ನಾಗಮಂಗಲ: ರಸ್ತೆ ಅಪಘಾತಕ್ಕೆ ಓರ್ವ ಮೃತ್ಯು; ಮೂವರಿಗೆ ಗಂಭೀರ ಗಾಯ

Update: 2018-07-24 17:59 GMT

ನಾಗಮಂಗಲ,ಜು.24: ಕೋಳಿ ಮರಿ ತುಂಬಿದ್ದ ಅಶೋಕ್ ಲೈಲ್ಯಾಂಡ್ ಮಿನಿ ಸರಕು ವಾಹನ ಮತ್ತು ಇಂಡಿಕಾ ಕಾರಿನ ನಡುವೆ ಮುಖಾಮುಖಿ ಢಿಕ್ಕಿಯಾಗಿ ಓರ್ವ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ರಸ್ತೆಯ ಬಳಪದಮಂಟಿ ಕೊಪ್ಪಲು ಬಳಿ ಅಮ್ಮನಕಟ್ಟೆ ತಿರುವಿನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕಾರಿನಲ್ಲಿದ್ದ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಜಡೆಮಾಯಸಂದ್ರದ ಅಝ್ಗರ್ ಅಹ್ಮದ್ (70) ಸಾವನ್ನಪ್ಪಿದ್ದು, ಇವರ ಪತ್ನಿ ಮನಿಷಾ ಭಾನು ಹಾಗೂ ಕ್ಯಾಂಟರ್ ಚಾಲಕ ರೆಹಮಾನ್ ಶರೀಫ್, ಮತ್ತೊಬ್ಬರು ಗಾಯಗೊಂಡವರಾಗಿದ್ದಾರೆ.   

ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಪಟ್ಟಣದ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಅಝ್ಗರ್ ಅಹಮ್ಮದ್ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಕುಟುಂಬವು ಇಂಡಿಕಾ ಕಾರಿನಲ್ಲಿ ಮಂಡ್ಯದಲ್ಲಿ ಸಂಬಂಧಿಕರೊಬ್ಬರ ಮನೆಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಕೋಳಿ ಮರಿ ತುಂಬಿದ್ದ ಮಿನಿ ಕ್ಯಾಂಟರ್ ನಾಗಮಂಗಲ ಕಡೆಗೆ ಹೋಗುತ್ತಿತ್ತು.

ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News