್ಡ ಮಟ್ಟದ ವಿರೋಧಪಕ್ಷಗಳ ಕಾಟವಿರದೆ ಆಡಳಿತ ನಡೆಸುತ್ತಿತ್ತು. ಆ ನಂತರದಲ್ಲಿ ನಡೆದ ಹಲವು ರಾಜಕೀಯ ವಿದ್ಯಮಾನಗಳು ನಮ್ಮ ಚುನಾವಣಾ ವ್ಯವಸ್ಥೆಯನ್ನೇ ಬದಲಾಯಿಸಿಬಿಟ್ಟವು.

1967ರ ಹೊತ್ತಿಗೆ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಸತತವಾಗಿ ಆಡಳಿತ ನಡೆಸುತ್ತ ಬಂದಿದ್ದ ಕಾಂಗ್ರೆಸ್‌ನ ಬಗ್ಗೆ ಜನರಿಗೆ ಏಕತಾನತೆ ಮೂಡಿತ್ತು. ಇದೇ ಸಮಯದಲ್ಲಿ ಸಮಾಜವಾದಿ ಚಿಂತನೆಗಳು ರಾಷ್ಟ್ರದಾದ್ಯಂತ ತೀವ್ರವಾಗಿ ಹಬ್ಬುತ್ತಿದ್ದು ರಾಮಮನೋಹರ್ ಲೋಹಿಯಾರಂತಹವರು ಸಮಾಜವಾದಿ ಚಳವಳಿಯ ಮುಂಚೂಣಿಯಲ್ಲಿ ನಿಂತಿದ್ದರು. ‘‘ಕಾಂಗ್ರೆಸ್ ಹೊರತಾದ ಸರಕಾರಗಳು ನಮಗೆ ಬೇಕು’’ ಎನ್ನುವ ಲೋಹಿಯಾರವರ ಘೋಷಣೆ ಕೆಲರಾಜ್ಯಗಳಲ್ಲಿ ತನ್ನ ಪ್ರಭಾವ ಬೀರತೊಡಗಿತ್ತು.

ನಿರಂತರವಾಗಿ ಕಾಂಗ್ರೆಸ್‌ನ ಆಡಳಿತವನ್ನು ಅನುಭವಿಸುತ್ತ ಬಂದಿದ್ದ ಜನತೆಗೆ ಬದಲಾವಣೆಯ ಅಗತ್ಯವೊಂದು ಕಂಡುಬಂದಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಹಾಗಾಗಿಯೇ 1967ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲಬಾರಿಗೆ ದೇಶದ ಎಂಟು ರಾಜ್ಯಗಳಲ್ಲಿ ಕಾಂಗ್ರೆಸ್ ಮೊತ್ತಮೊದಲ ಬಾರಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು. ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಜನಸಂಘ, ಎಡಪಕ್ಷಗಳು ಸೇರಿದಂತೆ ಅನೇಕ ಸಣ್ಣಪುಟ್ಟ ಪಕ್ಷಗಳು ಸೇರಿ ಸಂಯುಕ್ತ ವಿದಾಯಕ ದಳದ ಹೆಸರಲ್ಲಿ ರಾಜ್ಯಗಳ ಅಧಿಕಾರ ಹಿಡಿದವು. ಆದರೆ ಅಪರೂಪಕ್ಕೆ ಅಧಿಕಾರ ಹಿಡಿದ ಈ ಪುಡಿಪಕ್ಷಗಳ ನಾಯಕರಿಗೆ ಅಧಿಕಾರ ನಡೆಸಿಯಾಗಲಿ, ಇಲ್ಲ ರಾಜಕೀಯ ಭಿನ್ನಮತಗಳನ್ನು ಸಂಭಾಳಿಸಿ ಆಡಳಿತ ನಡೆಸುವುದಾಗಲಿ ಗೊತ್ತಿರಲಿಲ್ಲ. ಸಹಜವಾಗಿಯೇ ಈ ಮೈತ್ರಿಕೂಟಗಳು ಒಳಜಗಳಗಳಿಂದ ತತ್ತರಿಸಿದವು. ಮೊದಲೇ ಕಾಂಗ್ರೆಸೇತರ ಪಕ್ಷಗಳ ಬಗ್ಗೆ ತೀವ್ರತರ ಅಸಹನೆ ಹೊಂದಿದ್ದ ಕಾಂಗ್ರೆಸ್ ಇದನ್ನು ಬಳಸಿಕೊಂಡು 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಆ ರಾಜ್ಯಸರಕಾರಗಳನ್ನು ವಜಾ ಮಾಡಿ ವಿಧಾನಸಭೆಗಳನ್ನು ವಿಸರ್ಜಿಸಿತು. ಇದರಿಂದಾಗಿ ಮೊದಲಬಾರಿಗೆ ಬೇರೆಬೇರೆ ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳು ಬೇರೆ ಬೇರೆ ಸಮಯದಲ್ಲಿ ನಡೆಯಬೇಕಾಗಿ ಬಂತು. ಇದು ಅದುವರೆಗೂ ನಡೆದುಕೊಂಡು ಬಂದಿದ್ದ ನಿಶ್ಚಿತ ಮತ್ತು ನಿರ್ಧಾರಿತ ಚುನಾವಣಾ ವೇಳಾ ಪಟ್ಟಿಯನ್ನು ಬದಲಾಯಿಸಿಬಿಟ್ಟಿತು.

ಆದರೆ ಈ ರೀತಿಯಾಗಿ 356ನೇ ವಿಧಿಯನ್ನು ದುರ್ಬಳಕೆ ಮಾಡುವ ಕೇಂದ್ರ ಸರಕಾರದ ಈ ಕ್ರಮವನ್ನು ವಿರೋಧಿಸುತ್ತಲೇ ಬಂದ ವಿರೋಧಪಕ್ಷಗಳು ಅವತ್ತಿನ ಬಲಿಷ್ಠ ಕೇಂದ್ರ ಸರಕಾರದ ವಿರುದ್ಧ (ಇಂದಿರಾಗಾಂಧಿಯವರು ಅಂದಿನ ಪ್ರಧಾನಮಂತ್ರಿಯಾಗಿದ್ದರು.) ಪ್ರತಿಭಟಿಸಿದರೂ ಉಪಯೋಗವಾಗಲಿಲ್ಲ. ವಿಪರ್ಯಾಸವೆಂದರೆ ತುರ್ತುಪರಿಸ್ಥಿತಿಯನ್ನು ವಿರೋಧಿಸಿ 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರಕಾರವು ಸಹ ಇದೇ ಪರಿಪಾಠವನ್ನು ಮುಂದುವರಿಸಿತು. ಆನಂತರ 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿಯವರು ಸಹ ವಿರೋಧಪಕ್ಷಗಳ ರಾಜ್ಯಸರಕಾರಗಳನ್ನು ಕಿತ್ತೊಗೆಯುವ ರಾಜಕಾರಣವನ್ನೇ ಮುಂದುವರಿಸಿದರು. ಈ ಎಲ್ಲ ಬೆಳವಣಿಗೆಗಳಿಂದಾಗಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಗಳು ಬದಲಾಗುತ್ತ ಹೋದವು.

 ಇಂತಹ ಬೆಳವಣಿಗೆಗಳು ವಿಧಾನಸಭೆಗಳ ಚುನಾವಣೆಗಳನ್ನೂ ಮೀರಿ ಸಂಸತ್ತಿನ ಚುನಾವಣೆಗಳಿಗೂ ವ್ಯಾಪಿಸುತ್ತ ಹೋದವು. ಎಂಬತ್ತರ ದಶಕದಲ್ಲಿ ದೇಶದಲ್ಲಾದ ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯವರ ಹತ್ಯೆಗಳು ಸಂಸತ್ತನ್ನು ಅವಧಿಗೆ ಮುನ್ನ ವಿಸರ್ಜನೆಯಾಗುವಂತೆ ಮಾಡಿದವು. ನಂತರದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯತೊಡಗಿದ ಮೈತ್ರಿಕೂಟಗಳ ಸರಕಾರಗಳು ತಮ್ಮ ಕಿತ್ತಾಟಗಳಿಂದ ಅವಧಿ ಪೂರೈಸಲಾಗದೆ ವಿಸರ್ಜನೆಯಾಗತೊಡಗಿದವು. ಅಲ್ಲಿಂದ ಇಲ್ಲಿಯವರೆಗೂ ಯಾವ ನಿಶ್ಚಿತ ವೇಳಾಪಟ್ಟಿಯ ಹಂಗಿರದೆ ರಾಜಕೀಯ ಪಕ್ಷಗಳ ಕಿತ್ತಾಟಗಳು ಮತ್ತು ಹುಚ್ಚಾಟಗಳ ರಾಜಕಾರಣಗಳಿಂದ ಯಾವಾಗೆಂದರೆ ಆಗ ಚುನಾವಣೆಗಳು ನಡೆಯುತ್ತಿವೆ. 1969ರ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಅಲ್ಲದೆ ಎಪ್ಪತ್ತು ಮತ್ತು ಎಂಬತ್ತರ ದಶಕಗಳ ರಾಜಕೀಯ ಪರಿಸ್ಥಿತಿಗಳಿಗೂ ಈಗಿನ ರಾಜಕೀಯ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸಗಳಿವೆ.

ಈ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರಿಂದ ಆಗಬಹುದಾದ ಒಳಿತು ಕೆಡುಕುಗಳನ್ನು ಚರ್ಚಿಸುವುದಕ್ಕಿಂತ ಮೊದಲು ಇದರ ಹಿಂದಿರಬಹುದಾದ ರಾಜಕೀಯ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವೆನಿಸುತ್ತದೆ.

ಭಾಜಪದ ನಡೆಯ ಹಿಂದಿನ ರಾಜಕೀಯ ಕಾರಣಗಳು!
 ಭಾಜಪ ಒಂದು ರಾಜಕೀಯ ಪಕ್ಷವಾಗಿ ಮತ್ತು ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ರಾಷ್ಟ್ರದಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂದು ಬಯಸುತ್ತಿರುವುದರ ಹಿಂದಿನ ಕಾರಣಗಳನ್ನು ಸಹ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಯಾಕೆಂದರೆ 1999ರಲ್ಲಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದ ಸಮಯದಲ್ಲಿಯೇ ಅಂದಿನ ರಾಷ್ಟ್ರೀಯ ಕಾನೂನು ಆಯೋಗವು ಇಂತಹ ಮಾತನಾಡುತ್ತ 1969ಕ್ಕೂ ಮುಂಚೆಯಿದ್ದ ವ್ಯವಸ್ಥೆಯ ಮಾದರಿಯಲ್ಲಿಯೇ ಚುನಾವಣೆಗಳನ್ನು ನಡೆಸುವುದು ಸೂಕ್ತವೆಂದು ಸರಕಾರಕ್ಕೆ ಸಲಹೆ ನೀಡಿತ್ತು. ವಿಶೇಷವೆಂದರೆ ಹೀಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ವಿಷಯ ಹಿಂದೆಯೂ ಚರ್ಚೆಗೆ ಬಂದಿದ್ದು ಮತ್ತು ಈಗಲೂ ಬರುತ್ತಿರುವುದು ಕೇಂದ್ರದಲ್ಲಿ ಭಾಜಪದ ಸರಕಾರಗಳು ಇದ್ದಾಗಲೇ ಎನ್ನುವುದು ಗಮನಾರ್ಹ! ಇದರ ಹಿಂದಿರುವುದು ಅಪ್ಪಟ ರಾಜಕೀಯವೆನ್ನುವುದು ಇದರಿಂದಲೇ ಅರ್ಥವಾಗುತ್ತದೆ!

ಪ್ರಧಾನಮಂತ್ರಿಯವರ ಈ ಆಶಯದ ಹಿಂದೆ ಗುಣಾತ್ಮಕ ಆಡಳಿತ ನೀಡಬೇಕೆಂಬ ಉದ್ದೇಶಕ್ಕಿಂತ ಹೆಚ್ಚಾಗಿ ಲೋಕಸಭೆಯನ್ನೂ ಒಳಗೊಂಡಂತೆ ದೇಶದ ಎಲ್ಲ ರಾಜ್ಯಗಳಲ್ಲಿಯೂ ಭಾಜಪವೇ ಗೆದ್ದು ಅಧಿಕಾರ ಹಿಡಿಯ ಬೇಕೆಂಬ ದುರುದ್ದೇಶವೇ ಇದೆ. 2014ರಲ್ಲಿ ಸೃಷ್ಟಿ ಮಾಡಿದಂತಹ ಕೃತಕ ಅಲೆಯೊಂದನ್ನು ಸೃಷ್ಟಿ ಮಾಡಿ ಅದರ ಲಾಭ ಪಡೆಯುವುದು ಅವರ ಉದ್ದೇಶವಾಗಿದೆ. ಕೆಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಆಡಳಿತವಿದ್ದಲ್ಲಿ ಅಭಿವೃದ್ಧಿಯು ತೀವ್ರಗತಿಯಲ್ಲಿ ಆಗುತ್ತದೆಯೆಂಬ ಭ್ರಮೆಯನ್ನು ಜನರಲ್ಲಿ ಬಿತ್ತುವುದು ಸುಲಭವಾಗುತ್ತದೆ.

Similar News